ಭಾರತೀಯರು ಉದ್ಧಾರವಾಗಬೇಕಾದರೆ ದೌರ್ಬಲ್ಯವನ್ನು ಕಿತ್ತೊಗೆಯಬೇಕೆಂದು ವಿವೇಕಾನಂದರು ಹೇಳಿದ್ದಾರೆ ಎಂದು ಪ್ರಾಧ್ಯಾಪಕರಾದ ಡಾ. ಸಾಂಬಮೂರ್ತಿ ಅವರು ತಿಳಿಸಿದರು.
ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ೧೨.೧.೨೦೧೬ರಿಂದ ೧೯.೧.೨೦೧೬ರ ವರೆಗೆ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯ ಸಪ್ತಾಹದಲ್ಲಿ ಪಂಪಸಭಾಂಗಣದ ವೇದಿಕೆಯಲ್ಲಿ ಅವರು ವಿಶೇಷೋಪನ್ಯಾಸ ನೀಡುತ್ತಿದ್ದರು.
ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭ್ರಾತೃತ್ವ ಬಿಂಬಿಸಿದ ವಿವೇಕಾನಂದ ಅವರನ್ನು ಒಬ್ಬ ಸಂತನಾಗಿ, ದಾರ್ಶನಿಕನಾಗಿ ರೂಪಿಸಿತು. ವಿಶ್ವಸಂಸ್ಥೆಯು ಇವರ ಜನ್ಮ ದಿನವನ್ನೇ ಯುವ ದಿನಾಚರಣೆಯಾಗಿ ಆಚರಿಸಲು ನಿರ್ಣಯ ತೆಗೆದುಕೊಂಡಿತು. ಆಧುನಿಕ ಭಾರತವು ವಿವೇಕಾನಂದರಿಗೆ ಋಣಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕುತೂಹಲ ಮತ್ತು ಪ್ರಶ್ನೆ ಮಾಡುವ ವಿಶಿಷ್ಟಗುಣ ಸ್ವಭಾವ ಹೊಂದಿದ್ದ ವಿವೇಕಾನಂದರು ಯಾವುದನ್ನೂ ಪರೀಕ್ಷಿಸದೆ ಸುಲಭವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ. ಭಾರತದ ಧಾರ್ಮಿಕ ಶಕ್ತಿಯ ಬಗ್ಗೆ ಅರಿವು ಹೊಂದಿದ್ದ ವಿವೇಕಾನಂದರು ಭಾರತದ ಗುಲಾಮತನದ ಬಗ್ಗೆ ಆಳವಾಗಿ ಚಿಂತನೆ ನಡೆಸಿದರು. ಸನ್ಯಾಸ ದೀಕ್ಷೆಯ ನಂತರ ಪರಿವ್ರಾಜಕನಾಗಿ ಭಾರತವನ್ನು ಅನೇಕ ಸಲ ಪ್ರದಕ್ಷಿಣೆ ಮಾಡಿದರು. ಜನರ ಅಜ್ಞಾನ, ದಾಸ್ಯ, ದೀನತೆ, ಬಡತನ ಕಂಡು ಸಂಕಟಪಟ್ಟರು. ಇವಕ್ಕೆಲ್ಲ ಪರಿಹಾರ ಕಾಣಲು ಕನ್ಯಾಕುಮಾರಿಯ ಶಿಲೆಯ ಮೇಲೆ ಧ್ಯಾನಾಸಕ್ತರಾದರು ಎಂದು ಇವರ ಕುರಿತು ಉಪನ್ಯಾಸದಲ್ಲಿ ತಿಳಿಸಿದರು.
ಯುವ ಶಕ್ತಿಯ ಸಾಮರ್ಥ್ಯದ ಬಗ್ಗೆ ಅಪಾರ ನಂಬಿಕೆ ಹೊಂದಿದ್ದ ವಿವೇಕಾನಂದರು ಯುವಶಕ್ತಿಯು ಎಚ್ಚರವಾಗಲು ಕರೆ ನೀಡಿದರು. ಯುವಜನತೆ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಸಾಮರ್ಥ್ಯ ಸಂಪಾದಿಸಬೇಕೆಂದರು. ನಿಮ್ಮ ನಡುವೆ ಇರುವ ಜ್ಞಾನವನ್ನು ಹುಡುಕಿ ಅನಾವರಣಗೊಳಿಸಿ, ಉನ್ನತವಾದ ನೈತಿಕತೆ ಜೊತೆಗೆ ಆತ್ಮಶ್ರದ್ಧೆ ಹೊಂದಿರಿ ಅಂಧಶ್ರದ್ಧೆ ಬೇಡ ಎಂದು ಯುವ ಜನತೆಗೆ ಹೇಳುತ್ತ, ಭಾರತ ರಾಷ್ಟ್ರ ಕಟ್ಟಲು ವಿವೇಕಿಗಳಿಂದ ಮಾತ್ರ ಸಾಧ್ಯ ಎಂದಿದ್ದಾರೆ ಎಂದು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಸಪ್ತಾಹದಲ್ಲಿ ಪ್ರತಿದಿನವೂ ವಿಶೇಷ ಉಪನ್ಯಾಸಗಳಿರುತ್ತವೆ. ಸಾಮಾನ್ಯವಾಗಿ ವಿವೇಕಾನಂದರನ್ನು ಬ್ರಹ್ಮಚರ್ಯ, ಆಧ್ಯಾತ್ಮ, ಚಿಕಾಗೋ ಭಾಷಣದ ಮೂಲಕ ಮಾತ್ರ ಕಟ್ಟಿಕೊಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಜಾತಿ, ಸಾಮಾಜಿಕ ಅಸಮಾನತೆಗಳ ಮೂಲಕ ಅವರ ಚಿಂತನೆಗಳನ್ನು ಮರುಪರಿಶೀಲನೆ ಮಾಡಲು ಈ ಸಪ್ತಾಹದಲ್ಲಿ ಪ್ರಯತ್ನಿಸಬಹುದಾಗಿದೆ ಎಂದು ನುಡಿದರು.
ವಿದ್ಯಾರ್ಥಿ ಕ್ಷೇಮಪಾಲನ ಘಟಕದಿಂದ ಏರ್ಪಡಿಸಿದ್ದ ಸಪ್ತಾಹದ ವಿಶೇಷೋಪನ್ಯಾಸದಲ್ಲಿ ವಿದ್ಯಾರ್ಥಿನಿ ಅನಸೂಯ ಪ್ರಾರ್ಥಿಸಿದರು. ವೀರೇಶ ಜಾನೇಕಲ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.