ಪತ್ರಿಕಾ ವರದಿ- ೬.೧೨.೨೦೧೬
ಪರಿನಿಬ್ಬಾಣ ಬುದ್ಧನಲ್ಲಿ ಲೀನವಾಗುವ ಪ್ರಕ್ರಿಯೆ. ಅಂಬೇಡ್ಕರ್ ಅವರ ಪರಿನಿಬ್ಬಾಣದ ದಿನ ಎಲ್ಲ ದಮನಿತರ ಪಾಲಿಗೆ ಎಚ್ಚೆತ್ತ ದಿನ ಎಂದು ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಎಂ.ಸಿ. ಗಣೇಶ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಕ್ಷೇಮಪಾಲನಾ ಘಟಕವು ಪಂಪ ಸಭಾಂಗಣದಲ್ಲಿ ೬ನೇ ಡಿಸೆಂಬರ್ ೨೦೧೬ರಂದು ಏರ್ಪಡಿಸಿದ್ದ ಡಾ|| ಬಿ.ಆರ್. ಅಂಬೇಡ್ಕರ್ ಅವರ ೬೦ನೇ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ಕನಸಿನ ರಾಷ್ಟ್ರೀಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಅಂಬೇಡ್ಕರ್ ಅವರು ಈ ದೇಶಕ್ಕೆ ಸಂವಿಧಾನವನ್ನು ಸಮರ್ಪಿಸುವ ಸಂದರ್ಭದಲ್ಲಿ ಯಾವ ಸಮಾಜದಲ್ಲಿ ಭ್ರಾತೃತ್ವ, ಸಮಾನತೆ ಇರುವುದಿಲ್ಲವೋ ಯಾವ ದೇಶದಲ್ಲಿ ಸಮಾಜದಲ್ಲಿ ಮಾನವ ಸಮೂಹಗಳಲ್ಲಿ ಸಮಾನತೆ ಇರುವುದಿಲ್ಲವೋ ಅಲ್ಲಿ ರಾಷ್ಟ್ರ ಎನ್ನುವುದು ಕೇವಲ ಕಲ್ಪಿತ ಎಂದು ಆತಂಕದಿಂದ ನುಡಿದಿದ್ದರು. ಈ ದೇಶದಲ್ಲಿ ಸಮಾನತೆಯಿಲ್ಲ ಭ್ರಾತೃತ್ವವಿಲ್ಲ, ಸಾಮಾಜಿಕ ನ್ಯಾಯವಿಲ್ಲ ಇಂತಹ ಸಂದರ್ಭದಲ್ಲಿ ಈ ದೇಶದ ರಾಜಕೀಯ ಸ್ವಾತಂತ್ರ್ಯವನ್ನು ಯಾರಿಗೆ ಅರ್ಪಿಸಬೇಕು ಎಂದು ಅಂಬೇಡ್ಕರ್ ಅವರು ಕೇಳಿದ್ದರು. ಇನ್ನುಮುಂದೆ ಸ್ವತಂತ್ರ ಪಡೆದ ಈ ದೇಶದಲ್ಲಿ ಸಂವಿಧಾನ ಇದ್ದಾಗಲೂ ಕೂಡ ಈ ದೇಶ ಸರ್ವಾಧಿಕಾರಿಗಳ ವಶವಾಗುತ್ತದೆ ಎಂದು ಸ್ಪಷ್ಟವಾಗಿ ನುಡಿದು ಎಚ್ಚರಿಸಿದ್ದರು. ಮತೀಯ ಧಾರ್ಮಿಕ ವ್ಯವಸ್ಥೆ, ಜಾತಿ ಜನಾಂಗೀಯ ಭೇದ, ವರ್ಗಭೇದ, ಲಿಂಗಭೇದ ಇಂತಹ ಅಸಮಾನತೆಗಳಿಂದ ತುಂಬಿರುವ ಈ ದೇಶದಲ್ಲಿ ಒಂದು ಅಖಂಡ ರಾಷ್ಟ್ರೀಯತೆ ಹುಡುಕುವುದು ಕೇವಲ ಆದರ್ಶ. ಈ ದೇಶಕ್ಕೆ ರಾಜಕೀಯ ಸ್ವತಂತ್ರ ಬಂದರೆ ಅದನ್ನು ಹಂಚಿಕೊಳ್ಳುವವರು ಯಾರು ಎಂದರೆ ಬಲಿಷ್ಠ ಜಾತಿಗಳವರು. ಇದು ನನ್ನ ಆದರ್ಶದ ಸಂವಿಧಾನ ಅಲ್ಲ ಎಂದೂ ಆತಂಕ ಪಟ್ಟಿದ್ದರು ಎಂದು ಉಪನ್ಯಾಸದಲ್ಲಿ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಪ್ರಜಾಪ್ರಭುತ್ವ ಬದುಕಿನ ಕ್ರಮ ಎಂದು ಅಂಬೇಡ್ಕರ್ ಹೇಳಿದ್ದಾರೆ. ಸಂಕಟ ಅನುಭವಿಸಿದವರು ಮಾತ್ರ ನಿಷ್ಠೂರವಾಗಿ ಮಾತನಾಡಲು ಸಾಧ್ಯ ಎಂಬುದಕ್ಕೆ ಅಂಬೇಡ್ಕರ್ ಅವರು ಸಾಕ್ಷಿ. ಎಲ್ಲೋ ಒಂದು ಕಡೆಗೆ ಗಾಂಧಿಯವರನ್ನು ಅಂಬೇಡ್ಕರ್ ಅವರು ನಿರಂತರವಾಗಿ ಕಾಡಿದ್ದಾರೆ ಎಂದು ತಿಳಿಸುತ್ತ, ರಾಷ್ಟ್ರೀಯತೆ ವ್ಯಾಖ್ಯಾನವನ್ನು ಮತ್ತೆ ಮತ್ತೆ ಮುರಿದು ಕಟ್ಟಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಸ್ವಾಗತಿಸಿದರು. ಕ್ಷೇಮಪಾಲನಾಧಿಕಾರಿ ಡಾ. ಎಸ್. ಶಿವಾನಂದ ವಿರಕ್ತಮಠ ಪ್ರಾಸ್ತಾವಿಕ ನುಡಿದರು. ಸಂಗೀತ ವಿದ್ಯಾರ್ಥಿಗಳು ಡಾ. ಹನುಮಣ್ಣನಾಯಕ ದೊರೆ ಅವರ ನೇತೃತ್ವದಲ್ಲಿ ಬುದ್ಧಂ ಶರಣಂ ಗಚ್ಛಾಮಿ ಎಂದು ಹಾಡಿದರು. ಡಾ. ವೀರೇಶ ಜಾನೇಕಲ್ ನಿರೂಪಿಸಿ, ವಂದಿಸಿದರು.