ಪತ್ರಿಕಾ ವರದಿ- ೭.೧೨.೨೦೧೬ವಿಶೇಷ ಉಪನ್ಯಾಸ ನೀಡುತ್ತಿರುವ ಡಾ. ಎಂ. ಚಂದ್ರಪೂಜಾರಿ ಅವರು
ನೋಟು ರದ್ದತಿಯಿಂದ ಹೊಸ ಕಪ್ಪು ಹಣ ಸೃಷ್ಟಿಯಾಗುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಇದು ಬಹಳ ಮುಖ್ಯವಾದ ಸಂಗತಿ ಎಂದು ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಎಂ. ಚಂದ್ರಪೂಜಾರಿ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ಅಭಿವೃದ್ಧಿ ಅಧ್ಯಯನ ವಿಭಾಗ ತನ್ನ ವಿಭಾಗದಲ್ಲಿ ೭ನೇ ಡಿಸೆಂಬರ್ ೨೦೧೬ರಂದು ಏರ್ಪಡಿಸಿದ್ದ ನೋಟುರದ್ದತಿ ಮತ್ತು ಕಪ್ಪುಹಣ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ನೋಟು ರದ್ದತಿಗೆ ಕಾರಣವೇನೆಂದರೆ ಕಪ್ಪು ಹಣ ತಡೆಯುವುದು, ಭಯೋತ್ಪಾದನೆ ಕಡಿಮೆ ಮಾಡುವುದು, ಖೋಟಾನೋಟಿನ ಸಮಸ್ಯೆ ತಡೆಯುವುದು. ಇವೆಲ್ಲ ನೋಟಿನ ರದ್ದತಿಗೆ ತತ್ಕ್ಷಣದ ಕಾರಣಗಳು. ಅಲ್ಲದೆ ಅಸಮಾನತೆಯ ನಿವಾರಣೆ ಮತ್ತು ನಗದು ರಹಿತ ಸಮಾಜದ ನಿರ್ಮಾಣ ಇವು ನೋಟು ರದ್ದತಿಗೆ ದೂರಗಾಮಿ ಉದ್ದೇಶಗಳಾಗಿದ್ದವು. ತೆರಿಗೆಯಿಂದ ವಂಚಿಸಲ್ಪಟ್ಟ, ಸರ್ಕಾರದ ಗಮನಕ್ಕೆ ಬಾರದ ಎಲ್ಲ ಆದಾಯಗಳು ಕಪ್ಪು ಹಣ ಆಗುತ್ತದೆ. ಕಪ್ಪು ಹಣಕ್ಕೆ ಕಾನೂನು ಬಾಹಿರ ಮತ್ತು ಕಾನೂನು ಸಮ್ಮತವಾದ ಎರಡು ಮೂಲಗಳಿವೆ. ಅಚ್ಚರಿಯೆಂದರೆ ಕಾನೂನು ಸಮ್ಮತ ಮೂಲದಿಂದ ಶೇ.೮೦.ರಷ್ಟು ಕಪ್ಪುಹಣ ಸೃಷ್ಟಿಯಾಗುತ್ತದೆ. ಲಂಚ, ಹಫ್ತಾ ವಸೂಲಿ, ಡ್ರಗ್ ಮಾಫಿಯ, ಕಿಡ್ನಾಪಿಂಗ್ ಇವೆಲ್ಲ ಕಾನೂನುಬಾಹಿರ ಕಪ್ಪು ಹಣ ಸೃಷ್ಟಿಯಾಗುವ ಮೂಲಗಳು.
ನಾವು ಖರೀಸಿದ ನಂತರ ರಸೀದಿ ಅಥವಾ ಬಿಲ್ಲನ್ನು ಪಡೆಯದಿರುವುದರಿಂದ ಪರೋಕ್ಷವಾಗಿ ಕಪ್ಪುಹಣ ಸೃಷ್ಟಿಯಾಗಲು ಕಾರಣರಾಗುತ್ತೇವೆ. ಯಾವುದೇ ವೈದ್ಯರು ಹಣ ಪಡೆದಿರುವುದಕ್ಕೆ ರಸೀದಿ ಕೊಡುವುದಿಲ್ಲ. ಆದಾಯ ರಫ್ತು ವ್ಯವಹಾರದಲ್ಲಿರುವವರು ರಿಯಲ್ ಎಸ್ಟೇಟ್ ವ್ಯವಹಾರ ಇವೆಲ್ಲ ನ್ಯಾಯಸಮ್ಮತವಾಗಿ ಕಪ್ಪು ಹಣ ಸೃಷ್ಟಿಸುವ ಮೂಲಗಳಾಗಿವೆ.
ನೋಟು ರದ್ದತಿಯಿಂದ ಸ್ವಲ್ಪ ಹಣ ಬಂದಿರಬಹುದು ಆದರೆ ಹಣ ಸಂಗ್ರಹಿಸಿದವರು ಬಡ ಸಂಬಂಧಿಕರನ್ನು ಸಂಪರ್ಕಿಸಿ ಅವರ ಮೂಲಕ ಖಾತೆ ತೆಗೆಸಿ ತಮ್ಮ ಹಣವನ್ನು ಬಿಳಿ ಮಾಡಿಕೊಂಡಿದ್ದಾರೆ. ನಂತರ ಇದಕ್ಕಾಗಿಯೇ ಏಜೆನ್ಸಿಗಳು ಹುಟ್ಟಿದವು. ನೋಟು ರದ್ದತಿ ವಿಫಲವಾಗಲು ಜನ ಹೀಗೆ ಬೇರೆ ಬೇರೆ ದಾರಿ ಕಂಡುಕೊಂಡರು. ಆದರೆ ಹೊಸ ಕಪ್ಪು ಹಣ ಸೃಷ್ಟಿಯಾಗುವುದನ್ನು ತಡೆಯಲಾಗಲಿಲ್ಲ. ನೋಟು ರದ್ದತಿ ಕ್ರಮವು ಕಪ್ಪು ಹಣ ಸೃಷ್ಟಿಯಾಗುವ ಮೂಲದ ಮೇಲೆ ದಾಳಿ ಮಾಡುತ್ತಿಲ್ಲ ಎಂದು ತಿಳಿಸಿದರು.
ಆದ್ದರಿಂದ ನಾವೆಲ್ಲ ಬಿಲ್ ಪಡೆದು ವ್ಯವಹಾರ ಮಾಡಬೇಕು. ಎಲ್ಲ ವ್ಯವಹಾರಗಳು ನೋಂದಣಿಯಾಗಬೇಕು. ಎಲ್ಲರಲ್ಲೂ ಬಹಳ ಮುಖ್ಯವಾಗಿ ಪಾನ್ ಸಂಖ್ಯೆ ಇರಬೇಕು. ಎಲ್ಲರೂ ಆದಾಯ ತೆರಿಗೆಗೆ ಒಳಪಡಬೇಕು. ಇದೆಲ್ಲ ಪಾರದರ್ಶಕವಾಗಿ ಆನ್ಲೈನ್ನಲ್ಲಿ ನಡೆಯಬೇಕು. ಈ ಎಲ್ಲ ಕ್ರಮಗಳು ಗಂಭೀರವಾಗಿ ಜಾರಿಯಾದರೆ ಕಪ್ಪು ಹಣದ ಸೃಷ್ಟಿಯನ್ನು ತಡೆಯಬಹುದು. ಆದರೆ ಅಧಿಕಾರ ನಿಂತಿರುವುದೇ ಕಪ್ಪು ಹಣದ ಮೇಲೆ. ಇದು ನಮ್ಮ ಅತ್ಯಂತ ಶೋಚನೀಯ ಸಂಗತಿ ಎಂದು ಡಾ. ಎಂ. ಚಂದ್ರಪೂಜಾರಿ ಅವರು ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.
ಸಂಚಾಲಕರಾದ ಡಾ. ಸಿದ್ದಗಂಗಮ್ಮ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು. ಎಲ್ಲ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ನಂತರ ಸಂವಾದದಲ್ಲಿ ಭಾಗಿಯಾದರು.