ತಿಂಗಳು: ಡಿಸೆಂಬರ್ 2020

ಕನ್ನಡ ವಿಶ್ವವಿದ್ಯಾಲಯ, ಹಂಪಿಕನಕದಾಸ ಜಯಂತಿ ಕಾರ್ಯಕ್ರಮ ವಿಶೇಷ ಉಪನ್ಯಾಸ : ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಅಭಿವ್ಯಕ್ತಿ

ಕನ್ನಡ ವಿಶ್ವವಿದ್ಯಾಲಯ, ಹಂಪಿಕನಕದಾಸ ಜಯಂತಿ ಕಾರ್ಯಕ್ರಮ ವಿಶೇಷ ಉಪನ್ಯಾಸ : ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಅಭಿವ್ಯಕ್ತಿ

ಕೀರ್ತನೆಗಳನ್ನು ಮಾಧ್ಯಮವಾಗಿಸಿಕೊಂಡ ವ್ಯಕ್ತಿ ಕನಕದಾಸರು: ಡಾ.ವಾಯ್.ಎಂ.ಯಾಕೊಳ್ಳಿ

ಜಾತಿ ಎಂಬುದು ಹುಟ್ಟಿನಿಂದ ಬಂದಿಲ್ಲ, ಇದು ನಾವು ಮಾಡಿಕೊಂಡಿರುವ ಕುಲದ ವ್ಯವಸ್ಥೆ. ವ್ಯಕ್ತಿಯನ್ನು ಜಾತಿಯಿಂದ ನೋಡುವುದಲ್ಲ. ವ್ಯಕ್ತಿ ಮಾಡಿರುವ ಸಾಧನೆಯಿಂದ ವ್ಯಕ್ತಿತ್ವದಿಂದ ನೋಡಬೇಕು ಎಂದು ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಾಮಾಜಿಕ ಬಂಡಾಯ ಅಸ್ತ್ರವಾಗಿ ಕೀರ್ತನೆಗಳನ್ನು ಮಾಧ್ಯಮವಾಗಿಸಿಕೊಂಡ ಮಹಾನ್ ಚಿಂತಕ ಕನಕದಾಸರು ಎಂದು ಪ್ರಾಧ್ಯಾಪಕರಾದ ಡಾ.ವಾಯ್.ಎಂ.ಯಾಕೊಳ್ಳಿ ಅವರು ಅಭಿಪ್ರಾಯಪಟ್ಟರು.ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಹಾಲುಮತ ಅಧ್ಯಯನ ಪೀಠವು ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಅಭಿವ್ಯಕ್ತಿ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು ಕನಕದಾಸರನ್ನು ಒಂದೇ ಆಯಾಮದಿಂದ ನೋಡಲು ಸಾಧ್ಯವಿಲ್ಲ. ವಚನಕಾರರ ಜೊತೆಯಲ್ಲಿ ಬಂದ ಕ್ರಾಂತಿಕಾರರು, ಸಮಾಜವಿಜ್ಞಾನಿ, ದಾಸರು, ಕೀರ್ತನಕಾರರು, ವಿಚಾರವಾದಿ, ಕವಿಗಳು, ದಾರ್ಶನಿಕರಾದ ಕನಕದಾಸರು ಭಕ್ತಿಪಂಥದಲ್ಲಿ ಬಂದಂಥ ವ್ಯಕ್ತಿಯಾದರೂ ಸಹ ಭಕ್ತಿಪಂಥದಲ್ಲಿ ಇರುವ ಅನೇಕ ಆಚಾರ-ವಿಚಾರಗಳನ್ನು ವಿರೋಧಿಸಿದಂತಹ ವ್ಯಕ್ತಿ ಕನಕದಾಸರು. ಕನ್ನಡ ಸಾಹಿತ್ಯ ಅಧ್ಯಯನ ಮಾಡುವ ಸಂದರ್ಭದಲ್ಲಿ ಬಸವಣ್ಣನವರ ನಂತರ ಬಂದ ಬಂಡಾಯಕಾರರು ಕನಕದಾಸರು. ಇವರು ಸಾಮಾಜಿಕ ನ್ಯಾಯ, ಸಾಮಾಜಿಕ ಬುದುಕು, ಸಮಾನತೆಯಿಂದ ಕೂಡಿರಬೇಕು ಎಂದು ಪ್ರತಿಪಾದಿಸುತ್ತಿದ್ದರು. ನಂತರ ಆಧ್ಯಾತ್ಮಿಕ ಜೊತೆಯಲ್ಲಿ ಸಾಮಾಜಿಕ ಚಿಂತನೆಗಳನ್ನು ಅಭಿವ್ಯಕ್ತಿಗೊಳಿಸಿದ ಮಹಾನ್‌ಚೇತನ. ಕನಕದಾಸರ ಸಾಮಾಜಿಕ ಅಭಿವ್ಯಕ್ತಿ ನೀತಿಯ ಮೇಲೆ ನಿಂತಿದೆ. ಭಕ್ತಿ ಪರಿಶುದ್ಧವಾಗಬೇಕು. ಯಾವುದೇ ಜಾತಿ ತಾರತಮ್ಯವಿಲ್ಲದೆ ಕಾಯಕದಲ್ಲಿ ದೇವರನ್ನು ಕಾಣಬೇಕು. ಇಂತಹ ಹೃದಯದ ಕೃಷಿ ಮಾಡುವ ಮೂಲಕ ಧ್ಯಾನ, ಶ್ರದ್ಧೆ, ಶಿಸ್ತು, ಜ್ಞಾನ, ವಿನಯ, ಸಾಮಾಜಿಕ ಕಳಕಳಿಯ ಮೂಲಕ ಭಕ್ತಿಯಿಂದ ಸಮಾಜವನ್ನು ಕಾಣಬೇಕು. ಕುಲಜಾತಿ, ಧರ್ಮಗಳ ವ್ಯವಸ್ಥೆಯಿಂದ ಮನುಷ್ಯನು ಅಜ್ಞಾನಕ್ಕೆ ಜಾರುತಿದ್ದಾನೆ. ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಕನಕದಾಸರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಅವರ ಚಿಂತನೆ, ಆಲೋಚನೆ, ಕಾವ್ಯ, ಕೀರ್ತನೆಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ ಅವರು ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ಎನ್ನುವ ಕೀರ್ತನೆಯನ್ನು ಹಾಡುವುದರ ಮೂಲಕ ಮಾತನಾಡಿದ ಅವರು ಭಕ್ತಿಯ ಒಳಗೆ ಕನಕದಾಸರು ವಿಭಿನ್ನ ಆಯಾಮಗಳನ್ನು ಕಂಡುಕೊಂಡಿದ್ದರು. ಹರಿದಾಸರು, ಕನಕದಾಸರು, ಪುರಂದರದಾಸರ ಕೀರ್ತನೆಗಳು ಪ್ರಸ್ತುತ ಸಮಾಜಕ್ಕೆ ತುಂಬ ಅವಶ್ಯಕವಾಗಿವೆ. ಅವರ ಚಿಂತನೆಗಳು ಈ ಸಂದರ್ಭದಲ್ಲಿ ನಾವು ಯಾವ ನೆಲೆಯಲ್ಲಿ, ಯಾವ ಆಯಾಮಗಳಲ್ಲಿ ನೋಡಬೇಕೆನ್ನುವುದು ಪ್ರಮುಖವಾಗುತ್ತದೆ. ಹಾಗೂ ಕನಕದಾಸರ ಕೀರ್ತನೆಗಳು ಯಾವ ಸಂಗೀತದ ಹಿನ್ನಲೆಯಿಂದ ನೋಡಬೇಕಾಗಿಲ್ಲ. ಸಾಮಾಜಿಕ ಹಿನ್ನಲೆಯಿಂದ ನೋಡಿದರೆ ಅವರ ಸಾಮಾಜಿಕ ಕಳಕಳಿ ಯಾವ ಮಟ್ಟದಲ್ಲಿದೆ ಎಂದು ಪ್ರಸ್ತುತವೆನಿಸುತ್ತದೆ ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಹಾಲುಮತ ಅಧ್ಯಯನ ಪೀಠದ ಸಂಚಾಲಕರಾದ ಡಾ.ಎಫ್.ಟಿ.ಹಳ್ಳಿಕೇರಿ ಅವರು ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಕನಕದಾಸರ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವಿವಿಧ ನಿಕಾಯಗಳ ಡೀನರು, ಪ್ರಾಧ್ಯಾಪಕರು, ಅಧಿಕಾರಿಗಳು ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕರಾದ ಶ್ರೀಮತಿ ಜ್ಯೋತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಂಶೋಧನಾ ವಿದ್ಯಾರ್ಥಿಯಾದ ಶ್ರೀ ಸಂಗಮೇಶ ಅವರು ಕಾರ್ಯಕ್ರಮವನ್ನು ವಂದಿಸಿದರು.

ಡಾ.ವಾಯ್.ಎಂ.ಯಾಕೊಳ್ಳಿ