ಕನ್ನಡ ವಿಶ್ವವಿದ್ಯಾಲಯ ಭುವನವಿಜಯ ಸಭಾಂಗಣದಲ್ಲಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೨೫ನೇ ಜನ್ಮದಿನಾಚರಣೆಯ ಸ್ಮರಣಾರ್ಥ ಏರ್ಪಡಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆಯ ಸಮಾರಂಭದಲ್ಲಿ ಭಾರತ ಸಂವಿಧಾನ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಪರಮಶ್ರೇಷ್ಠ ಸಂವಿಧಾನದ ದುರ್ಬಳಕೆಯನ್ನು ತಡೆಯುವುದೇ ನಾವೆಲ್ಲ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತೆ ಎಂದು ಕಾನೂನು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳು ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥರಾದ ಪ್ರೊ.ಜೆ.ಎಸ್.ಪಾಟೀಲ್ ಅವರು ನುಡಿದರು.
ಸರ್ಕಾರದ ರಚಿಸಿದ್ದ ನ್ಯಾಯಮೂರ್ತಿ ಎಮ್.ಎನ್.ವೆಂಕಟಾಚಲಯ್ಯ ಏಕವ್ಯಕ್ತಿ ಸಮಿತಿಯು ಇಡೀ ಸಂವಿಧಾನದ ಪುನರ್ ವಿಮರ್ಶೆಯ ವರದಿಯನ್ನು ಸಲ್ಲಿಸಿತು. ಅದನ್ನು ಹೋರಾಟದ ಮೂಲಕ ತಡೆಯಲಾಯಿತು. ಕಾರ್ಮಿಕರಿಗೆ ಸಂಬಂಧಿಸಿದ ೬೭ ಕಾನೂನುಗಳನ್ನು ಸರಳೀಕರಿಸಿ ಕೇವಲ ೫ ಕೋಡ್ ಮಾಡಲು ಹೊರಟಿದ್ದ ಹುನ್ನಾರವನ್ನು ದೇಶದ ೧೧ ಟ್ರೇಡ್ ಯೂನಿಯನ್ಗಳು ತಡೆದವು. ಆದರೆ ಇದಕ್ಕೆ ಇನ್ನೂ ಪೂರ್ಣವಾದ ಯಶಸ್ಸು ದೊರೆತಿಲ್ಲ ಎಂದ ಅವರು ಹೀಗೆ ತಿದ್ದುವ ನೆಪದಲ್ಲಿ ಸಂವಿಧಾನವನ್ನು ತಿರುಚುವ ಕೆಲಸದ ವಿರುದ್ಧ ಎಲ್ಲರೂ ದನಿ ಎತ್ತಬೇಕು ಎಂದರು.
ಸಂವಿಧಾನವನ್ನು ತಿದ್ದುಪಡಿ ಮಾಡುವ ಅವಕಾಶ ಕಲ್ಪಿಸಿರುವುದರಿಂದ ಒಟ್ಟು ೯೮ ಸಲ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸುತ್ತ, ಸರ್ಕಾರವು ರಾಜ್ಯನೀತಿ ನಿರ್ದೇಶಕ ತತ್ವದ ಅಡಿಯಲ್ಲಿ ಇದ್ದ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಪರಿವರ್ತಿಸಿದೆ. ಮಕ್ಕಳಿಗೆ ಶಿಕ್ಷಣ ಕೊಡುವುದು ಪಾಲಕರು ಮತ್ತು ಆಡಳಿತದ ಜವಾಬ್ದಾರಿ. ಆದರೆ ಸರ್ಕಾರ ಮಕ್ಕಳಿಗೆ ಮೂಲಭೂತ ಹಕ್ಕು ಎಂದು ನೀಡಿರುವುದು ಸಮಂಜಸವೇ? ಎಂದು ಪ್ರಶ್ನಿಸುತ್ತ, ಕಾನೂನಿನ ಮೂಲಕ ಸರ್ಕಾರಗಳು ನಿರ್ಧಾರ ಮಾಡಿದ ಹಾಗೆ ಪ್ರತಿಯೊಂದು ಮಗು ಶಿಕ್ಷಣ ಪಡೆಯುವ ಮೂಲಭೂತ ಹಕ್ಕನ್ನು ಹೊಂದಿರುತ್ತದೆ. ಈ ರೀತಿಯ ಭಾಷೆ ಉಪಯೋಗಿಸಿ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ವಿಷಾದಿಸಿದರು.
ಅಂಬೇಡ್ಕರ್ ರಚಿಸಿಕೊಟ್ಟ ಸಂವಿಧಾನದ ಕರಡಿನ ಕುರಿತು ೩ ವರ್ಷಗಳ ಕಾಲ ಸುದೀರ್ಘ ಚರ್ಚೆ ನಡೆಯಿತು. ಇದರ ನಡಾವಳಿಗಳು ಆರು ಸಂಪುಟಗಳಿಲ್ಲಿವೆ ಎಂದರು. ಕಠಿಣ ಪರಿಶ್ರಮಿಯಾದ ಅಂಬೇಡ್ಕರ್ ವರ್ಗೀಕರಣಗೊಂಡ ಸಮಾಜದ ಜಡತ್ವ ಹೋಗಲಾಡಿಸಲು, ಬಡತನ ದಾರಿದ್ರ್ಯ ಶೋಷಣೆಯ ಬೇರುಗಳನ್ನು ಹೊಸಕಿ ಹಾಕಲು ಚಿಂತಿಸಿದ್ದರು. ಅದಕ್ಕಾಗಿ ಸಂಸ್ಕೃತ ಭಾಷೆ ಕಲಿತು ವೇದ ಉಪನಿಷತ್ತುಗಳನ್ನು ಅಧ್ಯಯನ ಮಾಡಿದರು. ಅನ್ಹಿಲೇಷನ್ ಆಫ್ ಕಾಸ್ಟ್ ಪುಸ್ತಕ ಬರೆದರು. ಭಾರತದ ಸಂಕೀರ್ಣ ಸಮಾಜಕ್ಕೆ ಅನ್ವಯಿಸುವಂತಹ ಕಷ್ಟಕರವಾದ ಸಂವಿಧಾನ ರಚನೆಯ ಕೆಲಸವನ್ನು ಬಹಳ ಸಮರ್ಪಣೆಯ ಮನೋಭಾವದಿಂದ ಮುಗಿಸಿಕೊಟ್ಟರು ಎಂದು ಉಪನ್ಯಾಸದಲ್ಲಿ ತಿಳಿಸಿದರು. ಕೊನೆಗೆ ಒಂಚೂರು ಧೈರ್ಯ, ಒಂಚೂರು ಪ್ರಯತ್ನ ಮಾಡಿದರೆ ನಾವೆಲ್ಲ ದೇಶವನ್ನು ಸುಂದರಗೊಳಿಸಲು ಸಾಧ್ಯವಿದೆ ಎಂದು ಕಿವಿಮಾತು ಹೇಳಿದರು.