ತಿಂಗಳು: ಜನವರಿ 2020

ಹಂಪಿ ಮದ್ರಾಸ್ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಕನ್ನಡ ಕೆಲಸಗಳು ಕಾರ್ಯಕ್ರಮ ೦೭.೧೨.೨೦೧೯

ಹೊರ ರಾಜ್ಯದವರ ಬದಲು ನೆರೆ ರಾಜ್ಯದವರು ಅಂದರೆ ಹೃದಯಕ್ಕೆ ಹತ್ತಿರ : ಡಾ.ಸ.ಚಿ.ರಮೇಶ, ಮಾನ್ಯ ಕುಲಪತಿಯವರು

0712ಹೊರ ರಾಜ್ಯದವರು ಎಂದರೆ ದೂರವಾಗುತ್ತಾರೆ. ನೆರೆ ರಾಜ್ಯದವರೆಂದರೆ ಹೃದಯಕ್ಕೆ ಹತ್ತಿರವಾಗುತ್ತಾರೆಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರು ಹೇಳಿದರು. ಕನ್ನಡ ಭಾಷೆಯ ಮೇಲಿನ ಕಾಳಜಿ ಮತ್ತು ಪ್ರೀತಿಗೋಸ್ಕರ ಕನ್ನಡ ಕೆಲಸದಲ್ಲಿ ತೊಡಗಿಕೊಂಡಿರುವ ನೆರೆಯ ರಾಜ್ಯಗಳಿಗೆ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಸುಮಾರು ೭ ಲಕ್ಷ ಮೌಲ್ಯದ ಪುಸ್ತಕಗಳನ್ನು ನೆರೆಯ ರಾಜ್ಯಗಳಲ್ಲಿರುವ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಿಗೆ ನೀಡಲಾಗಿದೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಮುಂದಿನ ದಿನಗಳಲ್ಲಿ ಈ ನೆರೆ ರಾಜ್ಯಗಳ ವಿಶ್ವವಿದ್ಯಾಲಯಗಳ ಎಲ್ಲ ಕನ್ನಡ ವಿಭಾಗಗಳ ಮುಖ್ಯಸ್ಥರ ಸಭೆಯನ್ನು ಕರೆಯಲಾಗುವುದು. ಆ ಮೂಲಕ ವಿಭಾಗಗಳ ಸಂಬಂಧವನ್ನು ಬೆಳೆಸುವ ಕಾರ್ಯ ಮಾಡುತ್ತದೆ. ಹೊರರಾಜ್ಯದ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಲ್ಲಿ ನಮ್ಮ ಕನ್ನಡಿಗರೇ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕುಲಪತಿಗಳಾದ ಡಾ. ಸ.ಚಿ.ರಮೇಶ ಅವರು ತಿಳಿಸಿದರು.
ಮದ್ರಾಸ್ ವಿಶ್ವವಿದ್ಯಾಲಯ ವಿದ್ವತ್ ಪರಂಪರೆಯಾಗಿದ್ದು, ತಮಿಳು ಭಾಷಿಕರು ಕನ್ನಡ ಕಲಿತು ಕನ್ನಡ ಭಾಷೆಯನ್ನು ಬೋಧಿಸಲು ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪ್ರಥಮವಾಗಿ ಕನ್ನಡ ಎಂ.ಎ. ಪದವಿ ಪಡೆದ ವಿದ್ಯಾರ್ಥಿಯಾಗಿದ್ದವರು ಕನ್ನಡದ ಖ್ಯಾತ ಸಂಶೋಧಕ, ಭಾಷಾವಿಜ್ಞಾನಿ, ಶಾಸನತಜ್ಞ ಹಾಗೂ ಗ್ರಂಥಸಂಪಾದಕರಾದ ಶ್ರೀ ಆರ್. ನರಸಿಂಹಾಚಾರ್ ಎಂದು ಮದ್ರಾಸ್ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ತಮಿಳ್ ಸೆಲ್ವಿ ತಮ್ಮ ವಿಶೇಷ ಉಪನ್ಯಾಸದಲ್ಲಿ ಹೇಳಿದರು. ಕನ್ನಡ ಹಸ್ತಪ್ರತಿ ವಿಭಾಗದ ಮುಖ್ಯಸ್ಥರಾದ ಡಾ.ವೀರೇಶ ಬಡಿಗೇರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನ್ಯ ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಲಸಚಿವರಾದ ಡಾ. ಎ. ಸುಬ್ಬಣ್ಣ ರೈ ಅವರು ಉಪಸ್ಥಿತರಿದ್ದರು. ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಎಸ್.ಎಸ್.ಅಂಗಡಿ ಅವರು ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ.ಎಸ್.ಆರ್.ಚನ್ನವೀರಪ್ಪ, ವಂದನಾರ್ಪಣೆಯನ್ನು ನೆರವೇರಿಸಿದರು. ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕನ್ನಡ ವಿಶ್ವವಿದ್ಯಾಲಯ, ಹಂಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ೬೩ನೇ ಮಹಾಪರಿ ನಿರ್ವಾಣ ಕಾರ್ಯಕ್ರಮದ ಪತ್ರಿಕಾ ವರದಿ-೦೬.೧೨.೨೦೧೯

ambedkarಶಿಕ್ಷಣದ ಮೂಲಕ ಉತ್ತಮ ಗುಣಮಟ್ಟದ ಜೀವನ ನಡೆಸುವುದು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಧೀಮಂತ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ : ಡಾ.ಸ.ಚಿ.ರಮೇಶ, ಮಾನ್ಯ ಕುಲಪತಿಯವರು

ತಳಸಮುದಾಯಗಳ ಜನರು ಕೂಡ ಶಿಕ್ಷಣದ ಮೂಲಕ ಉತ್ತಮ ಗುಣಮಟ್ಟದ ಜೀವನ ನಡೆಸುವುದು ಸಾಧ್ಯ ಎಂಬುದನ್ನು ತಮ್ಮ ಮೂಲಕವೇ ಜಗತ್ತಿಗೆ ತೋರಿಸಿಕೊಟ್ಟ ಧೀಮಂತ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಸ.ಚಿ. ರಮೇಶ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಭುವನವಿಜಯದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ೬೩ನೇ ಮಹಾಪರಿನಿರ್ವಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದುಳಿದ, ಶೋಷಿತ, ದಲಿತ ವರ್ಗದ ಜನರಿಗೂ ಶಿಕ್ಷಣ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಅವಕಾಶಗಳನ್ನು ಒದಗಿಸಿದರೆ ಅವರು ಕೂಡ ದೇಶದ ಮುಖ್ಯವಾಹಿನಿಯಲ್ಲಿ ಬೆರೆತು ದೇಶಕ್ಕೆ, ಸಮಾಜಕ್ಕೆ ಉನ್ನತ ಕೊಡುಗೆ ನೀಡುವುದರಲ್ಲಿ ಎರಡು ಮಾತಿಲ್ಲ. ಇಂತಹವರ ಉದ್ಧಾರಕ್ಕಾಗಿ ಅಂಬೇಡ್ಕರ್ ಅವರು ಹಗಲಿರಳು ಶ್ರಮಿಸಿದರು. ದೇಶದ ಪರಿಪೂರ್ಣ ಸಂವಿಧಾನ ರಚನೆ ಹಿಂದೆ ಅಂಬೇಡ್ಕರ್ ಅವರ ಪ್ರಾಮಾಣಿಕ ಪ್ರಯತ್ನವಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿ ಅವರು ವಿಶೇಷ ಉಪನ್ಯಾಸ ನೀಡುತ್ತ ಡಾ. ಬಿ.ಆರ್. ಅಂಬೇಡ್ಕರ್ ಅವರು ದಲಿತ ಸೂರ್ಯ, ಮೂಕನಾಯಕರಷ್ಟೇ ಅಲ್ಲದೇ ದೇಶದ ಬಹುದೊಡ್ಡ ನಾಯಕರಾಗಿದ್ದರು. ಅವರ ಚಿಂತನೆ, ಆಲೋಚನೆಗಳು ಕೇವಲ ದಲಿತರ ಉದ್ಧಾರಕ್ಕಾಗಿರಲಿಲ್ಲ, ದೇಶದ ಅಭಿವೃದ್ಧಿಗೆ ಸಂಬಂಧಿಸಿದ್ದವು. ಅಂಬೇಡ್ಕರ್ ಅವರು ಕೊನೆಯುಸಿರುವವರೆಗೂ ದೇಶಕ್ಕಾಗಿ ಶ್ರಮಿಸಿದರು. ನಾವು ಇಂದು ಪಡೆದಿರುವ ಮತದಾನದ ಹಕ್ಕು, ಮಹಿಳೆಯರಿಗೆ ಆಸ್ತಿಯ ಹಕ್ಕು, ೮ ತಾಸುಗಳ ದುಡಿಮೆಯ ಅವಧಿ ಹೀಗೆ ಹಲವಾರು ಸೌಲಭ್ಯಗಳು ಅಂಬೇಡ್ಕರ್ ನೀಡಿದ ಕೊಡುಗೆಯಾಗಿವೆ. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಉನ್ನತ ಶಿಕ್ಷಣ ಪಡೆದವರು ಹುಲಿಯ ಹಾಲು ಕುಡಿದಂತೆ ಎಂದು ಹೇಳುತ್ತಿದ್ದರು. ಅಂಬೇಡ್ಕರ್ ಅವರ ವಿಚಾರ ಮತ್ತು ತರ್ಕಗಳು ಅನ್ಯಾಯವನ್ನು ಪ್ರತಿಭಟಸುತ್ತಿದ್ದವು. ಅವರ ಇಂತಹ ಜೀವನಾದರ್ಶಗಳನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕು. ಹಲವು ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳ ದೇಶದಲ್ಲಿ ಸಂವಿಧಾನವು ಒಂದು ಉತ್ತಮ ಮಾನದಂಡವಾಗಿದೆ. ಇಂತಹ ಸಂವಿಧಾನವನ್ನು ಯುವಪೀಳಿಗೆ ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮ ಸಂಚಾಲಕರಾದ ಮತ್ತು ಉಪಕುಲಸಚಿವರಾದ ಡಾ. ಎ. ವೆಂಕಟೇಶ ಅವರು ಸ್ವಾಗತಿಸಿ, ನಿರೂಪಿಸಿದರು. ಕುಲಸಚಿವರಾದ ಡಾ. ಎ. ಸುಬ್ಬಣ್ಣ ರೈ ವಂದನಾರ್ಪಣೆ ಮಾಡಿದರು. ಸಂಗೀತ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಬುದ್ಧನ ಗೀತೆಯನ್ನು ಪ್ರಸ್ತುತಪಡಿಸಿದರು. ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.