ತಿಂಗಳು: ಸೆಪ್ಟೆಂಬರ್ 2017

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೫.೯.೨೦೧೭ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಉನ್ನತ ಶಿಕ್ಷಣ: ಸಾಧ್ಯತೆ ಸವಾಲುಗಳು ವಿಚಾರಸಂಕಿರಣ

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೫.೯.೨೦೧೭ರಂದು
ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಉನ್ನತ ಶಿಕ್ಷಣ: ಸಾಧ್ಯತೆ ಸವಾಲುಗಳು ವಿಚಾರಸಂಕಿರಣದ
ಪತ್ರಿಕಾ ವರದಿ

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೫.೯.೨೦೧೭ರಂದು
ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಉನ್ನತ ಶಿಕ್ಷಣ: ಸಾಧ್ಯತೆ ಸವಾಲುಗಳು ವಿಚಾರಸಂಕಿರಣದ
ಪತ್ರಿಕಾ ವರದಿ.

ಖಾಸಗಿ ಶಿಕ್ಷಣವು ರೋಗಗ್ರಸ್ತ ವೈರಲ್ ಆಗಿ ಬೆಳೆದಿದೆ. ಬ್ಯೂರೋಕ್ರಸಿಯ(ಅಧಿಕಾರಶಾಹಿ) ಖಾಸಗಿ ಪರವಾದ ಒಲವು, ಮೋಹ ಇದಕ್ಕೆ ಕಾರಣವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಪ್ರೊ. ಎಸ್.ಜಿ.ಸಿದ್ಧರಾಮಯ್ಯ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೫.೯.೨೦೧೭ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಉನ್ನತ ಶಿಕ್ಷಣ: ಸಾಧ್ಯತೆ ಸವಾಲುಗಳು ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಬಳಕೆಯಿಂದ ಹಿಡಿದು ಪಠ್ಯ ಬೋಧನೆ, ಸಂಶೋಧನಾ ಸೂಕ್ಷ್ಮತೆಯವರೆಗೆ ಅನೇಕ ಪಲ್ಲಟಗಳಾಗಿವೆ. ಆತಂಕಗಳ ಸೃಷ್ಟಿಯಾಗಿವೆ. ಪ್ರಾಥಮಿಕ ಶಿಕ್ಷಣ ಅನೇಕ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದೆ. ಶಿಕ್ಷಣವು ಮೂಲಭೂತ ಹಕ್ಕಾಗಿದೆ. ಕಡ್ಡಾಯ ಶಿಕ್ಷಣವಾಗಿದೆ. ಉಚಿತ ಶಿಕ್ಷಣವಾಗಿದೆ. ಆದರೂ ಗುಣಾತ್ಮಕ ಶಿಕ್ಷಣದಲ್ಲಿ ಹಿಂದೆ ಉಳಿದಿರುವುದರಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಆಗ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ ಎಂದು ಹಬ್ಬಿಸಲಾಗುತ್ತದೆ. ಮುಚ್ಚಿದ ಮತ್ತು ವಿಲೀನಗೊಂಡ ಶಾಲೆಗಳ ಸ್ಥಳದಲ್ಲಿ ಖಾಸಗಿ ಶಾಲೆಗಳು ತಲೆಯೆತ್ತುತ್ತವೆ ಎಂದು ತಿಳಿಸಿದರು.
ಅಸಮಾನತೆ ತುಂಬಿರುವ ಪ್ರಾಥಮಿಕ ಶಿಕ್ಷಣದಲ್ಲಿ ಬದಲಾವಣೆ ಬೇಕು. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಶಾಲೆಗಳಲ್ಲಿ ಮಕ್ಕಳು ಅತ್ಮಹತ್ಯೆ ಮಾಡಿಕೊಳ್ಳುವುದು ಕಂಡುಬರುತ್ತದೆ. ಅಂಕ ಗಳಿಕೆಯ ಸ್ಪರ್ಧೆಯಲ್ಲಿ ಆತ್ಮವಿಶ್ವಾಸವಿಲ್ಲದೇ ಮುಖಹೇಡಿಗಳಾಗಿ ಬದುಕು ಎದುರಿಸದೇ ಸಾವಿಗೆ ಮೊರೆ ಹೋಗುತ್ತಾರೆ. ಸರ್ಕಾರಿ ಶಾಲೆಯ ಮಕ್ಕಳು ಬದುಕಿನ ಎಲ್ಲ ರೀತಿಯ ಸವಾಲುಗಳಿಗೆ ಮುಖಾಮುಖಿಯಾಗುತ್ತಾರೆ. ಅವರ ಗ್ರಹಣ ಶಕ್ತಿಯು ಉತ್ತಮವಾಗಿರುತ್ತದೆ. ಇಂದು ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಳೆದು ಹೋಗುತ್ತಿರುವಾಗ ಉನ್ನತ ಶಿಕ್ಷಣದಲ್ಲಿ ಹೇಗೆ ಕಾಣಿಸುತ್ತದೆ ಎಂದು ಪ್ರಶ್ನಿಸುತ್ತ ಕುವೆಂಪು ಅವರು ಕುಲಪತಿಗಳಾಗಿದ್ದಾಗ ಹೇಳಿದ್ದ ಬೋಧನಾಂಗ, ಸಂಶೋಧನಾಂಗ, ಪ್ರಸಾರಾಂಗ ಈ ಮೂರರ ಬಹುದೊಡ್ಡ ಜವಾಬ್ದಾರಿ ಹೊತ್ತ ಕನ್ನಡ ವಿಶ್ವವಿದ್ಯಾಲಯವು ಬಹಳ ವಿಸ್ತಾರವಾದ ಮುನ್ನೋಟ ಹೊಂದಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕ್ಲಸ್ಟರ್ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಗಳಾದ ಡಾ. ರವೀಂದ್ರ ರೇಷ್ಮೆ ಅವರು ವಿಷಯ ವಿಸ್ತರಣೆ ಮಾಡುತ್ತ ಕಾನ್ವೆಂಟ್‌ಗಳು ಶಿಕ್ಷಣವಲಯದಲ್ಲಿ ವಿಶೇಷ ಆಕರ್ಷಣೆಗಳಾಗಿವೆ. ಈ ಭಾವನೆ ಜನರ ಮನಸ್ಥಿತಿಯಿಂದ ದೂರವಾಗಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿಕೊಳ್ಳದೇ ಇರುವುದರಿಂದ ಉನ್ನತ ಶಿಕ್ಷಣ ಈಗಿರುವ ಸ್ಥಿತಿಯನ್ನು ತಲುಪಿದೆ. ಉನ್ನತ ಶಿಕ್ಷಣ ಪರಿಷತ್ತಿಗೆ ಸದಸ್ಯರಾಗಲು ಕೇವಲ ಹಿರಿತನ ಮಾತ್ರ ಮಾನದಂಡವಾಗಬಾರದು. ವಿವಿಧ ತಲೆಮಾರುಗಳ ಅಧ್ಯಾಪಕರ ಆಶಯಗಳು ಅಲ್ಲಿ ಬಿಂಬಿತವಾಗಬೇಕು. ಜ್ಞಾನ ಆಯೋಗದಲ್ಲಿ ಶಿಕ್ಷಕರ ಪ್ರಾತಿನಿಧ್ಯಕ್ಕಿಂತ ಕಾರ್ಪೋರೇಟರ್‌ಗಳ ಪ್ರಾತಿನಿಧ್ಯ ಹೆಚ್ಚಿನ ಸಂಖ್ಯೆಯಲ್ಲಿದೆ. ಪ್ರಪಂಚದಲ್ಲಿ ಭಾರತ ಮೂರನೇ ಜ್ಞಾನಾಧಾರಿತ ಶಕ್ತಿಯಾಗಿ ಹೊರಹೊಮ್ಮಿದೆ. ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಗೆಲುವು ಸಾಧಿಸುತ್ತಿದ್ದಾರೆ. ಇದನ್ನು ಅಮೇರಿಕಾದ ಮಾಜಿ ಅಧ್ಯಕ್ಷರಾದ ಒಬಾಮ ಅವರು ಗಮನಿಸಿದ್ದರು ಎಂದು ತಿಳಿಸಿದರು. ಈಗ ಚರ್ಚಿತವಾಗುತ್ತಿರುವ ಕಾಮನ್ ಯೂನಿವರ್ಸಿಟಿ ಆಕ್ಟ್‌ಗೆ ಸಾರ್ವಜನಿಕ ಅಭಿಪ್ರಾಯ ಕೇಳಬಹುದಾಗಿತ್ತು ಎಂದರು.
ರೇಷ್ಮೆಯವರು ಕನ್ನಡ ವಿಶ್ವವಿದ್ಯಾಲಯ ಕುರಿತು ಯಾಕೆ ಕರ್ನಾಟಕದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಗಳು ಕನ್ನಡ ವಿಶ್ವವಿದ್ಯಾಲಯವನ್ನು ತಮ್ಮ ತವರು ಮನೆ ಎಂದು ಭಾವಿಸುತ್ತಿಲ್ಲ? ಕನ್ನಡ ವಿಶ್ವವಿದ್ಯಾಲಯದ ಜೊತೆ ಯಾಕೆ ನಿರಂತರವಾದ ಸಂಪರ್ಕ ಸಾಧಿಸುತ್ತಿಲ್ಲ. ಯಾಕೆ ಸಾವಯವ ಸಂಬಂಧ ಇರಿಸಿಕೊಂಡಿಲ್ಲ. ಜಾನಪದ ವಿಶ್ವವಿದ್ಯಾಲಯ ಅಥವಾ ಸಂಗೀತ ವಿಶ್ವವಿದ್ಯಾಲಯವಾಗಲಿ ಕನ್ನಡ ವಿಶ್ವವಿದ್ಯಾಲಯವನ್ನು ಕನ್ನಡ ಭಾಷೆ ಮತ್ತು ಸಂಸ್ಕೃತಿ ವಿಶ್ವವಿದ್ಯಾಲಯ ಎಂದು ಪರಿಗಣಿಸಿ ಇಲ್ಲಿರುವ ವಿದ್ವಾಂಸರೊಂದಿಗೆ ಸಂಪರ್ಕ ಇರಿಸಿಕೊಂಡರೆ ಅದ್ಭುತ ಪವಾಡ ನಡೆಯುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಪ್ರಾಧ್ಯಾಪಕರು ಮತ್ತು ಚಿಂತಕರಾದ ಡಾ. ಪೃಥ್ವಿದತ್ತ ಚಂದ್ರ ಶೋಭಿ ಅವರು ವಿಷಯ ವಿಸ್ತರಣೆ ಮಾಡುತ್ತ ಇಂದು ಶಿಕ್ಷಣ ವಲಯದಲ್ಲಿ ಯಾವ ರೀತಿಯ ಜ್ಞಾನ ಉತ್ಪಾದಿಸಬೇಕು ಎಂಬ ಸವಾಲನ್ನು ಎದುರಿಸಬೇಕಾಗಿದೆ. ಸಮಾನತೆ ಸಭ್ಯತೆ, ಆದರ್ಶ ಸಮಾಜವನ್ನು ಶಿಕ್ಷಣದ ಮೂಲಕ ಸಾಕಾರಗೊಳಿಸುವುದು ಸಾಧ್ಯವಾಗುತ್ತಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಕಾಣುತ್ತಿರುವುದು ನೈತಿಕ ಅಧಃಪತನ ಮುಕ್ತ ಚಿಂತನೆ, ಸಮಾಜಮುಖಿ ಮನಸ್ಸನ್ನು ನಾವು ಕಳೆದುಕೊಂಡಿದ್ದೇವೆ. ಕರ್ನಾಟಕದ ವಿಶ್ವವಿದ್ಯಾಲಯಗಳು ಕಲಿಸುವ ಜ್ಞಾನಶಿಸ್ತುಗಳಿಗೂ ಜಾಗತಿಕವಾಗಿ ಕಲಿಸುವ ಜ್ಞಾನಶಿಸ್ತುಗಳಿಗೂ ಏನು ವ್ಯತ್ಯಾಸವಿದೆ ಎಂದು ಗಂಭೀರವಾಗಿ ಪ್ರಶ್ನೆ ಮಾಡಬೇಕಿದೆ, ಚರ್ಚಿಸಬೇಕಿದೆ. ವಿಶ್ವವಿದ್ಯಾಲಯಗಳಲ್ಲಿ ಹೊಸ ಜ್ಞಾನ ಸೃಷ್ಟಿಸುವ ಕೆಲಸ ಸಮರ್ಪಕವಾಗಿಲ್ಲ ಎಂದು ಹೇಳಿದರು.
ವಿಶ್ವವಿದ್ಯಾಲಯಗಳನ್ನು ಅಧ್ಯಾಪಕರು ತಮ್ಮ ಮುಷ್ಠಿಗೆ ವಾಪಾಸು ಪಡೆಯಬೇಕು. ವಿಶ್ವವಿದ್ಯಾಲಯಗಳು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಸೇರಿವೆ. ಕಲಿಸುವ, ಕಲಿಯುವ ಹೊಸ ಜ್ಞಾನ ಸೃಷ್ಟಿಸುವ ಕೆಲಸ ಆಗಬೇಕು. ಇದನ್ನು ನಾವೇ ಆರಂಭಿಸಬೇಕು ಎಂದು ಕರೆ ನೀಡಿದರು.
ಪ್ರಾಧ್ಯಾಪಕರಾದ ಡಾ.ಕೆ.ವೈ. ನಾರಾಯಣಸ್ವಾಮಿ ಅವರು ವಿಷಯ ವಿಸ್ತರಣೆ ಮಾಡುತ್ತ ಕರ್ನಾಟಕದಲ್ಲಿ ೪೧೨ ಕಾಲೇಜುಗಳಿವೆ. ಶೇ.೫೭ರಷ್ಟು ಹೆಣ್ಣುಮಕ್ಕಳು ಹಾಗೂ ಶೇ.೪೩ರಷ್ಟು ಗಂಡುಮಕ್ಕಳು ಕಲಿಯುತ್ತಿದ್ದಾರೆ. ಸಾಮಾನ್ಯ ವರ್ಗದಿಂದ ಶೇ.೬ರಷ್ಟು, ಹಿಂದುಳಿದ ವರ್ಗಗಳಿಂದ ಶೇ.೫೮ರಷ್ಟು, ಪರಿಶಿಷ್ಟ ಜಾತಿಯಿಂದ ಶೇ.೨೧ರಷ್ಟು, ಪರಿಶಿಷ್ಟ ಪಂಗಡದಿಂದ ಶೇ.೭ರಷ್ಟು, ಅಲ್ಪಸಂಖ್ಯಾತರಿಂದ ಶೇ.೭ರಷ್ಟು ಕಲಿಯುತ್ತಿದ್ದಾರೆ. ಈ ಅಂಕಿ ಅಂಶಗಳು ಪ್ರಗತಿಸೂಚಕವಾಗಿವೆ. ಆದರೆ ನಾವು ಅನುಸರಿಸುತ್ತಿರುವ ಮೌಲ್ಯಮಾಪನ ವಿಧಾನದಲ್ಲಿ ಸಮಸ್ಯೆಯಿದೆ. ಇದನ್ನು ಪರಿಹರಿಸದೇ ಉನ್ನತ ಶಿಕ್ಷಣದಲ್ಲಿ ಸುಧಾರಣೆ ಸಾಧ್ಯವಿಲ್ಲ. ಮೌಲ್ಯಮಾಪನ ವ್ಯವಸ್ಥೆ ಸುಧಾರಿಸಲು ಯಾವ ಸುತ್ತೋಲೆಗಳು ಬಂದಿಲ್ಲ. ಬರುಬರುತ್ತ ಮಾನವಿಕ ವಿಷಯಗಳನ್ನು ಓದುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದೊಂದು ಗಂಭೀರ ಸಮಸ್ಯೆಯಾಗಿದೆ ಎಂದು ಅಂಕಿ ಅಂಶಗಳನ್ನು ಮುಂದಿಟ್ಟರು.
ಅಧ್ಯಕ್ಷತೆ ವಹಿಸಿ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ವೇದಿಕೆಯಲ್ಲಿದ್ದ ಗಣ್ಯರನ್ನು ಗೌರವಿಸಿ ಮಾತನಾಡುತ್ತ ಬೆಳ್ಳಿಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ೬ ವಿಚಾರಸಂಕಿರಣಗಳ ಪ್ರಬಂಧ ಮಂಡನೆಗಳನ್ನು ಪುಸ್ತಕ ರೂಪದಲ್ಲಿ ಹೊರ ತರಲಾಗುವುದು ಎಂದು ತಿಳಿಸುತ್ತ ಹಿಂದುಳಿದ ಮತ್ತು ಬಹುಸಂಖ್ಯಾತ ಜನವರ್ಗಗಳು ಈ ಮುಖ್ಯವಾಹಿನಿಯೊಳಗೆ ಪ್ರವೇಶ ಮಾಡಿದಾಗ ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥೆಯನ್ನು ಶತಮಾನಗಳುದ್ದಕ್ಕೂ ಶಿಕ್ಷಣವನ್ನು ತಮ್ಮ ಸ್ವತ್ತನ್ನಾಗಿ ಮಾಡಿಕೊಂಡು ಬಂದಿರುವುದು ಉನ್ನತಶಿಕ್ಷಣದ ಬಿಕ್ಕಟ್ಟುಗಳಿಗೆ ಕಾರಣವಾಗಿದೆ. ನಮ್ಮ ಓದುವ ಮತ್ತು ಓದಿಸುವ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕಿದೆ. ಏನನ್ನು ಓದಿಸಬೇಕು ಎಂದು ಆಲೋಚಿಸಬೇಕಾಗಿದೆ. ಅಧ್ಯಾಪಕರಿಗೆ ತರಗತಿಗಳಲ್ಲಿ ಪಾಠ ಮಾಡುವ ನಿರಾಳಸ್ಥಿತಿಯಿಲ್ಲ. ಇದಕ್ಕೆ ಮಾಹಿತಿ ತಂತ್ರಜ್ಞಾನದ ದುರುಪಯೋಗ ಮತ್ತು ಅದು ಸೃಷ್ಟಿಸುವ ಆತಂಕ ಕಾರಣವಾಗಿದೆ. ಆದ್ದರಿಂದ ಕ್ರಿಯಾಶೀಲ ವಿದ್ಯಾರ್ಥಿಗಳನ್ನು ರೂಪಿಸಲು ಅಧ್ಯಾಪಕರಿಗೆ ಸಾಧ್ಯವಾಗುತ್ತಿಲ್ಲ. ಈ ಸವಾಲುಗಳನ್ನು ಸಮುದಾಯದತ್ತವಾಗಿ ಹೇಗೆ ಎದುರಿಸಬೇಕು ಎಂಬುದು ಸವಾಲಾಗಿದೆ ಎಂದು ನುಡಿದರು.
ಡಾ.ಎ. ಸುಬ್ಬಣ್ಣ ರೈ ಅವರು ಸ್ವಾಗತಿಸಿದರು. ಡಾ. ಅಶೋಕಕುಮಾರ ರಂಜೇರೆ ಅವರು ಪ್ರಾಸ್ತಾವಿಕ ನುಡಿದರು. ಶ್ರೀ ಸೋಮೇಶ್ ಎಂ. ನಿರೂಪಿಸಿದರು. ಡಾ. ಕಲವೀರ ಮನ್ವಾಚಾರ ಅವರು ವಂದಿಸಿದರು. ಸಂಗೀತ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಚಾರಸಂಕಿರಣದಲ್ಲಿ ವಿಶ್ವವಿದ್ಯಾಲಯದ ಡೀನರು, ಆಹ್ವಾನಿತ ಗಣ್ಯರು, ಬೋಧಕ ವೃಂದ, ಆಡಳಿತ ವೃಂದ, ವಿದ್ಯಾರ್ಥಿಗಳು, ನಾಗರೀಕರು ಆಸಕ್ತಿಯಿಂದ ಭಾಗವಹಿಸಿದರು.
ಊಟದ ನಂತರ ಭುವನವಿಜಯದಲ್ಲಿ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ನಾಡೋಜ ಬೆಳಗಲ್ಲು ವೀರಣ್ಣ ಅವರು ಉದ್ಘಾಟಿಸಿದರು. ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಿಂದ ತಾಳ ಮದ್ದಳೆ ಕಾರ್ಯಕ್ರಮ ನಡೆಯಿತು. ಹೊಸಪೇಟೆಯ ಭಾವೈಕ್ಯತಾ ವೇದಿಕೆಯವರು ಧನ್ವಂತರಿ ಚಿಕಿತ್ಸೆ ನಾಟಕವನ್ನು ಪ್ರದರ್ಶಿಸಿದರು.

21728757_10208400607487819_236760209348452347_o21731806_10208400621168161_3098373736374742545_o21740849_10208400619968131_7653625073561806875_o

 

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ-೨೫ ಸಾಮಾಜಿಕ, ರಾಜಕೀಯ ಕರ್ನಾಟಕ : ವರ್ತಮಾನ ಮತ್ತು ಭವಿಷ್ಯ ವಿಚಾರಸಂಕಿರಣ

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ-೨೫
ಸಾಮಾಜಿಕ, ರಾಜಕೀಯ ಕರ್ನಾಟಕ : ವರ್ತಮಾನ ಮತ್ತು ಭವಿಷ್ಯ ವಿಚಾರಸಂಕಿರಣದ
ಉದ್ಘಾಟನೆಯ ಪತ್ರಿಕಾ ವರದಿ- ೧೭.೯.೨೦೧೭

ವರ್ತಮಾನದ ಗರ್ಭದಿಂದಲೇ ಭವಿಷ್ಯತ್ತನ್ನು ಕಟ್ಟಿಕೊಳ್ಳಬಹುದು ಅದಕ್ಕಾಗಿ ನಮ್ಮೆಲ್ಲರ ದೃಷ್ಟಿಕೋನವನ್ನು ಒಟ್ಟಾಗಿಸಿ ಕೊಳ್ಳಬೇಕು ಎಂದು ಚಿಂತಕರು ಮತ್ತು ಹಿರಿಯ ಸಾಹಿತಿಗಳಾದ ಡಾ. ಚಂದ್ರಶೇಖರ ಪಾಟೀಲ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೭.೯.೨೦೧೭ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾಜಿಕ, ರಾಜಕೀಯ ಕರ್ನಾಟಕ: ವರ್ತಮಾನ ಮತ್ತು ಭವಿಷ್ಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಸ್ಯೆಗಳು ಒಂದನ್ನೊಂದು ಅವಲಂಬಿಸಿರುವ ಪರಿಸ್ಥಿತಿಯಲ್ಲಿ ಬಿಡಿಬಿಡಿಯಾಗಿ ವಿಶ್ಲೇಷಣೆ ಮಾಡಲಾಗುವುದಿಲ್ಲ. ವೈಚಾರಿಕ ದೃಷ್ಟಿಕೋನದಿಂದ ನಿನ್ನೆಯ ವಿದ್ಯಮಾನಗಳನ್ನು ಗಮನಿಸಬೇಕು. ನಮ್ಮೊಂದಿಗೆ ಪ್ರಪಂಚದ ಅನೇಕ ರಾಷ್ಟ್ರಗಳು ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಪಡೆದವು. ಆದರೆ ಆ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಉಳಿದಿಲ್ಲ. ಭಾರತದಲ್ಲಿ ಮಾತ್ರ ಇವೆರಡೂ ಇದ್ದು ಚುನಾವಣೆಗೆ ಆಯ್ಕೆಗೆ ಅವಕಾಶವಿದೆ. ಇಂದು ಪರಿಸ್ಥಿತಿ ಬದಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಗೆಲುವು ಸಾಧಿಸಲು ಸುರಕ್ಷಿತ ಕ್ಷೇತ್ರವನ್ನು ಹುಡುಕಬೇಕಾಗಿದೆ. ಇದು ಪ್ರಜಾಪ್ರಭುತ್ವದ ಒಂದು ದೊಡ್ಡ ಸಾಧನೆಯಾಗಿದೆ. ಇಂದು ರಾಜಕೀಯವು ಪ್ರತಿ ಹಳ್ಳಿ ಹಳ್ಳಿಗಳ ಮನೆ ಮನೆಗಳಲ್ಲಿ, ಪಂಚಾಯತ್‌ಗಳಲ್ಲಿ, ಚಾವಡಿ ಕಟ್ಟೆಗಳಲ್ಲಿ ಚರ್ಚಿತವಾಗುತ್ತಿರುವುದು ಧನಾತ್ಮಕವಾದ ಬಹುದೊಡ್ಡ ಬೆಳವಣಿಗೆಯಾಗಿದೆ ಎಂದು ನುಡಿದರು.
ಕರ್ನಾಟಕದ ವರ್ತಮಾನ ಕುರಿತು ಮಾತನಾಡುತ್ತ ಎಲ್ಲ ರಾಜಕೀಯ ಪಕ್ಷಗಳಿಗ ಪ್ರಣಾಳಿಕೆ ಅಪ್ರಸ್ತುತವಾಗಿದೆ. ಅಧಿಕಾರ ಗ್ರಹಣವೇ ಮುಖ್ಯ ಪ್ರಣಾಳಿಕೆಯಾಗಿದೆ. ಕಟುವಾಸ್ತವದಲ್ಲಿ ಮುಂಬರುವ ಚುನಾವಣೆಯಲ್ಲಿ ರಾಜಕೀಯ, ಸಾಮಾಜಿಕ ದೃಷ್ಟಿಯಿಂದ ನಿರ್ಣಾಯಕವಾದ ಚುನಾವಣೆಯಾಗಿದೆ. ಕೋಮುವಾದಿ ಶಕ್ತಿಗಳು ಬೇಕೇ ಅಥವಾ ಜಾತ್ಯಾತೀತ ಶಕ್ತಿಗಳು ಬೇಕೆ ಎನ್ನುವ ಆಯ್ಕೆ ನಮ್ಮ ಮುಂದಿದಿದೆ. ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಬೇಕಾಗಿದೆ. ಜಾತ್ಯಾತೀತ ಮೌಲ್ಯಗಳಲ್ಲಿ ನಂಬಿಕೆ ಇರುವ ರಾಜಕಾರಣ ಕರ್ನಾಟಕಕ್ಕೆ ಬೇಕಾಗಿದೆ ಎಂದು ಕಳಕಳಿಯಿಂದ ನುಡಿದರು.
ಬಸವತತ್ತ್ವಗಳ ಸುತ್ತ ಬಲಾಢ್ಯ ಸಮುದಾಯಗಳು ಒಂದಾಗಿ ಸಾವಿರಾರು ವರ್ಷಗಳ ವೈದಿಕ ತತ್ವಗಳು ಬೇಡ ಎಂದು ಜನಾಭಿಪ್ರಾಯ ರೂಪಿಸುತ್ತಿರುವುದು ಹೊಸ ಬೆಳವಣಿಗೆಯ ಆರಂಭವಾಗಿದೆ. ಸೈದ್ಧಾಂತಿಕ ತಾತ್ವಿಕ ನೆಲೆಯೊಳಗೆ ಧ್ರುವೀಕರಣಗೊಂಡು ಸಾವಿರಾರು ವರ್ಷಗಳ ವೈದಿಕ ಸಂಸ್ಕೃತಿಗೆ ದೊಡ್ಡ ಹೊಡೆತ ಕೊಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ವರ್ತಮಾನಕ್ಕೆ ಗತಿ, ಲಯ ಕೊಡಲು ನಾವು ತಯಾರಾಗಬೇಕು ಎಂದು ಕರೆ ನೀಡಿದರು.
ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಇವರು ವಿಷಯ ಮಂಡನೆ ಮಾಡುತ್ತ ನಮ್ಮ ಸಾಮಾಜಿಕ ಬದುಕು ವರ್ಣ ವ್ಯವಸ್ಥೆಯ ಮೇಲೆ ನಿಂತಿದೆ. ಮಹಿಳೆಯರ ಅಸಮಾನತೆ, ದೇವದಾಸಿ ಪದ್ಧತಿ ಜೀವಾಂತವಾಗಿದೆ. ಕುಡಿತದಿಂದ ಕುಟುಂಬಗಳು ನಾಶವಾಗುತ್ತದೆ. ಮರ್ಯಾದ ಹತ್ಯೆಗಳಾಗುತ್ತಿವೆ. ಪರಿಸರ ತ್ವರಿತಗತಿಯಲ್ಲಿ ನಾಶವಾಗುತ್ತಿದೆ. ಅಂಧಶ್ರದ್ಧೆ ಇದೆ. ಈ ಹಿನ್ನೆಲೆಯಲ್ಲಿ ಮೌಢ್ಯ ನಿಷೇಧದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾದೇಶಿಕ ಇಲ್ಲವಾದರೆ ರಾಷ್ಟ್ರೀಯತೆಗೆ ಅರ್ಥವಿಲ್ಲ. ನಮಗೆ ಕನ್ನಡ ನುಡಿ ಇತ್ತು. ಕನ್ನಡ ನಾಡು ಇರಲಿಲ್ಲ. ಏಕೀಕರಣದಿಂದ ಭಾಷಿಕವಾಗಿ ಒಗ್ಗೂಡಿದೆವು. ಆದರೆ ಆಡಳಿತದಲ್ಲಿ, ಶಿಕ್ಷಣದಲ್ಲಿ ಕನ್ನಡ ತರುವ ಕನಸು ಸಂಪೂರ್ಣವಾಗಿ ನೆರವೇರಲಿಲ್ಲ ಎಂದು ತಿಳಿಸಿದರು.
ನಮ್ಮ ಭಾಗದವರನ್ನೆ ವಿಶ್ವವಿದ್ಯಾಲಯಗಳಿಗೆ ಕುಲಸಚಿವರು ಮತ್ತು ಕುಲಪತಿಗಳನ್ನಾಗಿ ನೇಮಕ ಮಾಡಬೇಕು. ನಿಗಮಗಳು ಮಂಡಳಿಗಳು, ಪ್ರಾಧಿಕಾರಗಳು, ಅಕಾಡೆಮಿಗಳಲ್ಲಿ ಸದಸ್ಯತ್ವ, ಅಧ್ಯಕ್ಷರ ಆಯ್ಕೆ ಸಾಂಸ್ಕೃತಿಕ ಮೀಸಲಾತಿ ಒಳಪಡುವ ವಿಚಾರವಾಗಿದೆ. ರಾಜ್ಯೋತ್ಸವ ಪ್ರಶಸ್ತಿ ವಿತರಣೆಯಲ್ಲೂ ಪ್ರಾದೇಶಿಕ ಅಸಮಾನತೆ ಇದೆ. ಈ ಎಲ್ಲದರಲ್ಲೂ ಸಾಂಸ್ಕೃತಿಕ ಮೀಸಲಾತಿಯ ಅಗತ್ಯವಿದೆ ಎಂದು ನುಡಿಯುತ್ತ ದಾಬೋಲ್‌ಕರ್, ಪಾನ್ಸ್‌ರೆ, ಎಂ.ಎಂ.ಕಲಬುರ್ಗಿ, ಶ್ರೀಮತಿ ಗೌರಿ ಲಂಕೇಶ್ ಇವರ ಕೊಲೆಗಳು, ಯಾರೂ ವಿಚಾರ ಮಾಡಬೇಡಿ ಎಂದು ಸಾರುತ್ತಿವೆ. ಜೀವ ಭಯದಿಂದ ಕರ್ನಾಟಕದಲ್ಲಿ ವಿಚಾರವಂತರು ಮಾತನಾಡದಿರುವ ಪರಿಸ್ಥಿತಿ ಬಂದಿದೆ. ಸಹಿಷ್ಣುತೆ ಕಡಿಮೆಯಾಗುತ್ತಿದೆ. ಬಂಡಾಯದ ಎಲ್ಲ ಬರಹಗಾರರು ಕ್ರಿಯಾಶೀಲರಾಗಿದ್ದಾರೆ. ಆದರೆ ಸಂಘಟಿತ ಧ್ವನಿ ಇತ್ತೀಚೆಗೆ ನಿಂತಿರುವ ದುಃಸ್ಥಿತಿ ಕಾಣುತ್ತಿದ್ದೇವೆ. ನಾವೆಲ್ಲ ಒಟ್ಟಾಗದಿದ್ದರೆ ಸರ್ವನಾಶ ಕಾದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡ ವಿಶ್ವವಿದ್ಯಾಲಯವನ್ನು ಕುರಿತು ಮಾತನಾಡುತ್ತ ನೀವೆಲ್ಲ ಒಗ್ಗೂಡಿ ಕನ್ನಡ ವಿಶ್ವವಿದ್ಯಾಲಯವನ್ನು ಇನ್ನಷ್ಟು ಘನತೆಗೆ ಒಯ್ಯಬೇಕು. ನಿಮ್ಮ ಸಂಶೋಧನೆಗಳು ನಿಮ್ಮ ವಿದ್ಯಾರ್ಥಿಗಳಿಗೆ ಮೊದಲು ಮುಟ್ಟಬೇಕು. ಕಲಿಸುತ್ತಲೇ ಸಂಶೋಧನೆ ಮಾಡಿ ಎಂದು ಕಿವಿಮಾತು ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿ ಅವರು ವಿಷಯ ಮಂಡಿಸುತ್ತ ಅಂಬೇಡ್ಕರ್ ಅವರ ರಾಜಕೀಯ ಸಾಮಾಜಿಕ ಸಾಂಸ್ಕೃತಿಕ ಪ್ರಜಾಪ್ರಭುತ್ವ ಇಂದಿನ ಕಾಲಘಟ್ಟಕ್ಕೆ ಅಂತಿಮವಾದ ಪರಿಹಾರವಾಗಿದೆ. ಬುದ್ಧ, ಬಸವ, ಅಂಬೇಡ್ಕರ್ ಮುಂದಿನ ದಿನಗಳಲ್ಲಿ ಪುನಃ ಆಗಮಿಸುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ವೇದಿಕೆಯಲ್ಲಿದ್ದ ಗಣ್ಯರನ್ನು ಗೌರವಿಸಿ ಮಾತನಾಡುತ್ತ ಈ ದಿನ ಪೆರಿಯಾರ್ ಅವರ ೧೩೮ನೇ ಜನ್ಮದಿನವಾಗಿದೆ. ಈ ದಿನವನ್ನು ಮೌಢ್ಯ ವಿರೋಧಿ ದಿನಾಚರಣೆ ಎಂದು ವಿದ್ಯಾವಂತರು ಭಾವಿಸಿದರೆ ನಾವು ಪೆರಿಯಾರ್ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಪೆರಿಯಾರ್ ಅವರ ವಿಚಾರದೊಳಗಿರುವ ಸಾಮಾಜಿಕ ರಾಜಕೀಯ ವಿದ್ಯಾಮಾನಗಳನ್ನು ನೆನಪು ಮಾಡಿಕೊಂಡು ಆ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಕಟ್ಟುವ ಇಚ್ಛಾಶಕ್ತಿ ನಮಗೆ ಬರಲಿ ಎಂದು ಬಯಸಿದರು.
ವೇದಿಕೆಯಲ್ಲಿ ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಡಾ.ಮಂಜುನಾಥ ಬೇವಿನಕಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು. ಡಾ.ಕೆ. ರಮೇಶ ನಿರೂಪಿಸಿ, ವಂದಿಸಿದರು. ಸಂಗೀತ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಚಾರಸಂಕಿರಣದಲ್ಲಿ ವಿಶ್ವವಿದ್ಯಾಲಯದ ಡೀನರು, ಆಹ್ವಾನಿತ ಗಣ್ಯರು, ಬೋಧಕ ವೃಂದ, ಆಡಳಿತ ವೃಂದ, ವಿದ್ಯಾರ್ಥಿಗಳು, ನಾಗರೀಕರು ಆಸಕ್ತಿಯಿಂದ ಭಾಗವಹಿಸಿದರು.
ಊಟದ ನಂತರ ಭುವನವಿಜಯದಲ್ಲಿ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಚಿಂತಕರಾದ ಡಾ.ಚಂದ್ರಶೇಖರ ಪಾಟೀಲ ಅವರು ಉದ್ಘಾಟಿಸಿದರು. ಮಳವಳ್ಳಿ ಮಹಾದೇವಸ್ವಾಮಿ ಮತ್ತು ತಂಡದವರಿಂದ ಮಂಟೇಸ್ವಾಮಿ ಕಥಾ ಭಾಗ ಕಾರ್ಯಕ್ರಮ ನಡೆಯಿತು. ಬಳ್ಳಾರಿ ಪತ್ರಕರ್ತರ ತಂಡದವರು ಅಭಿಮನ್ಯು ಕಾಳಗದ ದೊಡ್ಡಾಟವನ್ನು ಪ್ರದರ್ಶಿಸಿದರು.

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ-೨೫ ಕರ್ನಾಟಕದ ಜ್ವಲಂತ ಸಮಸ್ಯೆಗಳು: ನೀರು, ಬರ ನಿರ್ವಹಣೆ ವಿಚಾರಸಂಕಿರಣದ ಉದ್ಘಾಟನೆ

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ-೨೫
ಕರ್ನಾಟಕದ ಜ್ವಲಂತ ಸಮಸ್ಯೆಗಳು: ನೀರು, ಬರ ನಿರ್ವಹಣೆ ವಿಚಾರಸಂಕಿರಣದ
ಉದ್ಘಾಟನೆಯ ಪತ್ರಿಕಾ ವರದಿ- ೧೪.೯.೨೦೧೭

ನೀರಿನ ಬರಕ್ಕಿಂತ ಮಾನವೀಯತೆಯ ಬರ ಬಹಳ ಕ್ರೂರವಾದುದು ಎಂದು ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ದಿನೇಶ್ ಅಮೀನ ಮಟ್ಟು ಅವರು ಕಳಕಳಿಯಿಂದ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೪.೯.೨೦೧೭ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕದ ಜ್ವಲಂತ ಸಮಸ್ಯೆಗಳು: ನೀರು, ಬರ ನಿರ್ವಹಣೆ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೀರಿನ ಹಂಚಿಕೆಯಲ್ಲಿ ನ್ಯಾಯಾಲಯ ತಮಿಳುನಾಡಿನ ಪರವಾಗಿ ಯಾಕೆ ಇದೆ ಎಂದರೆ ಅಲ್ಲಿ ತಮಿಳು ಮೂಲದ ನ್ಯಾಯಧೀಶರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಾಧ್ಯಮದವರಿದ್ದಾರೆ. ಅವರಿಂದ ಒತ್ತಡ ಇದೆ. ಆದರೆ ಕರ್ನಾಟಕದಲ್ಲಿ ಈ ರೀತಿಯ ಒತ್ತಡ ಇಲ್ಲ. ರಾಜಕೀಯ ನಾಯಕತ್ವದ ಸಮಸ್ಯೆ, ಮಾಧ್ಯಮದ ಮೂಲಕ ಒತ್ತಡ ಹಾಕಲಾಗದ ಸಮಸ್ಯೆ ಇದೆ ಎಂದು ವಿವರಿಸಿದರು.
ರೈತರು ಕೃಷಿಯಲ್ಲಿ ನೀರಿನ ನಿರ್ವಹಣೆ ಮಾಡಲು ವೈಜ್ಞಾನಿಕ ಅರಿವು ಹೊಂದಬೇಕಿದೆ. ಅತಿ ನೀರಿನ ಬಳಕೆ, ಕೀಟನಾಶಕದ ಬಳಕೆ, ರಸಗೊಬ್ಬರದ ಬಳಕೆಯಿಂದ ಭೂಮಿ ಜೌಗು ಆಗಿ ಫಲವತ್ತತೆ ನಾಶವಾಗುತ್ತದೆ. ನೀರು, ಬರ, ಕೃಷಿ ನಡುವೆ ಪರಸ್ಪರ ಸಂಬಂಧ ಇದೆ. ನೀರು, ಬರ ನಿರ್ವಹಣೆಯಲ್ಲಿ ಪ್ರಭುತ್ವದೊಂದಿಗೆ ನಾಗರೀಕರ ಪಾತ್ರವೂ ಇದೆ. ನಾವೆಲ್ಲ ಆತ್ಮ ವಂಚಕರಾಗಿದ್ದೇವೆ. ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ರೈತರಿಂದ ಕಡಿಮೆ ಬೆಲೆಗೆ ವಸ್ತುಗಳನ್ನು ಪಡೆಯಲು ಯೋಚಿಸುವುದೇ ಅಮಾನವೀಯ ಅನಿಸುತ್ತದೆ. ಪ್ರತಿ ೨ ಗಂಟೆಗೊಮ್ಮೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಲೇವಾದೇವಿಗಾರರ ಒತ್ತಡದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ವಿಷಯದಲ್ಲಿ ರಾಜಕೀಯ ಸಲ್ಲದು. ಸಮೀಕ್ಷೆ ಪ್ರಕಾರ ರೈತನ ಮಾಸಿಕ ಆದಾಯ ೩,೦೮೦/- ರೂ. ಇದೆ. ಭೂ ಸ್ವಾದೀನ ತಡೆಯಲು ಸಾಧ್ಯವಾಗುತ್ತಿಲ್ಲ. ಭೂಸುಧಾರಣಾ ಕಾಯಿದೆ ರೈತರಿಗೆ ಅನುಕೂಲವಾಗಿಲ್ಲ. ರೈತರ ಸಾಲಮನ್ನಾ ಅನಿವಾರ್ಯವಾಗಿದ್ದು, ಸಾಲ ಮನ್ನಾ ರಾಜಕೀಯಕರಣಗೊಂಡಿದೆ ಎಂದು ಸಾಲಮನ್ನಾ ಕುರಿತು ಅಂಕಿ ಅಂಶಗಳನ್ನು ಒದಗಿಸಿದರು.
ಕೃಷಿಯನ್ನು ಲಾಭದಾಯಕವಾಗಿ ಮಾಡುವ ತನಕ ರೈತ ಸಂಬಂಧಿ ಸಮಸ್ಯೆಗಳು ತಪ್ಪುವುದಿಲ್ಲ ಎಂದು ತಿಳಿಸುತ್ತ, ನಗರಗಳಲ್ಲಿ ಶೌಚಕ್ಕೆ ನೀರನ್ನು ಕಡಿಮೆ ಬಳಸುವ ತಾಂತ್ರಿಕತೆಯನ್ನು ಕಂಡುಕೊಳ್ಳಬೇಕು. ಆಗ ನಗರಗಳಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟರು.
ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಟಿ.ಆರ್. ಚಂದ್ರಶೇಖರಯ್ಯ ಅವರು ವಿಷಯ ವಿಸ್ತರಣೆ ಮಾಡುತ್ತ ವಚನಕಾರರು ನೀರನ್ನು ಪರಿಭಾವಿಸಿರುವ ರೀತಿ ಇಂದಿಗೂ ಪ್ರಸ್ತುತವಾಗಿದೆ. ನೀರಿಗೆ ಸೂತಕ ಮೈಲಿಗೆ ಇಲ್ಲ. ನೀರು ತಾರತಮ್ಯ ಮಾಡುವುದಿಲ್ಲ. ಬರ, ನೀರು, ನಿರ್ವಹಣೆ, ಜಾಗತಿಕ ಮಟ್ಟದ ಸಮಸ್ಯೆಯಾಗಿದೆ. ಬರ ಸಮಾಜದಲ್ಲಿ ಎಲ್ಲರಿಗೂ ಸಮಸ್ಯೆ ತರುವುದಿಲ್ಲ. ವಾಣಿಜ್ಯ ಉದ್ಯಿಮೆಗಳು, ನೌಕರಶಾಹಿ, ರಾಜಕಾರಣಿಗಳು, ಬರದ ಲಾಭ ಪಡೆಯುತ್ತಾರೆ. ರೈತರು ವಿಕಲಚೇತನರು ಅಂಚಿನಲ್ಲಿರುವವರು ತೊಂದರೆ ಅನುಭವಿಸುತ್ತಾರೆ. ಹಸಿವಿನ ಬಗ್ಗೆ ಪಿಎಚ್.ಡಿ. ಅಧ್ಯಯನ ಮಾಡುವವರ ಸಂಖ್ಯೆ ಅತ್ಯಂತ ಕಡಿಮೆ. ಹಸಿವಿನಿಂದ ಸಾಯುವುದು ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗಿಲ್ಲ. ಬರದ ಸಮಸ್ಯೆಯು ಆಹಾರದ ಉತ್ಪಾದನೆಯ ಕೊರತೆಯಿಂದ ಬರುವುದಿಲ್ಲ. ಬರ ದೈವದ ಶಾಪವಲ್ಲ. ಸಮಾಜ, ಪ್ರತಿ ವ್ಯಕ್ತಿಗೆ ಬರದ ನಿರ್ವಹಣೆ ಕುರಿತು ಹೊಣೆಗಾರಿಕೆ ಇದೆ. ಅಂಬೇಡ್ಕರ್ ಹೇಳಿದಂತೆ ನಮಗೆ ಸಾಮಾಜಿಕ ಹಕ್ಕು ಬೇಕು. ರಾಜಕೀಯ ಸ್ವಾತಂತ್ರ್ಯ ಅಲ್ಲ ಎಂದು ನುಡಿದರು.
ಪ್ರಾಧ್ಯಾಪಕರಾದ ಡಾ. ಸಿ.ಜಿ. ಲಕ್ಷ್ಮಿಪತಿ ಅವರು ವಿಷಯ ವಿಸ್ತರಣೆ ಮಾಡುತ್ತ ಸೈದ್ಧಾಂತಿಕ ವಿಚಾರಗಳಿಗೆ ನಡೆಯುವ ಕೊಲೆಗಳು, ನಿರಾಶ್ರಿತ ಮಹಿಳೆಯರ ಸಮಸ್ಯೆ, ಕಾಣೆಯಾಗುವ ಮಹಿಳೆಯರ ಸಮಸ್ಯೆ, ಮಾರಾಟವಾಗುವ ಮಹಿಳೆಯರ ಸಮಸ್ಯೆ ಇವೆಲ್ಲ ನಾಗರಿಕ ಸಮಾಜದ ಜ್ವಲಂತ ಸಮಸ್ಯೆಗಳಾಗಿವೆ ಎಂದರು.
ಸಾಮಾಜಿಕ ಕಾರ್ಯಕರ್ತರಾದ ಶ್ರೀ ಜನಾರ್ದನ ಕೆಸರಗದ್ದೆ ಅವರು ವಿಷಯ ವಿಸ್ತರಣೆ ಮಾಡುತ್ತ ಲೆಟ್ ಅಜ್ ನಾಟ್ ಡಿಸ್ಟರ್ಬ್ ವಾಟರ್ ಸಿನೆಮಾ ಕುರಿತು ನೀರಿನ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡುತ್ತ ೩೦ ವರ್ಷಗಳ ಹಿಂದೆ ನೀರಿನ ಸಮಸ್ಯೆ ಇರಲಿಲ್ಲ. ಇಂದು ನೀರಿನ ನಿರ್ವಹಣೆ ಮತ್ತು ಹಂಚಿಕೆ ಸಮರ್ಪಕವಾಗಿಲ್ಲ. ಜಲ ಸಂರಕ್ಷಣೆ, ಜಲ ಮರುಪೂರಣ, ಯಾವ ಕಾಲದಲ್ಲಿ ಎಂತಹ ಬೆಳೆ ಬೆಳೆಯಬೇಕು ಎಂಬ ಬಗ್ಗೆ ತಿಳುವಳಿಕೆಯ ಕೊರತೆ ಇದೆ ಎಂದರು.
ಅಧ್ಯಕ್ಷತೆ ವಹಿಸಿ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ವೇದಿಕೆಯಲ್ಲಿದ್ದ ಗಣ್ಯರನ್ನು ಗೌರವಿಸಿ ಮಾತನಾಡುತ್ತ ನಾವು ಗ್ರಾಮ ಸಂಸ್ಕೃತಿಯನ್ನು ಮರಳಿ ತರಬೇಕು. ಗ್ರಾಮ ಸಂಸ್ಕೃತಿಯಲ್ಲಿ ನೀರಿನ ಬಳಕೆಯಲ್ಲಿ ಮಿತವ್ಯಯವಿತ್ತು. ನೀರನ್ನು ದುಂದುಬಳಕೆ ಮಾಡುತ್ತಿರಲಿಲ್ಲ. ನಾವಿಂದು ನೀರಿನ ನಿರ್ವಹಣೆಯಲ್ಲಿ ಜೀವನ ಕ್ರಮ ಬದಲಾಯಿಸಿಕೊಳ್ಳಬೇಕಾಗಿದೆ. ಬಂಡವಾಳಶಾಹಿ ಸೃಷ್ಟಿಸಿದ ಭ್ರಮೆಗಳಿಗೆ ನಾವು ಮಾರುಹೋಗಿದ್ದೇವೆ ಎಂದು ನುಡಿದರು.
ವೇದಿಕೆಯಲ್ಲಿ ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಅವರು ಉಪಸ್ಥಿತರಿದ್ದರು. ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅವರು ಸ್ವಾಗತಿಸಿದರು. ಡಾ.ರಮೇಶನಾಯಕ ಅವರು ಪ್ರಾಸ್ತಾವಿಕ ನುಡಿದರು. ಡಾ.ಎಸ್.ವೈ. ಸೋಮಶೇಖರ ಅವರು ನಿರೂಪಿಸಿದರು. ಡಾ. ವಿಠ್ಠಲರಾವ್ ಟಿ. ಗಾಯಕ್ವಾಡ್ ಅವರು ವಂದಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಚಾರಸಂಕಿರಣದಲ್ಲಿ ವಿಶ್ವವಿದ್ಯಾಲಯದ ಡೀನರು, ಆಹ್ವಾನಿತ ಗಣ್ಯರು, ಬೋಧಕ ವೃಂದ, ಆಡಳಿತ ವೃಂದ, ವಿದ್ಯಾರ್ಥಿಗಳು, ನಾಗರೀಕರು ಆಸಕ್ತಿಯಿಂದ ಭಾಗವಹಿಸಿದರು.
ನಂತರ ಭುವನವಿಜಯದಲ್ಲಿ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿರಿಯ ರಂಗಭೂಮಿ ಕಲಾವಿದರಾದ ಶ್ರೀಮತಿ ಸುಭದ್ರಮ್ಮ ಮನ್ಸೂರ್ ಅವರು ಉದ್ಘಾಟಿಸಿದರು. ಅನಂತರ ಶ್ರೀ ಬಸವರಾಜ ಸಿಗ್ಗಾಂವ ಮತ್ತು ತಂಡದವರಿಂದ ತತ್ತ್ವಪದಗಳ ಹಾಡುಗಾರಿಕೆ ನಡೆಯಿತು. ಬೆಂಗಳೂರು ಏಷಿಯನ್ ಥಿಯೇಟರ್ ತಂಡದಿಂದ ವರಾಹ ಪುರಾಣ ನಾಟಕ ಪ್ರದರ್ಶನವಾಯಿತು.

01 (3)06 (1)21728758_10208395449198865_1672892581388514385_o21729046_10208395450598900_8208955331775455028_o03 (3)07

ದಿನಾಂಕ 14.9.2017ರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತಿರುವ ನಾಡೋಜ ಶ್ರೀಮತಿ ಸುಭದ್ರಮ್ಮ ಮನ್ಸೂರ್‍ ಅವರು,  ಶ್ರೀ ಬಸವರಾಜ ಸಿಗ್ಗಾಂವ ಮತ್ತು ತಂಡದಿಂದ ತತ್ತ್ವಪದಗಳ ಹಾಡುಗಾರಿಕೆ, ಹಾಗೂ   ಬೆಂಗಳೂರು ಏಷಿಯನ್‍ ಥಿಯೇಟರ್‍ ಅವರಿಂದ ವರಾಹ ಪುರಾಣ ನಾಟಕ ಪ್ರದರ್ಶನ

21752737_10208404796032530_3155355697834195689_o21740795_10208404797872576_8397206283962326928_o21762819_10208404769551868_4292304862471136829_o21740882_10208404769631870_3026300868264505885_o21458046_10208404769591869_6221419492016766709_o

 

 

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬದ ಸಾಂಸ್ಕೃತಿಕ ಕಾ‍ರ್ಯಕ್ರಮಗಳು ಭುವನವಿಜಯದಲ್ಲಿ ಆರಂಭವಾದವು. 13.9.2017ರಂದು ಕಲಾಗಂಗೋತ್ರಿ ತಂಡವು ಪ್ರದರ್ಶಿಸಿದ ಮುಖ್ಯಮಂತ್ರಿ ನಾಟಕದ ಛಾಯಾಚಿತ್ರಗಳು

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ-೨೫ ಭವಿಷ್ಯದ ಕನ್ನಡ ವಿಶ್ವವಿದ್ಯಾಲಯ ವಿಚಾರಸಂಕಿರಣದ ಉದ್ಘಾಟನೆ

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ-೨೫
ಭವಿಷ್ಯದ ಕನ್ನಡ ವಿಶ್ವವಿದ್ಯಾಲಯ ವಿಚಾರಸಂಕಿರಣದ
ಉದ್ಘಾಟನೆಯ ಪತ್ರಿಕಾ ವರದಿ- ೧೩.೯.೨೦೧೭

ಇಂದಿನ ಮಾಹಿತಿ ಸ್ಪೋಟಕ ಯುಗದಲ್ಲಿ ಮಾಹಿತಿಗಳು ಸರಕಾಗಿವೆ. ಚಿಂತನೆ ಶೂನ್ಯವಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೩.೯.೨೦೧೭ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಭವಿಷ್ಯದ ಕನ್ನಡ ವಿಶ್ವವಿದ್ಯಾಲಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭವಿಷ್ಯದ ವಿಶ್ವವಿದ್ಯಾಲಯ ಎಂದರೆ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ಕಾಯ್ದೆಯನ್ನು ಮಾಡಬೇಕು. ಕರ್ನಾಟಕದ ಉಳಿದೆಲ್ಲ ವಿಶ್ವವಿದ್ಯಾಲಯಗಳ ಜೊತೆ ಸೇರಿಸಬಾರದು. ಸೇರಿಸಿದರೆ ಇದೊಂದು ಸಾಮಾನ್ಯ ವಿಶ್ವವಿದ್ಯಾಲಯವಾಗುತ್ತದೆ. ಇದಕ್ಕೆ ಸ್ವಾಯತ್ತತೆ ಬೇಕು. ಕನ್ನಡ ವಿಶ್ವವಿದ್ಯಾಲಯದ ತನ್ನ ಸಿದ್ಧಾಂತಗಳನ್ನು ಆಚರಣೆಗೆ ತರಲು ಮತ್ತು ಪ್ರಸಾರಾಂಗದ ಪ್ರಕಟಣೆಗಳ ಕುರಿತು ಜನಸಾಮಾನ್ಯರೊಂದಿಗೆ ಸಂವಾದದ ಅಗತ್ಯವಿದೆ. ಕನ್ನಡ ವಿಶ್ವವಿದ್ಯಾಲಯದ ಅದ್ಭುತ ಕೆಲಸಗಳು ಕರ್ನಾಟಕದ ಹೊರಗೆ ತಲುಪಿಲ್ಲ. ಹೊರ ಜಗತ್ತಿಗೆ ಪಂಪನ ಬಗ್ಗೆ ಗೊತ್ತಿಲ್ಲ. ಕನ್ನಡ ಶಾಸ್ತ್ರೀಯ ಜಾನಪದ ಪಠ್ಯಗಳನ್ನು ಜಗತ್ತಿಗೆ ಪರಿಚಯಿಸಬೇಕು. ಜೊತೆಗೆ ಕನ್ನಡ ವಿಶ್ವವಿದ್ಯಾಲಯದ ಪಿಎಚ್.ಡಿ ಪ್ರಬಂಧಗಳನ್ನು ಒಳಗೊಂಡು ಬಹು ಮಾಧ್ಯಮಗಳ ಮೂಲಕ ಪ್ರಕಟಿಸಬೇಕು. ಇದಕ್ಕೆ ಪ್ರತ್ಯೇಕ ವೆಬ್‌ಸೈಟ್‌ನ ಅಗತ್ಯವಿದೆ. ವಿಜ್ಞಾನದಲ್ಲಿ ವಿಶ್ವವಿದ್ಯಾಲಯಗಳು ಪ್ರವರ್ಧಮಾನಕ್ಕೆ ಬಂದಂತೆ ಮಾನವೀಕ ಮತ್ತು ಸಾಮಾಜಿಕ ವಿಷಯಗಳ ವಿಶ್ವವಿದ್ಯಾಲಯಗಳು ಪ್ರವರ್ಧಮಾನಕ್ಕೆ ಬರುತ್ತಿಲ್ಲ. ಈ ಕುರಿತು ಕನ್ನಡ ವಿಶ್ವವಿದ್ಯಾಲಯ ಚಿಂತನೆ ಮಾಡುತ್ತಿದೆ ಎಂದರು.
ವಿಶ್ರಾಂತ ಕುಲಪತಿ ಡಾ. ಎ. ಮುರಿಗೆಪ್ಪ ಅವರು ವಿಷಯ ವಿಸ್ತರಣೆ ಮಾಡುತ್ತ ಕನ್ನಡ ಅಳಿವಿನ ಅಂಚಿನಲ್ಲಿರುವ ಭಾಷೆ ಅಲ್ಲ, ಅಳಿವಿನಂಚಿನಲ್ಲಿರುವ ಉಪಭಾಷೆಗಳನ್ನು ದಾಖಲೀಕರಣ ಮಾಡಬೇಕು. ವಿಶ್ವವಿದ್ಯಾಲಯದ ಎಲ್ಲ ಕೆಲಸ ಕಾರ್ಯ ಚಟುವಟಿಕೆಗಳನ್ನು ವೆಬ್‌ಸೈಟ್‌ಗೆ ಹಾಕುವ ಮೂಲಕ ವಿಸ್ತಾರಗೊಳಿಸಬೇಕು ಎಂದು ತಿಳಿಸಿದರು.
ವಿಶ್ರಾಂತ ಕುಲಪತಿಯವರಾದ ಡಾ.ಕೆ.ವಿ.ನಾರಾಯಣ ಅವರು ಮಾತನಾಡುತ್ತ ೨೫ ವರ್ಷಗಳಲ್ಲಿ ಕನ್ನಡ ವಿಶ್ವವಿದ್ಯಾಲಯ ಅದ್ಭುತವಾಗಿ ಬೌದ್ದಿಕವಾಗಿ ಬೆಳೆದಿದೆ. ಆರಂಭದಲ್ಲಿ ಕರ್ನಾಟಕದ ಯಾವ ವಿಶ್ವವಿದ್ಯಾಲಯಗಳಿಗೂ ಇಲ್ಲದ ಸವಾಲುಗಳು ಕನ್ನಡ ವಿಶ್ವವಿದ್ಯಾಲಯಕ್ಕೆ ಇದ್ದವು. ಈಗ ಕನ್ನಡ ವಿಶ್ವವಿದ್ಯಾಲಯವನ್ನು ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ ಪಟ್ಟಿಗೆ ಸೇರಿಸಲಾಗುತ್ತಿದೆ. ಇದರಿಂದ ಕನ್ನಡ ವಿಶ್ವವಿದ್ಯಾಲಯ ತನ್ನ ಚಹರೆ, ಪ್ರತ್ಯೇಕತೆ ಅನನ್ಯತೆಯನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಬೇಕಾಗುತ್ತದೆ. ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಇರುವ ಸದ್ಭಾವನೆಯನ್ನು ಪೋಷಿಸುವ ಗಟ್ಟಿಗೊಳಿಸುವ ಕೆಲಸ ಆಗಬೇಕಾಗಿದೆ. ಸದ್ಭಾವನೆಯನ್ನು ಸಾಮಾಜಿಕ ಸಮೀಕ್ಷೆಯಾಗಿ ಸಮಾಜಕ್ಕೆ ಉಪಯುಕ್ತವಾಗುವಂತೆ ಪರಿವರ್ತಿಸಿಕೊಳ್ಳಬೇಕು ಎಂದು ತಿಳಿಸುತ್ತ ಕನ್ನಡ ವಿಶ್ವವಿದ್ಯಾಲಯದಲ್ಲಿ ಇರುವ ಬಹಳ ದೊಡ್ಡ ದತ್ತಸಂಚಯವನ್ನು ಹೊರಜಗತ್ತಿಗೆ ಪರಿಚಯಿಸಬೇಕಾಗಿದೆ ಎಂದು ನುಡಿದರು.
ವಿಶ್ರಾಂತ ಕುಲಪತಿಯವರಾದ ಡಾ.ಹಿ.ಚಿ.ಬೋರಲಿಂಗಯ್ಯ ಅವರು ಮಾತನಾಡುತ್ತ ಅಧ್ಯಾಪಕರು ಹೊಸ ಕಾಲಕ್ಕೆ ಸಜ್ಜುಗೊಳ್ಳುವ ಮೂಲಕ ನಮ್ಮನ್ನು ನಾವು ಪರಿಶೀಲಿಸಿಕೊಳ್ಳಬೇಕಾಗಿದೆ. ಮಾನವೀಯ ಮೌಲ್ಯಗಳಿಗಿಂತ ಹಣವೇ ಪ್ರಧಾನವಾಗುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಸಂವರ್ಧನೆ ಮಾಡುವ ಕೆಲಸವಾಗಬೇಕು. ಸಾಹಿತ್ಯ ಹೊರತುಪಡಿಸಿ ಮಾನವಿಕಗಳ ಕಡೆ ಗಮನಹರಿಸಬೇಕು ಎಂದು ನುಡಿದರು.
ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ.ಸರಜೂ ಕಾಟ್ಕರ್ ಅವರು ಮಾತನಾಡುತ್ತ ಶಾಂತಿನಿಕೇತನದ ರೀತಿ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟುವ ಕನಸು ಕಂಬಾರರದಾಗಿತ್ತು. ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟವಾಗಿರುವ ಪುಸ್ತಕಗಳಿಗೆ ಭವಿಷ್ಯದಲ್ಲಿ ಓದುಗರನ್ನು ತಯಾರು ಮಾಡಬೇಕಾಗಿದೆ. ಇಂಗ್ಲಿಷ್ ಹಿಂದಿ, ಸಂಸ್ಕೃತ, ಆಧುನಿಕ ಇತಿಹಾಸ ಕಲಿಸುವ ಕೆಲಸವಾಗಬೇಕಾಗಿದೆ. ಇಲ್ಲಿ ಆಕರಗಳು ನಿರ್ಮಾಣವಾಗಬೇಕು ಎಂದು ತಿಳಿಸಿದರು.
ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ವೇದಿಕೆಯಲ್ಲಿದ್ದ ಗಣ್ಯರನ್ನು ಗೌರವಿಸಿ ಮಾತನಾಡುತ್ತ ಡಾ.ಚಂದ್ರಶೇಖರ ಕಂಬಾರ ಅವರು ಕುಲಪತಿಗಳಾಗಿದ್ದ ಸಂದರ್ಭದ ರಾಜಕೀಯ ಸಾಂಸ್ಕೃತಿಕ ಪರಿಸರಕ್ಕೂ ಇವತ್ತಿಗೂ ಬಹಳ ವ್ಯತ್ಯಾಸಗಳಿವೆ. ಎಲ್ಲ ವಿಶ್ವವಿದ್ಯಾಲಯಗಳ ಜೊತೆ ಕನ್ನಡ ವಿಶ್ವವಿದ್ಯಾಲಯವನ್ನು ಸೇರಿಸುತ್ತಿರುವ ಕಾಯ್ದೆಗೆ ಸಂಬಂಧಿಸಿದಂತೆ ವೇದಿಕೆಯಲ್ಲಿರುವ ಎಲ್ಲರೂ ಜವಾಬ್ದಾರಿ ಹೊರಬೇಕು ಎಂದು ಕೇಳಿಕೊಳ್ಳುತ್ತ, ಭವಿಷ್ಯದ ಕನ್ನಡ ವಿಶ್ವವಿದ್ಯಾಲಯದ ಕುರಿತು ನೀಡಿದ ಸಲಹೆಗಳನ್ನು ಸಾಕಾರಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದರು.
ವಿಶ್ವವಿದ್ಯಾಲಯದ ಡೀನರಾದ ಡಾ. ಎ. ಮೋಹನ್ ಕುಂಟಾರ ಅವರು ಸ್ವಾಗತಿಸಿದರು. ಡಾ.ಎಫ್.ಟಿ.ಹಳ್ಳಿಕೇರಿ ಅವರು ಪ್ರಾಸ್ತಾವಿಕ ನುಡಿದರು. ಡಾ. ರವೀಂದ್ರನಾಥ ಅವರು ನಿರೂಪಿಸಿದರು. ಡಾ. ವಿಠ್ಠಲರಾವ್ ಟಿ. ಗಾಯಕ್ವಾಡ್ ಅವರು ವಂದಿಸಿದರು. ಸಂಗೀತ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ನಂತರ ಭುವನವಿಜಯದಲ್ಲಿ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿರಿಯ ಸಾಹಿತಿಗಳು ಮತ್ತು ಚಿಂತಕರಾದ ಡಾ.ಕಾಳೇಗೌಡ ನಾಗವಾರ ಅವರು ಉದ್ಘಾಟಿಸಿದರು. ಅನಂತರ ಮೈಸೂರಿನ ಜನಮನ ತಂಡದಿಂದ ಜನಪದ ಮತ್ತು ತತ್ವಪದಗಳ ಗಾಯನ ನಡೆಯಿತು. ಬೆಂಗಳೂರು ಕಲಾ ಗಂಗೋತ್ರಿ ತಂಡದಿಂದ ಮುಖ್ಯಮಂತ್ರಿ ನಾಟಕ ಪ್ರದರ್ಶನವಾಯಿತು.