ಕನಕದಾಸರ ಒಂದೊಂದು ಕೀರ್ತನೆಗಳು ಪದವಿ ಪಡೆಯುವಂತಿವೆ. ವಿಶ್ವವಿದ್ಯಾಲಯಗಳಲ್ಲಿರುವ ಕನಕದಾಸ ಅಧ್ಯಯನ ಪೀಠಗಳ ಮೂಲಕ ಈ ಕೆಲಸ ಆಗುತ್ತಿದೆ ಎಂದು ಕರ್ನಾಟಕ ಸರ್ಕಾರದ ಮಾನ್ಯ ಸಾರಿಗೆ ಸಚಿವರಾದ ಸನ್ಮಾನ್ಯ ಶ್ರೀ ಎಚ್.ಎಂ. ರೇವಣ್ಣ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ಹಾಲುಮತ ಅಧ್ಯಯನ ಪೀಠವು ಮಂಟಪ ಸಭಾಂಗಣದಲ್ಲಿ ೩೦ರಿಂದ ೩೧ನೇ ಜನವರಿ ೨೦೧೮ರ ವರೆಗೆ ಏರ್ಪಡಿಸಿದ್ದ ದಶಮಾನೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಕುರುಬರ ಸಾಂಸ್ಕೃತಿಕ ಪರಿಷತ್ತಿನ ಮೂಲಕ ಭಾರತದ ೧೪ ಭಾಷೆಗೆ ಕನಕದಾಸರ ಚರಿತ್ರೆಯನ್ನು ಭಾಷಾಂತರಿಸಿ ಪುಸ್ತಕ ಬಿಡುಗಡೆ ಮಾಡಲಾಗಿದೆ. ಸಮುದಾಯದ ಸಾಧಕರ ಕುರಿತು ೧೫ ಸಂಪುಟಗಳನ್ನು ಹೊರತರುವ ಪ್ರಯತ್ನ ನಡೆದಿದೆ. ಕನಕದಾಸರು ಇಂದಿಗೂ ಪ್ರಸ್ತುತರಾಗಿದ್ದಾರೆ. ರಾಜ್ಯದ ಕುರಿಗಾರರ ಹಿತದೃಷ್ಟಿಯಿಂದ ಸರ್ಕಾರವು ಕುರಿ ಮಹಾಮಂಡಳಿ ರಚಿಸಿದೆ. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಕಂಬಳಿ ಕೊಡಿಸುವ ಯೋಜನೆಯನ್ನು ಬಜೆಟ್ನಲ್ಲಿದೆ. ಸಮುದಾಯದ ೯ ಅಭ್ಯರ್ಥಿಗಳು, ಐಎಎಸ್, ಐಪಿಎಸ್ ೪೩ ಅಭ್ಯರ್ಥಿಗಳು ಕೆಎಎಸ್ನಲ್ಲಿ ಉತ್ತೀರ್ಣರಾಗಿದ್ದಾರೆ. ಹಿಂದುಳಿದ ಸಮುದಾಯಗಳ ವಸತಿ ನಿಲಯಗಳಿಗಾಗಿ ೩೫ ಕೋಟಿ ಅನುದಾನ ನೀಡಲಾಗಿದೆ ಎಂದು ಉದ್ಘಾಟನಾ ಭಾಷಣದಲ್ಲಿ ಸಚಿವರು ಹೇಳಿದರು.
ಹಾಲುಮತ ಪೀಠದ ದಶಮಾನೋತ್ಸವದ ಪ್ರಯುಕ್ತ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಎ. ಮುರಿಗೆಪ್ಪನವರು ಪೀಠವು ಹಾಲುಮತಕ್ಕೆ ಸಂಬಂಧಿಸಿದ ಇತಿಹಾಸ ಆಚರಣೆ, ಬದುಕು ಸಂಸ್ಕೃತಿಯನ್ನು ಕನ್ನಡಿಗರಿಗೆ ಕೃತಿಗಳ ಮೂಲಕ ಪರಿಚಯಿಸಿದೆ. ಪೀಠವು ಭೂತಕಾಲ ಮತ್ತು ವರ್ತಮಾನ ಕಾಲವಲ್ಲದೆ ಭವಿಷ್ಯತ್ತನ್ನು ನೋಡಬೇಕಾಗಿದೆ. ಇತರೆ ಸಮುದಾಯಗಳು ತಮ್ಮದೇ ಸಂಸ್ಥೆಗಳನ್ನು ನಡೆಸಿಕೊಂಡುಬರುತ್ತಿರುವಂತೆ ಹಾಲುಮತ ಸಮುದಾಯವು ಸಮುದಾಯದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ತನ್ನದೇ ಆದ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಬೇಕು. ಬೇರೆ ಬೇರೆ ಭಾಷೆಗಳಿಗೆ ಕೃತಿಗಳನ್ನು ಭಾಷಾಂತರ ಮಾಡುವ ಮೂಲಕ ಕನ್ನಡದ ಕುರುಬರ ಸಂಸ್ಕೃತಿಯನ್ನು ಪಸರಿಸುವ ಸಾಧ್ಯತೆಗಳಾಗಬೇಕು ಎಂದು ನುಡಿದರು.
‘ಹಾಲುತೆನೆ’ ದಶಮಾನೋತ್ಸವ ನೆನಪಿನ ಸಂಪುಟವನ್ನು ಬಿಡುಗಡೆ ಮಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಶ್ರೀ ಕಾಂತರಾಜು ಅವರು ಹಾಲುಮತ ಸಮಾಜವು ಹಿಂದುಳಿದ ವರ್ಗಗಗಳಲ್ಲಿ ಒಂದಾಗಿರುವ ಕಾರಣಕ್ಕೆ ಮುಖ್ಯವಾಗಿರುತ್ತದೆ. ಅಧ್ಯಯನ ಪೀಠಗಳು ನಮ್ಮ ಸಮಾಜದ ಮುಂದೆ ಚರಿತ್ರೆಯನ್ನು ಕಟ್ಟಿಕೊಡುತ್ತ ಭವಿಷ್ಯದ ಬಗ್ಗೆ ಎಚ್ಚರಿಕೆ ಕೊಡುತ್ತವೆ. ಸೌಮ್ಯ ಸ್ವಭಾವದಿಂದ ಕುಲಕಸುಬುಗಳನ್ನು ನಂಬಿಕೊಂಡು ಬಂದ ಸಮುದಾಯಗಳು ಸಮಾಜಕ್ಕೆ ಅಗತ್ಯ ಸೇವೆ ಮಾಡಿಕೊಂಡು ಸಮಾಜದ ಆರೋಗ್ಯವನ್ನು ಕಾಪಾಡಿಕೊಂಡು ಬಂದಿವೆ. ಈ ಸಮುದಾಯಗಳನ್ನು ಸರ್ಕಾರ ಸಮಾಜ ಕಾಪಾಡಬೇಕಾಗಿದೆ. ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಂವಿಧಾನದಲ್ಲಿರುವ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು ಎಂದು ಹೇಳಿದರು.
ಪ್ರಸಿದ್ಧ ಕವಿಗಳಾದ ಡಾ.ಸಿದ್ಧಲಿಂಗಯ್ಯ ಅವರು ಕುಲವೃತ್ತಿಗಳು: ಪರಂಪರೆ ಮತ್ತು ಆಧುನಿಕತೆ ಕುರಿತ ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿ ವಿದ್ವಾಂಸರ ವಿಶ್ವವಿದ್ಯಾಲಯವಾಗಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರವು ಸಕಾಲಕ್ಕೆ ಅನುದಾನಗಳನ್ನು ಬಿಡುಗಡೆ ಮಾಡಿ ವಿಶ್ವವಿದ್ಯಾಲಯವನ್ನು ಬೆಳೆಸಬೇಕು. ಕರ್ನಾಟಕದ ಮೂಲಪುರುಷರು ಯಾರು ಎಂದು ತಿಳಿಯಲು ಹಾಲುಮತ ಸಮುದಾಯದ ಅಧ್ಯಯನ ಮಾಡಬೇಕು. ಕುರುಬ ಜನಾಂಗದ ಜಾನಪದ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಹಾಲುಮತ ಜಾತಿ ಅಲ್ಲ, ಕನ್ನಡ ಸಂಸ್ಕೃತಿಯ ಮೇಲಿನ ಪ್ರೀತಿ ಆಗಿದೆ. ಸುಧಾರಿಸಿದ ಕಂಬಳಿಗಳನ್ನು ಪಂಚತಾರ ಹೊಟೇಲ್ಗಳು ಬಳಕೆ ಮಾಡಬೇಕು. ಕಂಬಳಿಗಳಿಗೆ ಮಾನ್ಯತೆ ಸಿಕ್ಕರೆ ಆರ್ಥಿಕ ಸಬಲೀಕರಣ ಆಗುತ್ತದೆ ಎಂದು ನುಡಿದರು.
ಮಾಜಿ ಸಂಸದರಾದ ಶ್ರೀ ಕೆ. ವಿರೂಪಾಕ್ಷಪ್ಪ ಅವರು ಛಾಯಾಚಿತ್ರಗಳ ಆಲ್ಬಂ ಅನ್ನು ಬಿಡುಗಡೆ ಮಾಡಿ ಹಾಗೂ ಛಾಯಾಚಿತ್ರಗಳ ಪ್ರದರ್ಶನದ ಉದ್ಘಾಟನೆಯನ್ನು ಮಾಡಿ ನಾವು ಈ ದೇಶದ ಮೂಲ ಜನಾಂಗವು ಹೌದು, ಬುಡಕಟ್ಟು ಜನಾಂಗವು ಹೌದು. ಸರ್ಕಾರವು ಕುರಿ ಸಾಕಾಣಿಕೆಗೆ ಸರಿಯಾದ ಅನುದಾನ ಒದಗಿಸಬೇಕು ಎಂದು ಕೇಳಿದರು.
ದಶಮಾನೋತ್ಸವ ಸಮಾರಂಭದ ಉದ್ಘಾಟನೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ವಿಶ್ವವಿದ್ಯಾಲಯದ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಎಲ್ಲ ತಳಸಮುದಾಯಗಳ ಬಗ್ಗೆ ಕಾಳಜಿ ವಹಿಸುವ ಮತ್ತು ಅಧ್ಯಯನ ಮಾಡುವ ಅಗತ್ಯವಿದೆ. ಯಾವ ಕಾರಣಕ್ಕಾಗಿ ಈ ದೇಶದಲ್ಲಿ ವೃತ್ತಿಗಳು ಜಾತಿಗಳಾದವೋ ತಿಳಿಯದು. ವೃತ್ತಿ ಮೂಲದಲ್ಲಿ ಒಂದಾಗಿದ್ದ ಸಮುದಾಯಗಳನ್ನು ಒಡೆದಿಟ್ಟ ವ್ಯವಸ್ಥೆಯ ಬಗ್ಗೆ ಆಲೋಚನೆ ಮಾಡಬೇಕಾಗಿದೆ. ಅದಕ್ಕಾಗಿ ಆಯಾ ಸಮುದಾಯಗಳು ತಮ್ಮ ಸಮುದಾಯಗಳ ಅಥವಾ ವಿಸ್ಮೃತಿಗೆ ಒಳಗಾದ ಇವತ್ತಿನ ಜನಾಂಗಕ್ಕೆ, ಸಮುದಾಯಗಳ ಸಾಂಸ್ಕೃತಿಕವಾದ ತಿಳುವಳಿಕೆಯನ್ನು ನೀಡುವ ಮೂಲಕ ಸಮಕಾಲೀನ ಸಂದರ್ಭದ ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಎಚ್ಚರಕೊಡುವ ಪ್ರಯತ್ನದ ಭಾಗವಾಗಿ ಪೀಠಗಳು ಕಾರ್ಯನಿರ್ವಹಿಸುತ್ತಿವೆ. ಅಳಿಸಲಾಗದ ಲಿಪಿಯನ್ನು ಯಾವ ಸಮುದಾಯಗಳು ಇಂದಿನವರೆಗೂ ಮೌಖಿಕ ಪರಂಪರೆಯೊಳಗೆ ಇಟ್ಟುಕೊಂಡು ಬಂದಿವೆಯೋ ಆ ಮೌಖಿಕ ಪರಂಪರೆಯ ದಾಖಲೆ ಮಾಡುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ತನ್ನ ಎಲ್ಲ ಪೀಠಗಳ ಮೂಲಕ ಮಾಡುತ್ತಿದೆ. ಅದರಲ್ಲೂ ಹಾಲುಮತ ಪೀಠ ತಳಸಮುದಾಯಗಳಲ್ಲಿ ವಿಶಿಷ್ಟವಾದಂತಹ ಎಲ್ಲ ರೀತಿಯ ಕಲೆ ಸಂಸ್ಕೃತಿಯನ್ನು ಶೋಧಿಸುವಂತಹ ಕೆಲಸದ ಜೊತೆಗೆ ಬಹುದೊಡ್ಡ ಕನ್ನಡದ ಆಶಯಕ್ಕೆ ಹೇಗೆ ಬೆಸೆಯುತ್ತದೆ ಎನ್ನುವ ಗಂಭೀರ ಚಿಂತನೆ ಪೀಠದ್ದಾಗಿದೆ. ಹೆಣ್ಣು ಗಂಡು ಎಂದು ವ್ಯತ್ಯಾಸವಿಲ್ಲದ ಕಲೆಯನ್ನು ಬೆಳೆಸಿ ಉಳಿಸುತ್ತಿರುವವರು ದುಡಿಯುವ ವರ್ಗದವರು. ಈ ಕಲೆಯನ್ನು ಮಾರುಕಟ್ಟೆ ಸಂಸ್ಕೃತಿ ಹೇಗೆ ಬದಲಿಸಿಕೊಳ್ಳುತ್ತದೆ ಎಂಬುದನ್ನು ನೋಡಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಸಮುದಾಯದವರು ಕನ್ನಡ ವಿಶ್ವವಿದ್ಯಾಲಯದಲ್ಲಿ ವಿಶ್ವಕರ್ಮ ಸಮುದಾಯದ ಅಧ್ಯಯನ ಕೇಂದ್ರವನ್ನು ಸ್ಥಾಪನೆ ಮಾಡಬೇಕು ಎಂಬ ಕೋರಿಕೆಯ ಪ್ರಸ್ತಾವನೆಯನ್ನು ಸನ್ಮಾನ್ಯ ಸಚಿವರಾದ ಶ್ರೀ ಎಚ್.ಎಂ. ರೇವಣ್ಣ ಅವರು ವೇದಿಕೆಯಲ್ಲಿ ಸ್ವೀಕರಿಸಿದರು.
ವೇದಿಕೆಯಲ್ಲಿದ್ದ ಎಲ್ಲ ಗಣ್ಯರನ್ನು ಮಾನ್ಯಕುಲಪತಿಯವರು ಹಾಗೂ ಕುಲಸಚಿವರು ಕಂಬಳಿ ಹೊದಿಸುವ ಮೂಲಕ ಸನ್ಮಾನಿಸಿ ಗೌರವಿಸಿದರು.
ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಸ್ವಾಗತಿಸಿದರು. ಪೀಠದ ಸಂಚಾಲಕರಾದ ಡಾ.ಎಫ್.ಟಿ.ಹಳ್ಳಿಕೇರಿ ಅವರು ಪ್ರಾಸ್ತಾವಿಕ ನುಡಿದರು. ಡಾ.ಕೆ. ರವೀಂದ್ರನಾಥ ನಿರೂಪಿಸಿದರು. ಡಾ.ಶಿವಾನಂದ ಎಸ್. ವಿರಕ್ತಮಠ ವಂದಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉದ್ಘಾಟನೆಗೆ ಮೊದಲು ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಆಡಳಿತ ಕಟ್ಟಡದಿಂದ ಸಚಿವರು, ಗಣ್ಯರು, ಕುಲಪತಿಯವರು, ಕುಲಸಚಿವರು, ಅಧಿಕಾರಿಗಳು, ಬೋಧಕರು, ವಿದ್ಯಾರ್ಥಿಗಳು, ಹಾಲುಮತ ಬಾಂಧವರು ಡೊಳ್ಳು ಕುಣಿತ, ಛತ್ರಿ ಚಾಮರಗಳ ಮೂಲಕ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಆಗಮಿಸಿದರು.
ವೇದಿಕೆಯಲ್ಲಿ ವಿಶೇಷ ಆಹ್ವಾನಿತರಾದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಜಿ.ಕೃಷ್ಣ, ಕೃಷಿ ರಫ್ತು ನಿಗಮದ ಉಪಾಧ್ಯಕ್ಷರಾದ ಶ್ರೀ ಹಾಲಪ್ಪ ಗಾದಿಗನೂರು, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರಾದ ಮಾಜಿ ಅಧ್ಯಕ್ಷರಾದ ಶ್ರೀ ಎಲ್. ಸಿದ್ದನಗೌಡ, ಶ್ರೀ ಅಯ್ಯಾಳಿ ತಿಮ್ಮಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ ಶ್ರೀ ರಾಜೇಂದ್ರ ಸಣ್ಣಕ್ಕಿ, ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಶ್ರೀ ಕೆ. ಎರೇಗೌಡ, ಹೊಸಪೇಟೆಯ ಹಾಲುಮತ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಶ್ರೀ ಎಚ್. ನಂಜುಂಡಪ್ಪ ಹಾಗೂ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು. ನಂತರ ಮಲಪನಗುಡಿ ಪ್ರಕಾಶ ತಂಡದವರಿಂದ ಡೊಳ್ಳು ಕುಣಿತ ಹಾಗೂ ಕಾಲಜ್ಞಾನಿ ಕನಕ ನಾಟಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.