ಪತ್ರಿಕಾ ವರದಿ
ಹೊರಗಿನ ಆಭರಣಗಳು ನಮಗೆ ಎಷ್ಟೇ ಇದ್ದರೂ ನಮ್ಮೊಳಗಿರುವ ತೇಜಸ್ಸು, ಅಂತಃಸತ್ವ, ಆತ್ಮವಿಶ್ವಾಸ, ಇಚ್ಛಾಶಕ್ತಿಗೆ ಧಕ್ಕೆ ಬರದಂತೆ ಮುಕ್ಕಾದಂತೆ ಜನಸೇವೆ ಮಾಡಿದರೆ ಯಶಸ್ಸು ನಮಗೆ ಖಂಡಿತ ಎಂದು ಹಿರಿಯ ಚಿಂತಕರಾದ ಶ್ರೀಮತಿ ಶಶಿಕಲಾ ವಸ್ತ್ರದ ಅವರು ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ವಿಭಾಗ ಮತ್ತು ಮಹಿಳಾ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ೨೭ರಿಂದ ೨೮ನೇ ಫೆಬ್ರವರಿ ೨೦೧೭ರ ವರೆಗೆ ಮಂಟಪ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ರಾಜಕಾರಣಿಗಳ ಆತ್ಮಕಥನ-೧ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೆಣ್ಣಿನ ಕೈ ಜಗತ್ತಿನ ತೊಟ್ಟಿಲನ್ನು ತೂಗಬಹುದು ಎಂಬ ಅರಿವಿದ್ದರೂ ಆ ಕೈ ಮನೆಯ ತೊಟ್ಟಿಲನ್ನಷ್ಟೇ ತೂಗುತ್ತಿರಲಿ ಎಂಬ ಶಪಥ ಪುರುಷೋತ್ತಮರದು. ಹೀಗಾಗಿ ಇಂದಿನ ವ್ಯವಸ್ಥೆಗೆ ಬಂದು ನಿಂತಿದ್ದೇವೆ. ಕುಟುಂಬ ಕೇಂದ್ರಿತ ಸ್ತ್ರೀಯ ಜವಾಬ್ದಾರಿಗಳು ಕುಟುಂಬಕ್ಕೆ ಸೀಮಿತವಿರಲಿ ಎಂದು ಅವರು. ಕುಟುಂಬದೊಂದಿಗೆ ರಾಜಕಾರಣವನ್ನೂ ನಾವು ಸಮರ್ಥವಾಗಿ ನಿಭಾಯಿಸಿ ತೋರಿಸುತ್ತೇವೆ ಎಂಬ ಹಠ, ಸಮಾನತೆಯ ಕೂಗು ನಮ್ಮ ಸ್ತ್ರೀಯರದ್ದು. ರಾಜಕಾರಣವನ್ನು ನಿಭಾಯಿಸಲು ಮಹಿಳೆಯರು ಕುಟುಂಬವನ್ನು ತೊರೆಯಬೇಕೆಂದಿಲ್ಲ. ಕುಟುಂಬವನ್ನು ಜವಾಬ್ದಾರಿಯಿಂದ ನೋಡಬಲ್ಲ ತಾಯಿ ಇಡೀ ಜಗತ್ತನ್ನು ನೋಡಬಲ್ಲಳು ಎಂದು ತಿಳಿಸಿದರು.
ಮುಂದುವರೆದು ಚರಿತ್ರೆಯಿಂದಲೂ ಮಹಿಳೆಯರು ಪುರುಷರಿಗೆ ಸಮಾನಳಾಗಿ ರಾಜ್ಯ ಕಟ್ಟಿದ್ದಾರೆ. ಸಮರ್ಥವಾಗಿ ಆಳಿದ್ದಾರೆ. ರಣರಂಗದಲ್ಲಿ ಸರಿಸಮವಾಗಿ ಯುದ್ಧ ಮಾಡಿದ್ದಾರೆ. ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಯುದ್ಧ ಮಾಡಿದ ವನಿತೆಯರಿದ್ದಾರೆ. ರಣರಂಗದಲ್ಲಿ, ಕುಟುಂಬ ವ್ಯವಸ್ಥೆಯಲ್ಲಿ ಸಾಮಾಜಿಕ, ರಾಜಕೀಯ ವ್ಯವಸ್ಥೆಯಲ್ಲಿ ತಾಯಿ ಇದ್ದಾಳೆ. ಅಂತಹ ಮಹಿಳೆಯರಿಗೆ ನಿರೀಕ್ಷಿತ ಮಟ್ಟದಲ್ಲಿ ರಾಜಕೀಯ ರಂಗಕ್ಕೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ರಾಜಕೀಯೇತರ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸ್ವಾಗತವಿಲ್ಲ. ಯಾರೂ ಕೆಂಪು ಹಾಸು ಹಾಕಿಲ್ಲ. ಹೀಗೆ ಮಹಿಳೆಯರನ್ನು ಹಿಂದಿಕ್ಕುತ್ತ ಬಂದಿರುವ ದುರಂತ ಪರಿಸ್ಥಿತಿಯಲ್ಲಿ ಕೆಲವೇ ಮಹಿಳಾ ರಾಜಕಾರಣಿಗಳು ಹೇಗೆ ಮುಂದೆ ಬಂದರು ಎಂಬ ಕುತೂಹಲದ ಪ್ರಶ್ನೆಗಳಿವೆ. ತನ್ನ ಬದುಕಿನಲ್ಲಿ ಹಾಗೂ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ಗಟ್ಟಿಯಾಗಿದ್ದರೆ ಮಾತ್ರ ಬದುಕಲು ಸಾಧ್ಯ. ನಿರ್ಭಿಡೆ, ನಿರ್ಭೀತತನ, ಮಾತನಾಡುವಾಗ ಪ್ರಾಮಾಣಿಕತೆ ಇದ್ದರೆ ಜನ ನಂಬುತ್ತಾರೆ. ಅಲ್ಲಿ ನಮ್ಮ ಅಸ್ಮಿತೆ ಇರುತ್ತದೆ ಎಂದು ಶಶಿಕಲಾ ಅವರು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ರಾಜಕೀಯ ಕ್ಷೇತ್ರ ಮಹಿಳೆಯರಿಗೆ ಒಗ್ಗದು ಎಂದು ತಿಳಿದಿರುವ ಸಮಾಜದಲ್ಲಿ ರಾಜಕೀಯ ಪ್ರವೇಶಿಸಿದ ನಮ್ಮ ಮೊದಲ ತಲೆಮಾರಿನ ಮಹಿಳಾ ರಾಜಕಾರಣಿಗಳನ್ನು ಮಾತನಾಡಿಸಿದರೆ ಮುಂದಿನ ತಲೆಮಾರಿನ ಮಹಿಳಾ ರಾಜಕಾರಣಿಗಳಿಗೆ ದಾರಿ ತೋರಿಸಿದ ಹಾಗೆ ಆಗುತ್ತದೆ ಎಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಜಕಾರಣ ಮಾಡುವ ಪುರುಷರ ಮಹಿಳೆಯಲ್ಲಿರುವ ಹೆಂಡತಿಯರ ಅನುಭವಗಳನ್ನೂ ಕೇಳಬೇಕಾಗಿದೆ. ಒಬ್ಬ ಪುರುಷನ ಯಶಸ್ಸಿಗೆ ಮಹಿಳೆ ಕಾರಣ ಎಂದು ಹೇಳುವ ಸಮಾಜದಲ್ಲಿ ಯಶಸ್ವಿ ರಾಜಕಾರಣಿಗಳಾಗಿ ಕರ್ನಾಟಕದ ಚರಿತ್ರೆಯಲ್ಲಿ ರಾಜಕಾರಣ ಮಾಡಿದ ಪುರುಷರ ಮನೆಯಲ್ಲಿರುವ ಮಹಿಳೆಯರು ಹೇಗೆ ತಮ್ಮ ಮನೆಯ ಪುರುಷರನ್ನು ನಿಭಾಯಿಸಿದರು ಎಂದು ತಿಳಿಯಬೇಕಾಗಿದೆ ಎಂದು ಕುಲಪತಿಗಳು ಹೇಳುತ್ತ ರಾಜಕೀಯ ಕ್ಷೇತ್ರ ಪುರುಷರದ್ದು ಎನ್ನುವ ಸ್ಪಷ್ಟವಾದ ನಂಬಿಕೆಯನ್ನು ಒಡೆದು ಪ್ರವೇಶ ಪಡೆಯುವುದು ಬಹಳ ಕಷ್ಟದ ಕೆಲಸವೇ ಸರಿ. ಬಲಿಷ್ಠ ಶಕ್ತಿಯನ್ನು ಬೆಂಬಲವಾಗಿಟ್ಟುಕೊಂಡು ರಾಜಕಾರಣಕ್ಕೆ ಬರುವಂತಹ ಮಹಿಳೆಯರ ಅನುಭವಗಳು ಬೇರೆ ರೀತಿ ಇರುತ್ತವೆ. ಇದಾವುದಿಲ್ಲದೇ ಸಂವಿಧಾನ ಕೊಟ್ಟ ಅವಕಾಶಗಳನ್ನು ಬಳಸಿಕೊಂಡು ರಾಜಕಾರಣಕ್ಕೆ ಬರುವ ಮಹಿಳೆಯರ ಅನುಭವಗಳು ಬೇರೆ ಆಗಿರುತ್ತದೆ. ಯಾವುದೇ ರಾಜಕೀಯ ಪಕ್ಷದ ಮಹಿಳಾ ರಾಜಕಾರಣಗಳು ಆಯ್ಕೆಯಾಗಿ ಬಂದಾಗ ಸರ್ಕಾರಗಳು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆಗಳನ್ನು ಬಿಟ್ಟು ಗೃಹಖಾತೆಯನ್ನು ಕೊಟ್ಟಿದ್ದು ಕಂಡಿಲ್ಲ. ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ನೀರಾವರಿ ಖಾತೆಯನ್ನು ಲೀಲಾವತಿದೇವಿ ಆರ್. ಪ್ರಸಾದ್ ಅವರಿಗೆ ವಹಿಸಲಾಗಿತ್ತು. ಪೂರ್ಣ ಪ್ರಮಾಣದಲ್ಲಿ ಮಹಿಳಾ ಶಕ್ತಿಯನ್ನು ರಾಜಕಾರಣಕ್ಕೆ ಬಳಸಿಕೊಳ್ಳಲು ಸಮಾಜ ಮತ್ತು ಪಕ್ಷಗಳು ಅವಕಾಶ ಮಾಡಿಕೊಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯರು ರಾಜಕೀಯ ಪ್ರವೇಶಿಸಿದಾಗ ಕುಟುಂಬದ ಒಳಗೆ ಮತ್ತು ಹೊರಗೆ ಅವರು ಎದುರಿಸಿದ ಬಿಕ್ಕಟ್ಟುಗಳು ಮತ್ತು ಸಮಸ್ಯೆಗಳನ್ನು ಮೊದಲ ತಲೆಮಾರಿನ ಮಹಿಳಾ ರಾಜಕಾರಣಿಗಳು ಪ್ರಾಮಾಣಿಕವಾಗಿ ತಮ್ಮ ಅನುಭವವನ್ನು ಬಿಚ್ಚಿಟ್ಟರೆ ಅದನ್ನು ಬರಹ, ಓದು ದಾಖಲೀಕರಣದ ಮೂಲಕ ಮುಂದಿನ ತಲೆಮಾರಿನ ಮಹಿಳೆಯರಿಗೆ ಇದೆಲ್ಲವನ್ನು ಮೀರಲು ಸಾಧ್ಯವಾಗುತ್ತದೆ. ಪಕ್ಷಾಧಾರಿತವಾಗಿ ಮಾತನಾಡುವ ರಾಜಕಾರಣಕ್ಕೆ ಮಹಿಳೆಯರು ಒಳಗಾಗಬೇಕೋ ಅಥವಾ ಬೌದ್ಧಿಕ ತಿಳುವಳಿಕೆಯ ಆಧಾರಿತವಾದ ಸ್ತ್ರೀ ಕೇಂದ್ರಿತ ನೆಲೆಯೊಳಗೆ ಮಹಿಳೆ ರಾಜಕಾರಣವನ್ನು ಆರಂಭಿಸಬೇಕೋ ಎಂಬ ಸಮಸ್ಯೆಗಳು ನಮ್ಮೆದುರಿಗೆ ಇವೆ ಎಂದು ತಿಳಿಸಿದರು.
ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಅವರು ಸಾಮಾಜಿಕ ನೆಲೆಯ ಯಜಮಾನಿಕೆ ಮತ್ತು ಆರ್ಥಿಕ ನೆಲೆಯ ಯಜಮಾನಿಕೆ ಈ ಎರಡರ ಸಹಯೋಗ ಇದ್ದರೆ ಮಾತ್ರ ರಾಜಕೀಯ ಅಧಿಕಾರ ದಕ್ಕಿಸಿಕೊಳ್ಳಲು ಸಾಧ್ಯವಿರುವ ಸಂದರ್ಭದಲ್ಲಿ ಸಾಮಾಜಿಕ ಮತ್ತು ಆರ್ಥಿಕ ನೆಲೆಗಳಿಂದ ವಂಚಿತರಾದ ತಳಸಮುದಾಯ ಅಥವಾ ಒಟ್ಟು ಮಹಿಳಾ ಸಮುದಾಯ ತಮ್ಮಷ್ಟಕ್ಕೆ ತಾವೇ ಅಧಿಕಾರ ಪಡೆಯುವುದು ಬಹಳ ತ್ರಾಸದಾಯಕ. ಇವರ ಇಕ್ಕಟ್ಟು ಮತ್ತು ಬಿಕ್ಕಟ್ಟುಗಳನ್ನು ಅವರ ಬಾಯಿಂದ ಕೇಳಬೇಕಾದ ಸಂದರ್ಭ ಇದು. ಇದಕ್ಕೆ ಒಂದು ಶೈಕ್ಷಣಿಕ ಚೌಕಟ್ಟು ಅಳವಡಿಸಿ ಈ ಕಾರ್ಯಕ್ರಮ ಆಯೋಜಿಸಿದರೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಧ್ಯಯನಕಾರರಿಗೆ ಇದು ಬಹಳ ಮುಖ್ಯವಾಗುತ್ತದೆ ಎನ್ನುತ್ತ ಸ್ವಾಗತಿಸಿದರು.
ವಿಭಾಗದ ಮುಖ್ಯಸ್ಥರು ಮತ್ತು ಕೇಂದ್ರದ ನಿರ್ದೇಶಕರಾದ ಡಾ. ಶೈಲಜಾ ಹಿರೇಮಠ ಅವರು ಪ್ರಾಸ್ತಾವಿಕ ನುಡಿಯುತ್ತ ಸಂವಿಧಾನದ ೩೨೫, ೩೨೬ ವಿಧಿಗಳು ಮಹಿಳೆ-ಪುರುಷರಿಗೆ ಸಮಾನ ರಾಜಕೀಯ ಅಧಿಕಾರ ನೀಡಿವೆ. ನಾಗಾಲ್ಯಾಂಡ್ನಲ್ಲಿ ಸ್ಥಳೀಯ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.೩೩% ಮೀಸಲಾತಿಯನ್ನು ನೀಡುವ ನಿರ್ಧಾರವನ್ನು ಇಡೀ ನಾಗಾಲ್ಯಾಂಡ್ ವಿರೋಧಿಸಿ ಹೊತ್ತಿ ಉರಿಯುತ್ತಿದೆ. ಆದರೆ ಬೇರೆ ರಾಜ್ಯಗಳಲ್ಲಿ ನೇರವಾಗಿ ಹೇಳದಿದ್ದರೂ ರಾಜಕೀಯ ಪಕ್ಷಗಳು ಮತ್ತು ಮುಖಂಡರು ನಾಗಾಲ್ಯಾಂಡ್ ಮನಸ್ಥಿತಿಯನ್ನು ಹೊಂದಿದ್ದಾರೆ. ದೇಶ-ವಿದೇಶಗಳಲ್ಲೂ ಮಹಿಳಾ ರಾಜಕಾರಣಿಗಳ ಕುರಿತು ಒಂದೇ ರೀತಿಯ ಧೋರಣೆ ಕಾಣಬರುತ್ತದೆ. ಮಹಿಳೆಯರನ್ನು ಮತಬ್ಯಾಂಕ್ ಆಗಿ ಪರಿಗಣಿಸಿಲ್ಲ ಎಂದರು.
ಕೇಂದ್ರದ ಡಾ. ಯರ್ರಿಸ್ವಾಮಿ ನಿರೂಪಿಸಿ, ವಂದಿಸಿದರು. ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಂತರ ಗೋಷ್ಠಿಯಲ್ಲಿ ಮಾಜಿ ಸಚಿವೆಯರಾದ ಡಾ.ಬಿ.ಟಿ.ಲಲಿತಾನಾಯಕ ಮತ್ತು ಡಾ.ಲೀಲಾದೇವಿ ಆರ್.ಪ್ರಸಾದ್ ಅನುಭವಗಳನ್ನು ಹಂಚಿಕೊಂಡರು.