ಕುವೆಂಪು ಚಿಂತನೆಗಳ ಪ್ರಸ್ತುತತೆ
ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ
ಪತ್ರಿಕಾ ವರದಿ- ೨೯.೧೦.೨೦೧೬ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು
ಡಾ. ವಿಠಲರಾವ್ ಟಿ. ಗಾಯಕ್ವಾಡ್ ಅವರು ವಿಶೇಷ ಉಪನ್ಯಾಸವನ್ನು ನೀಡಿದರು.
ವರ್ಣಾಶ್ರಮವನ್ನು ತಿದ್ದುವುದಲ್ಲ ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು ಎಂಬುದು ಕುವೆಂಪು ಅವರ ವಿಶ್ವಮಾನವ ಸಂದೇಶದ ಆಶಯವಾಗಿದೆ ಎಂದು ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ವಿಠಲರಾವ್ ಟಿ. ಗಾಯಕ್ವಾಡ್ ಅವರು ತಿಳಿಸಿದರು.
ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆಯನ್ನು ವಿಶ್ವಮಾನವ ದಿನವನ್ನಾಗಿ ಆಚರಿಸುವ ಪ್ರಯುಕ್ತ ವಿದ್ಯಾರ್ಥಿ ಕ್ಷೇಮಪಾಲನಾ ಘಟಕವು ಕುವೆಂಪು ಚಿಂತನೆಗಳ ಪ್ರಸ್ತುತತೆ ವಿಷಯವನ್ನು ಕುರಿತಂತೆ ಪಂಪ ಸಭಾಂಗಣದಲ್ಲಿ ೨೯-೧೨-೨೦೧೬ರಂದು ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.
ಅವರು ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ಅವಲೋಕಿಸುತ್ತಾ ಕುವೆಂಪು ಚಿಂತನೆಗಳ ಬಹು ಆಯಾಮಗಳನ್ನು ಪರಿಚಯಿಸಿದರು. ಅವರ ದರ್ಶನ ಮೀಮಾಂಸೆಯ ವೈಶಿಷ್ಟ್ಯವನ್ನು ತಿಳಿಸಿದರು. ಕುವೆಂಪು ಹೃದಯ ಸಂಸ್ಥಾನದ ಕನ್ನಡಿ ಎಂದು ಹೇಳುವ ಮೂಲಕ ಅವರ ವೈಚಾರಿಕತೆ, ಚಿಂತನೆ, ವೈಜ್ಞಾನಿಕತೆ, ಅನುಭಾವ ಮತ್ತು ಆಧ್ಯಾತ್ಮ ಜೀವನದ ತತ್ವಗಳನ್ನು ವಿಶ್ವಮಾನವರೆಲ್ಲಾ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿಯವರು ಮಾತನಾಡುತ್ತಾ ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ ಎಂಬ ಕೃತಿಯನ್ನು ಯುವ ಜನತೆ ಓದಿ ಮನನ ಮಾಡಿಕೊಳ್ಳುವುದರ ಮೂಲಕ ಕುವೆಂಪು ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಪಂಪ ಮತ್ತು ಕುವೆಂಪು ಹೇಳಿದ ಮಾನವ ಕುಲಂ ತಾನೊಂದೆ ವಲಂ ಎಂಬ ನುಡಿಯನ್ನು ನೆನಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಘಟಕದ ಸಂಯೋಜನಾಧಿಕಾರಿಗಳಾದ ಡಾ. ಶಿವಾನಂದ ಎಸ್. ವಿರಕ್ತಮಠ ಅವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ಎಲ್ಲಾ ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಆಡಳಿತ ಸಿಬ್ಬಂದಿಗಳು ಭಾಗವಹಿಸಿದ್ದರು. ಸಂಶೋಧನಾ ವಿದ್ಯಾರ್ಥಿನಿಯಾದ ಸಂಧ್ಯಾ ಹೆಚ್.ಎಸ್ ಇವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ತಾಯಶ್ರೀ ಎನ್. ಮತ್ತು ಶಿಲ್ಪ ವಿ. ಪ್ರಾರ್ಥಿಸಿದರು.