ಶಂಬಾಜೋಶಿಯವರು ಬ್ರಾಹ್ಮಣರಾದರೂ ಜಾತಿಗಡಿಗಳನ್ನು ಮೀರಿ ಚಿಂತಿಸಬಲ್ಲವರಾಗಿದ್ದರು. ಅವರಿಗೆ ಇತರೆ ಸಿದ್ಧಾಂತಗಳ ಕುರಿತು ಮಡಿವಂತಿಕೆಯಿರಲಿಲ್ಲ. ಅವರು ಏಂಗೇಲ್ಸ್, ಹೆಗೆಲ್ರಿಂದ ಋಗ್ವೇದಶಾಸ್ತ್ರಗಳವರೆಗೂ ಓದುತ್ತಿದ್ದರು. ಓದುವುದಕ್ಕಾಗಿ ಮಾತ್ರ ಅವರು ಓದಲಿಲ್ಲ. ಅವರಿಗೆ ಇರುವ ಕುತೂಹಲ ಮನೋಭಾವ ಅಧ್ಯಯನಕಾರರಿಗೆ ಬರಬೇಕು ಎಂದು ಡಾ. ಬಂಜಗೆರೆ ಜಯಪ್ರಕಾಶ ಅವರು ಯುವಸಂಶೋಧಕರನ್ನು ಉದ್ದೇಶಿಸಿ ಮಾತನಾಡಿದರು.
ಕನ್ನಡ ವಿಶ್ವವಿದ್ಯಾಲಯ ಅಧ್ಯಯನಾಂಗ ಮತ್ತು ಶಂಬಾಜೋಶಿ ಅಧ್ಯಯನ ಪೀಠದ ಸಹಯೋಗದಲ್ಲಿ ೦೪ನೇ ಜನವರಿ ೨೦೧೬ರಂದು ಭುವನವಿಜಯ ಸಭಾಂಗಣದಲ್ಲಿ ಏರ್ಪಡಿಸಿದ್ದ(ಯುಜಿಸಿ ಕೋರ್ಸ್ವರ್ಕ್ನ ಮುಕ್ತಾಯ ಸಮಾರಂಭ) ಮುಕ್ತಾಯ ಸಮಾರಂಭದಲ್ಲಿ ಶಂಬಾಸಂಸ್ಕೃತಿ ಚಿಂತನೆ: ಸಮಕಾಲೀನ ಸಂದರ್ಭ ವಿಷಯ ಕುರಿತು ವಿಶೇಷ ಉಪನ್ಯಾಸವನ್ನು ನೀಡುತ್ತ ಮಾತನಾಡಿದರು.
ಶಂಬಾ ಅವರ ಅಧ್ಯಯನಕ್ಕೆ ಮರಾಠಿ ಸಾಹಿತ್ಯದ ಓದಿನ ಹಿನ್ನೆಲೆ ಇತ್ತು ಎಂಬುದಕ್ಕೆ ಮಹಾರಾಷ್ಟ್ರದ ಚಿಂತಕರಾದ ಭಂಡಾರಕರ್, ಸೂಕ್ತಾಂಕರ್, ಇರಾವತಿಕರ್ವೆ, ವಿ.ಕ.ರಾಜೇವಾಡೆ, ಡಾಂಗೆ, ಸಾಂಕಾಲಿಯ, ರಾಮಚಂದ್ರ ಚಿಂತಾಮಣಿ ಢೇರೆ ಮೊದಲಾದವರ ಚಿಂತನೆಗಳನ್ನು ಉಲ್ಲೇಖಿಸಿದರು. ಭಾಷೆ ಸಾಹಿತ್ಯ ಸಂಸ್ಕೃತ ಇತಿಹಾಸ ಒಂದಾಗಿ ಸಾಗುತ್ತಿದ್ದ ಸಂಸ್ಕೃತಿಯ ಅಧ್ಯಯನಗಳು ಆಧುನಿಕ ಕಾಲಘಟ್ಟಕ್ಕೆ ಬಂದಂತೆಲ್ಲ ಕವಲುಗಳಾದವು. ಪ್ರತಿ ಕ್ಷೇತ್ರದಲ್ಲು ಸೂಕ್ಷ್ಮ ಅಧ್ಯಯನಗಳ ಅಗತ್ಯವಿದೆ. ಆದರೆ ಅವುಗಳ ನಡುವೆ ಇರುವ ಅಂತರ್ಸಂಬಂಧ, ಪರಸ್ಪರ ಕೊಡು-ಕೊಳೆ ಕೆಲವರನ್ನು ಹೊರತುಪಡಿಸಿ ಎಲ್ಲೋ ಗೈರು ಹಾಜರಾಗಿದೆ ಎಂದರು. ಪಂಚಮಸಾಲಿ, ಪಂಚಮಕಾರಗಳು ಕುರಿತು ಗಂಭೀರ ಅಧ್ಯಯನಗಳ ಬಗ್ಗೆ ಯಾರು ಯೋಚಿಸಲಿಲ್ಲ. ಇವು ಅಧ್ಯಯನಕ್ಕೆ ಬೇಕಾದಂತಹ ಹುಡುಕಾಟದ ಜಾಗಗಳು. ಕೆಲವರು ಸಬಾಲ್ಟರನ್ ಹಿನ್ನೆಲೆಯಲ್ಲಿ ಪಂಥಗಳನ್ನು ಕುರಿತು ಅಧ್ಯಯನ ಮಾಡುತ್ತಾರೆ. ಸಮಾಜಶಾಸ್ತ್ರ ಇತಿಹಾಸವನ್ನು ಓದುವುದರಿಂದ ಆಳವಾದ ಗ್ರಹಿಕೆಗಳನ್ನು ಪಡೆಯಬಹುದು. ಶಂಬಾ ಅವರೇ ತಿಳಿಸಿರುವಂತೆ ಕರ್ನಾಟಕ ಸಂಸ್ಕೃತಿ ಆರಂಭವಾಗಿರುವ ವಿಧಾನವನ್ನು ತಿಳಿಯಬೇಕಾದರೆ ಕಡೆಯಪಕ್ಷ ಹತ್ತು, ಹನ್ನೊಂದನೆಯ ಶತಮಾನದ ಇತಿಹಾಸ, ಸಂಶೋಧಕರಾದ ನಿಮಗೆ ಗೊತ್ತಿರಬೇಕು ಎಂದು ತಿಳಿಸಿದರು.
ಗುಣಮಟ್ಟದ ಸಂಶೋಧನೆಗಳನ್ನು ಕುರಿತು ಬಂಜಗೆರೆ ಅವರು ಮಾತನಾಡುತ್ತ ತೀವ್ರವಾಗಿ, ಆಳವಾಗಿ ಅಧ್ಯಯನ ಮಾಡುವ ವಿದ್ವಾಂಸರ ಕೊರತೆ ಇರುವುದು ಕಾಣಿಸುತ್ತದೆ. ಒಂದೊ, ಎರಡೊ ಗುಣಮಟ್ಟದ ಸಂಶೋಧನೆಗಳು ದೊರೆತರೂ ಹೊಸ ಸಂಶೋಧಕರಿಂದ ಕೊಡುಗೆ ಗೌಣವಾಗಿದೆ. ಇದಕ್ಕೆ ಕಾರಣಗಳನ್ನು ಸಂಯುಕ್ತವಾಗಿ ನಾವೆಲ್ಲ ಆಲೋಚಿಸಬೇಕಾದ ಅಗತ್ಯವಿದೆ. ನನಗೆ ಕಂಡುಬರುವ ಹಾಗೆ ಮುಖ್ಯ ಸಮಸ್ಯೆ ಎಂದರೆ ಇಲ್ಲಿರುವ ಸಂಶೋಧಕ ವಿದ್ವಾಂಸರು ಸಾಮಾನ್ಯವಾಗಿ ಜಾತಿ ಆಧಾರಿತವಾಗಿರುವ ಪಂಗಡೀಕರಣದಲ್ಲಿ ಸಮರ್ಥನೆ ಅಥವಾ ವಿಮರ್ಶೆಯಲ್ಲಿ ತೊಡಗಿರುವುದೇ ಬಹಳ ದೊಡ್ಡ ಆತಂಕ ಇರಬಹುದು. ಮಹಾರಾಷ್ಟ್ರದಲ್ಲಿ ಈ ಸನ್ನಿವೇಶ ಇಲ್ಲ. ಕರ್ನಾಟಕದಲ್ಲಿ ಮಾತ್ರ ಅದು ಯಾಕೋ ಶುದ್ಧ ಅಧ್ಯಯನವಾಗಿ ಅಥವಾ ಪೂರ್ತಿ ನಿಸ್ಪಕ್ಷಪಾತವಾಗಿರುವ ವಿಶ್ಲೇಷಣೆಯಾಗಿ ಬೆಳೆಯುವುದಕ್ಕಿಂತ ಹೆಚ್ಚಾಗಿ ಸಮರ್ಥನೆಗಳು ಮತ್ತು ಖಂಡನೆಗಳ ಧಾಟಿಯಲ್ಲಿ ಬೆಳೆದಿರುವುದನ್ನು ನಾವು ಗಮನಿಸಬಹುದು ಎಂದು ತಿಳಿಸಿದರು.
ನಂತರ ಪಶುಪಾಲಕ ದೇವತೆಗಳು ಮತ್ತು ಮಂಟೇಲಿಂಗಸ್ವಾಮಿ ಕುರಿತು ಮಾತನಾಡುತ್ತ ಸಂಶೋಧಕರು ಆಕರಗಳ ಬಗ್ಗೆ ಸ್ಪಷ್ಟತೆ ಹೊಂದಿರಬೇಕು. ಶಿಷ್ಟ ಆಕರಗಳು ಬಹಳ ಸಲ (ಮಿಸ್ಲೀಡ್) ಮಾಡುತ್ತವೆ. ನನಗೆ ಗೊತ್ತಿರುವ ಹಾಗೆ ಜನಸಾಮಾನ್ಯರಲ್ಲಿ ಪ್ರಚಲಿತವಾಗಿರುವ ಮಾತುಗಳಲ್ಲಿರುವ ಸತ್ಯವನ್ನು ಸಂಶೋಧಕರು ಹೊರಗೆಳೆಯಬೇಕು. ಗಮನಿಸದೇಬಿಟ್ಟ ಸಣ್ಣ ಪುಟ್ಟ ವಿವರಗಳು ಅಧ್ಯಯನವನ್ನು ಬಲಪಡಿಸಲು ಸಮರ್ಥನೆ ಸಹಾಯ ನೀಡುತ್ತವೆ ಎನ್ನುವ ಮಾರ್ಗವನ್ನು ಡಾ. ಶಂಬಾ ಅವರು ಹಾಕಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿಯವರು ನಮ್ಮ ಸಂಶೋಧನೆ ಏಕತ್ವದ ಮೂಲಕ ಬಹುತ್ವವನ್ನು ನಾಶಗೊಳಿಸದೇ ಇರುವಂತಹ ಇಂದಿನ ಸಂಕ್ರಮಣ ಕಾಲದ ತೊಡಕುಗಳನ್ನು ಬಗೆಹರಿಸಿಕೊಳ್ಳಲು ನಾವು ಎಂತಹ ಹಾದಿಗಳನ್ನು ಕಂಡುಕೊಳ್ಳಬೇಕು ಎಂಬುದಕ್ಕೆ ವಿಶೇಷ ಉಪನ್ಯಾಸ ಸಾಕ್ಷಿಯಾಗಿದೆ. ಅಸತ್ಯ(ಮಿಥ್)ಗಳನ್ನು ಒಡೆಯುವ ಮೂಲಕ ಹೊಸ ಸತ್ಯ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ನಂತರ ನಡೆದ ಸಂವಾದದಲ್ಲಿ ಡಾ. ಮೋಹನಕುಂಟಾರ, ಡಾ. ವೀರೇಶ ಬಡಿಗೇರ, ಡಾ. ವಾಸುದೇವ ಬಡಿಗೇರ, ಡಾ.ಚಿನ್ನಸ್ವಾಮಿ ಸೋಸಲೆ, ಡಾ. ಶಿವಾನಂದ ವಿರಕ್ತಮಠ ಮೊದಲಾದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಸ್ವಾಗತಿಸುತ್ತ ಇತ್ತೀಚಿನ ವರ್ಷಗಳಲ್ಲಿ ಉದ್ಯೋಗ ಮೂಲ ಅರ್ಹತೆಯ ಅಗತ್ಯವಾಗುತ್ತದೆ. ಅಧ್ಯಯನಕಾರರು ಮತ್ತು ಅಧ್ಯಾಪಕರ ಮೇಲೆ ಯುಜಿಸಿ ನಿಯಮಗಳ ಚೌಕಟ್ಟಿನ ಒತ್ತಡಗಳಿವೆ. ಕನ್ನಡ ವಿಶ್ವವಿದ್ಯಾಲಯವು ಯುಜಿಸಿ ಕೋರ್ಸ್ವರ್ಕ್ಗಿಂತ ಮೊದಲೇ ಅಂದರೆ ೨೦ ವರ್ಷಗಳಿಂದ ಸಂಶೋಧನೆಯ ಗುಣಮಟ್ಟವನ್ನು ಕಾಯ್ದುಕೊಳ್ಳಲು ಈ ರೀತಿ ವಿಶೇಷ ಉಪನ್ಯಾಸಗಳ ಮೂಲಕ ಸಂಶೋಧಕರಿಗೆ ಕನ್ನಡ ವಿಶ್ವವಿದ್ಯಾಲಯದ ಚಿಂತನಾ ಕ್ರಮದ ಕುರಿತು ತಿಳಿಸಲಾಗುತ್ತಿತ್ತು ಎಂದು ನುಡಿದರು.
ಅಧ್ಯಯನಾಂಗದ ನಿರ್ದೇಶಕರಾದ ಡಾ. ಕೆ. ರವೀಂದ್ರನಾಥ ಅವರು ೬.೧.೧೯೯೬ರಿಂದ ಶಂಬಾ ಅಧ್ಯಯನ ವೇದಿಕೆಯಾಗಿ ಆರಂಭವಾಗಿ ನಂತರ ಅಧ್ಯಯನ ಪೀಠವಾಗಿ ಪರಿವರ್ತನೆಯಾಗಿದೆ. ಶಂಬಾ ಅವರ ಜನ್ಮದಿನವಾದ ಜನವರಿ ೪ ಅನ್ನು ಕನ್ನಡ ವಿಶ್ವವಿದ್ಯಾಲಯ ಸಂಶೋಧಕರ ಸಮಾವೇಶವಾಗಿ ಆಚರಿಸುತ್ತದೆ ಎಂದು ಪ್ರಾಸ್ತವಿಕದಲ್ಲಿ ನುಡಿದರು. ಶಂಬಾ ಜೋಶಿ ಅಧ್ಯಯನ ಪೀಠದ ಸಂಚಾಲಕರಾದ ಡಾ.ಎಂ. ಉಷಾ ಅವರು ವಂದಿಸಿದರು. ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಶೋಧನಾ ವಿದ್ಯಾರ್ಥಿ ಕುಮಾರಸ್ವಾಮಿ ಬೆಜ್ಜಿಹಳ್ಳಿ ಬಂಜಗೆರೆ ಅವರನ್ನು ಪರಿಚಯಿಸಿ ನಿರೂಪಿಸಿದರು.