ತಿಂಗಳು: ಮಾರ್ಚ್ 2021

ಓದು ಮತ್ತು ಸಾಧನೆಯಿಂದ ಮಾತ್ರ ಗುರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಸಾಧ್ಯ:ಡಾ ಸ. ಚಿ. ರಮೇಶ, ಮಾನ್ಯ ಕುಲಪತಿಗಳು

ಗುರು ಎಂಬುವನು ದೇವರಗಿಂತ ದೊಡ್ಡವನು. ಕೆಲವೊಮ್ಮೆ ದೇವರು ನಮ್ಮನ್ನು ಕೈ ಹಿಡಿಯದಿದ್ದರೂ ಸಹ ಗುರು ಕಲಿಸಿದ ವಿದ್ಯೆ ಮಾತ್ರ ನಮ್ಮನ್ನು ಕೈ ಬಿಡುವುದುದಿಲ್ಲ. ಗುರು ಆದವನು ಸದಾ ವಿದ್ಯಾರ್ಥಿಗಳ ಬೆನ್ನ ಹಿಂದೆ ನಿಂತು ಮಾರ್ಗದರ್ಶನ ಮಾಡುತ್ತಾ ಸಾರ್ಥಕತೆ ಮೆರೆಯುತ್ತಾರೆ. ಆದರೆ ಅಂತಹ ನಿಸ್ವಾರ್ಥ ಸೇವೆ ಸಲ್ಲಿಸುವ ಗುರುಗಳಿಗೆ ವಿದ್ಯಾರ್ಥಿಗಳು ಅವರ ಓದು ಮತ್ತು ಸಾಧನೆಯಿಂದ ಮಾತ್ರ ಕೃತಜ್ಞತೆಗಳನ್ನು ಸಲ್ಲಿಸಲು ಸಾಧ್ಯ. ಅದಕ್ಕಾಗಿ ವಿದ್ಯಾರ್ಥಿಗಳು ಸಾಧನೆ ಹಾದಿಯಲ್ಲಿ ಸಾಗಬೇಕು. ವಿದ್ಯಾರ್ಥಿಗಳು ಕಾಲಹರಣ ಮಾಡದೆ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಸ. ಚಿ. ರಮೇಶ್ ಅವರು ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಎಂ.ಎ.ಪಿಎಚ್.ಡಿ ಕನ್ನಡ ಸಾಹಿತ್ಯ ಸಂಯೋಜಿತ ಪದವಿಗೆ ಪ್ರವೇಶ ಪಡೆದ ೨೦೨೧ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಸಸಿಗೆ ನೀರೆರೆಯವ ಮೂಲಕ ಉದ್ಘಾಟಿಸಿ ಅಧ್ಯಕ್ಷಿಯ ಮಾತುಗಳನ್ನಾಡಿದ ಕುಲಪತಿಗಳಾದ ಡಾ. ಸ. ಚಿ ರಮೇಶ್ ಅವರು ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಹೊಸ ಹೊಸ ವಿಭಿನ್ನ ಆಚಾರ, ವಿಚಾರ, ಚಿಂತನೆಗಳಿರುತ್ತವೆ. ಆದರೆ ಅವು ಮುಖ್ಯಭೂಮಿಕೆಗೆ ಬರಬೇಕಾದರೆ ಶಿಕ್ಷಣ ಅನಿವಾರ್ಯ. ಅಂತಹ ಮೌಲ್ಯಯುತ ಶಿಕ್ಷಣವನ್ನು ಬೌದ್ಧಿಕ ಜ್ಞಾನವನ್ನ ವಿಶ್ವವಿದ್ಯಾಲಯ ಪ್ರಾರಂಭದಿಂದಲೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧಾರೆ ಎರೆಯತ್ತಿದೆ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಬೌದ್ಧಿಕ ಜ್ಞಾನ ಸಂಪತ್ತನ್ನು ಸದುಪಯೋಗಪಡಿಸಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು. ಹಿರಿಯ ವಿದ್ಯಾರ್ಥಿಗಳು ಹೊಸ ಕಿರಿಯ ವಿದ್ಯಾರ್ಥಿಗಳ ಸ್ವಾಗತ ಮಾಡಲು ನಡೆಸಿದ ತಯಾರಿ, ಅಲಂಕಾರ, ಅಚ್ಚು ಕಟ್ಟಿನ ನಿರ್ವಹಣೆ ತಮ್ಮ ಬಾಲ್ಯದ ಕಾಲೇಜು ಬದುಕಿನ ನೆನಪುಗಳು ಮರುಕಳಿಸುವಂತಿತ್ತು ಎಂದು ಸಂತಸಪಟ್ಟರು. ಹಾಗೆಯೇ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯುವ ಬಹುತೇಕ ವಿದ್ಯಾರ್ಥಿಗಳು ನಾವು ಹಿಂದೆ ಕಲಿಸಿದ ವಿದ್ಯಾರ್ಥಿಗಳ ವಿದ್ಯಾರ್ಥಿಗಳೇ ಹೆಚ್ಚಾಗಿದ್ದು ಒಂದು ತರಹ ಅಜ್ಜ ತನ್ನ ಮೊಮ್ಮಕ್ಕಳ್ಳನ್ನು ಹೆಗಲ ಮೇಲೆ ಕೂರಿಸಿಕೊಂಡು ಜಗತ್ತು ತೋರಿಸುವ ಹಾಗೇ ನಾವು ಇಂದು ನಮ್ಮ ಹಳೆಯ ಶಿಷ್ಯರ ಶಿಷ್ಯರನ್ನು ಕಲಿಸುತ್ತಿರುವುದು ಅತ್ಯಂತ ಸಂತೋಷದ ವಿಚಾರ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಇನ್ನು ಕಾರ್ಯಕ್ರಮ ಮುಖ್ಯ ಅತಿಥಿಗಳಾದ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎ. ಸುಬ್ಬಣ್ಣ ರೈ ಅವರು ಮಾತನಾಡಿ ಬೇರೆ ಬೇರೆ ವಿಶ್ವವಿದ್ಯಾಲಯಗಳಿಗಿಂತ ನಮ್ಮ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ಅಧ್ಯಯನ ಮಾಡಲು ಅನುಕೂಲವಾಗುವಂತ ವಾತಾವರಣ ನಮ್ಮ ವಿಶ್ವವಿದ್ಯಾಲಯದಲ್ಲಿದೆ. ವಿದ್ಯಾರ್ಥಿಗಳ ಬೌದ್ಧಿಕ ಜ್ಞಾನವನ್ನೂ ವೃದ್ಧಿಸಲು ಏಳು ನಿಕಾಯದ ಬೋಧಕರಿಂದ ವಸ್ತು ವಿಷಯವನ್ನು, ಬೋಧಿಸಲಾಗುತ್ತದೆ ಇದರಿಂದ ವಿದ್ಯಾರ್ಥಿಗಳು ಸಂಶೋಧನೆ ಹಾದಿಯಲ್ಲಿ ಸಾಗಲು ಅನುಕೂಲವಾಗತ್ತವೆ ಎಂದು ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯ ಭಾಷಾ ನಿಕಾಯದ ಡೀನ್‌ಗಳಾದ ಡಾ. ವೀರೇಶ ಬಡಿಗೇರ ಅವರು ಮಾತನಾಡಿ ಕನ್ನಡ ವಿಶ್ವವಿದ್ಯಾಲಯಕ್ಕೆ ಡಾ. ಚಂದ್ರಶೇಖರ್ ಕಂಬಾರ ಅವರು ಸಾಂಸ್ಕೃತಿಕ ಮತ್ತು ಬೌದ್ಧಿಕ ಜ್ಞಾನದ ಜೀವಂತಿಕೆಯನ್ನು ತುಂಬಿದ ಪ್ರತಿಫಲವಾಗಿ ಇಂದು ನಾವು ಸಾಂಸ್ಕೃತಿಕವಾಗಿ ಬೆರೆಯುತ್ತಿದ್ದೆವೆ. ಆದರೆ ಇಂದಿನ ಸಾಹಿತ್ಯ ಸಂಶೋಧನಾ ವಿದ್ಯಾರ್ಥಿಗಳು ಆತ್ಮ ವಿಶ್ವಾಸವಿಲ್ಲದ ಅಕ್ಷರಸ್ಥರಾಗುತ್ತಿದ್ದಾರೆ ಎಂಬ ಕಂಬಾರ ಅವರ ಮಾತನ್ನು ಒತ್ತಿ ಹೇಳಿ ವಿದ್ಯಾರ್ಥಿಗಳು ಕೇವಲ ಅಕ್ಷರ ಜ್ಞಾನದ ಜೊತೆಗೆ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಸಂಶೋಧನೆ ಎಂದರೆ ಕೇವಲ ಪ್ರಬಂಧ ಮಂಡಿಸಿ, ಪುಸ್ತಕ ರೂಪದಲ್ಲಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸುವ ಬದಲು ಸಾಹಿತ್ಯ ಸಂಶೋಧನೆಯ ನಿಜವಾದ ಆಶಯವನ್ನು ಅರಿತು ಸಮಾಜಕ್ಕೆ ಅರ್ಥೈಸುವುದೆ ನಿಜವಾದ ಸಂಶೋಧನೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಎಂ.ಎ. ಪಿಎಚ್.ಡಿ ಕನ್ನಡ ಸಾಹಿತ್ಯ ಸಂಯೋಜಿತ ಪದವಿಯ ಸಂಚಾಲಕರಾದ ಡಾ. ಅಮರೇಶ ನುಗಡೋಣಿ ಅವರು ಮಾತನಾಡಿ ಕನ್ನಡ ವಿಶ್ವವಿದ್ಯಾಲಯವು ಪ್ರಾರಂಭದ ಸ್ಥಾಪನಾದಿನಗಳಿಂದಲೂ ಕಾಡಿನಂತಿದ್ದ ಈ ಪಾಳು ಭೂಮಿಯಲ್ಲಿ ತಾತ್ವಿಕ ಸಂಶೋಧನೆಯ ಶಿಕ್ಷಣ ಕ್ರಾಂತಿಯನ್ನು ಮಾಡುತ್ತಿದೆ. ಇಂತಹ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ, ಕಲಿಸುತ್ತಿರುವ ನಾವೆಲ್ಲಾ ಧನ್ಯರು. ವಿಶ್ವವಿದ್ಯಾಲಯ ನಾಡು ನುಡಿ ಸಾಹಿತ್ಯ ಸಂಸ್ಕೃತಿಗೆ ತನ್ನದೆ ವಿಶೇಷ ಕೊಡುತ್ತಿರುವುದನ್ನು ಹೆಮ್ಮೆಯಿಂದ ಹೇಳಬೇಕು ಎಂದು ಹೇಳಿದರು. ಹಾಗೂ ವಿದ್ಯಾರ್ಥಿಗಳು ಕೇವಲ ಪದವಿ ಮತ್ತು ಅಂಕಗಳಿಗಿಂತ ಜ್ಞಾನದ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಎಂ. ಎ ಕನ್ನಡ ಸಾಹಿತ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಅಕ್ಷತಾ ಹಾಗೂ ಮಂಜುನಾಥ ಅನಿಸಿಕೆ ಹೇಳಿದರು. ಇನ್ನು ಪಂಪಾಪತಿ ಅವರು ಗಣ್ಯರನ್ನು ಸ್ವಾಗತಿಸಿದರು, ವಿದ್ಯಾರ್ಥಿನಿ ಮಂಜುಳಾ ಎಂ ಅವರು ಕಾರ್ಯಕ್ರಮನ್ನು ವಂದಿಸಿದರು. ವಿದ್ಯಾರ್ಥಿನಿ ಬಾಣದ ಲಕ್ಷ್ಮಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಧಿತರಿದ್ದರು.


ಲಿಂಗತ್ವದ ಪೂರ್ವಗ್ರಹ ಮೀರಲು ಧ್ವನಿಯೆತ್ತಿ : ಸಿ.ಜಿ. ಮಂಜುಳಾ

ಲಿಂಗತ್ವದ ಪೂರ್ವಗ್ರಹ ಮೀರಲು ಧ್ವನಿಯೆತ್ತಿ : ಸಿ.ಜಿ. ಮಂಜುಳಾ


ಮಹಿಳಾ ಅಸಮಾನತೆಯ ವಿಷಯವು ವಿಶ್ವದಲ್ಲೇ ಗಂಭೀರವಾದ ಸಮಸ್ಯೆಯಾಗಿದೆ. ಮಹಿಳೆ ಕುರಿತಂತೆ ಜನರ ಮಾನಸಿಕತೆ ಮತ್ತು ಸಂವೇದನೆಯಲ್ಲಿ ಸಮಸ್ಯೆಯಿದ್ದು, ಜನರ ಮನಸ್ಥಿತಿ ಬದಲಾಗುವವರೆಗೂ ಮಹಿಳಾ ಸಮಾನತೆ ಸಿಗುವುದು ಕಷ್ಟ. ಲಿಂಗತ್ವ ಪೂರ್ವಗ್ರಹ ಮೀರಲು ಮಹಿಳೆಯರು ಧ್ವನಿ ಎತ್ತಬೇಕು ಎಂದು ಪತ್ರಕರ್ತರಾದ ಸಿ.ಜಿ. ಮಂಜುಳಾ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಭೌತವಾದಿಯ ನೆಲೆಯಲ್ಲಿ ಕನ್ನಡ ಮಹಿಳಾ ಅಧ್ಯಯನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಿನದಿಂದ ದಿನಕ್ಕೆ ಮಹಿಳೆಯರ ಮೇಲೆ ಅತ್ಯಾಚಾರಗಳು, ಕೌಟುಂಬಿಕ ಹಿಂಸೆ, ಹೆಣ್ಣು ಭ್ರೂಣ ಹತ್ಯೆ, ಉದ್ಯೋಗ ಸ್ಥಳದಲ್ಲಿನ ಕಿರುಕುಳ ಸೇರಿದಂತೆ ದೌರ್ಜನ್ಯಗಳು ಹೆಚ್ಚುತ್ತಿವೆ. ರಾಜಕಾರಣ ವ್ಯವಸ್ಥೆಯಲ್ಲಿ ಮಹಿಳೆ ಇಂದಿಗೂ ಮುಖ್ಯವಾಹಿನಿಗೆ ಬರುತ್ತಿಲ್ಲ. ರೈತ ಎಂದಾಕ್ಷಣ ಮಣ್ಣಿನ ಮಗ ಎಂದು ಕರೆಯುತ್ತೇವೆ ಹೊರತಾಗಿ ಮಣ್ಣಿನ ಮಗಳು ಎಂಬುದನ್ನು ಮರೆತಿದ್ದೇವೆ. ಯಾವುದೇ ಪ್ರಮುಖ ನಿರ್ಧಾರ, ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪುರುಷನೇ ಮುಂದಿರುವನು. ಚರಿತ್ರೆ ಮತ್ತು ಭಾಷೆ ವಿಷಯದಲ್ಲೂ ಪುರುಷ ಮೇಲುಗೈ ಸಾಧಿಸಿದ್ದು, ಮಹಿಳೆ ಹಿಂದುಳಿದಿರುವುದನ್ನು ಕಾಣಬಹುದು. ಕೋವಿಡ್೧೯ ಸಂದರ್ಭದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೌಟುಂಬಿಕ ಹಿಂಸೆ, ಬಾಲ್ಯ ವಿವಾಹಗಳಿಗೆ ಒಳಗಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಕೋವಿಡ್ ನಂತರ ಪುರುಷರು ಉದ್ಯೋಗಗಳಿಗೆ ಹಿಂತಿರುಗಿರುವಷ್ಟು ಪ್ರಮಾಣದಲ್ಲಿ ಮಹಿಳೆಯರು ಹಿಂದಿರುಗಿಲ್ಲದಿರುವುದು ಅಂಕಿ-ಅಂಶಗಳಿಂದ ಕಂಡು ಬಂದಿದೆ. ನಿರುದ್ಯೋಗಿಗಳಾಗಿರುವುದು ಕಂಡು ಬಂದಿದೆ. ಮಹಿಳೆಯರು ಅನೇಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು, ಅವರ ದುಡಿಮೆ ಮತ್ತು ವೇತನದಲ್ಲಿ ತಾರತಮ್ಯವನ್ನು ಕಾಣುತ್ತಿದ್ದೇವೆ. ಲಿಂಗತ್ವ ಪೂರ್ವಗ್ರಹವು ಮಹಿಳೆಯರ ಏಳಿಗೆಯನ್ನು ದಿನದಿಂದ ದಿನಕ್ಕೆ ಕುಂದಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. ಮಹಿಳೆಯನ್ನು ಸಹಜೀವಿಯಾಗಿ ಕಾಣುವುದು ಮುಖ್ಯ. ಹೆಣ್ಣು, ಗಂಡು, ಮಂಗಳಮುಖಿ, ದ್ವಿಲಿಂಗಿಗಳು ಸೇರಿದಂತೆ ವೈವಿಧ್ಯಮಯ ಜನರ ಪಾಲ್ಗೋಳ್ಳುವಿಕೆಯು ಸಹಭಾಗಿತ್ವ ಸಮಾಜದ ನಿರ್ಮಾಣಕ್ಕೆ ಸಹಕಾರಿ ಹೇಳಿದರು.
ಅಲ್ಬರ್ಟಾ ವಿಶ್ವವಿದ್ಯಾಲಯದ ಇಂಗ್ಲೀಷ ಮತ್ತು ಸಿನಿಮಾ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಶಶಿಕುಮಾರ ಅವರು ಆನ್‌ಲೈನ್ ಮೂಲಕ ವಿಶೇಷ ಉಪನ್ಯಾಸ ನೀಡುತ್ತ ಗಂಡು-ಹೆಣ್ಣು ಎಂಬ ಪರಿಭಾಷೆಯಲ್ಲಿ ಮಾತನಾಡುತ್ತೇವೆ. ಈ ಪರಿಭಾಷೆಯನ್ನು ಮೊದಲಿನಿಂದಲೇ ರೂಪಿಸಿದ್ದು, ಇದು ನಮ್ಮ ಪೂರ್ವಗ್ರಹವನ್ನು ಸೂಚಿಸುತ್ತದೆ. ಎಲ್ಲಾ ರಂಗದಲ್ಲೂ ಮಹಿಳೆ ಮುಂಚಿನಿಂದಲೂ ಶೋಷಣೆಗೆ ಒಳಗಾಗಿರುವುದರಿಂದ ಮಹಿಳಾ ಅಧ್ಯಯನ ವಿಭಾಗವನ್ನು ರೂಪಿಸಲಾಗಿದೆ. ಮಹಿಳೆಯರು ವಾಸಿಸುವ ಭೌಗೋಳಿಕ ಪರಿಸರ, ಹವಾಮಾನ, ಜಾತಿವ್ಯವಸ್ಥೆ, ವರ್ಗ ವ್ಯವಸ್ಥೆಗಳು ಮಹಿಳಾ ಅಸಮಾನತೆಯ ಮೇಲೆ ಪ್ರಭಾವ ಬೀರಬಲ್ಲವು. ಮಹಿಳೆಯರ ಕುರಿತಂತೆ ಅಧ್ಯಯನ ಕೈಗೊಳ್ಳುವ ಸಂದರ್ಭದಲ್ಲಿ ಮಹಿಳಾ ಪ್ರಜ್ಞೆಯ ಜೊತೆಗೆ ಅವರ ಭೌತಿಕ ಪರಿಸರವನ್ನು ಅವಲೋಕಿಸುವುದು ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತ ನಾಡಿನಲ್ಲಿ ಹಲವಾರು ದಿನಾಚರಣೆಗಳನ್ನು ಆಚರಿಸುತ್ತೇವೆ. ಎಲ್ಲಾ ಆಚರಣೆಗಳಿಗೂ ಅದರದೇ ಆದ ಹಿನ್ನಲೆಯಿರುತ್ತದೆ. ಮಹಿಳಾ ದಿನಾಚರಣೆಗೂ ಅದರದೇ ಆದ ಹಿನ್ನಲೆಯಿರುವುದು. ಮಹಿಳಾ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ತಿಳಿಸಿದರು.
ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಶೈಲಾಜಾ ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಅಮೇರಿಕವು ಕೋವಿಡ್ ೧೯ ಸಂದರ್ಭದಲ್ಲಿ ನಾಯಕತ್ವ ಸಾಧನೆಯಲ್ಲಿ ಸಮಾನ ಅವಕಾಶ ಕುರಿತ ಧ್ಯೇಯವಾಕ್ಯದೊಂದಿಗೆ ಮಹಿಳೆಯರ ವಿಷಯವನ್ನು ಅವಲೋಕಿಸಿದೆ. ಈ ಭಾರಿಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಧ್ಯೇಯ ವಾಕ್ಯ : ಅhoose ಣo ಅhಚಿಟಟeಟಿge ಆಗಿದೆ. ಮಹಿಳಾ ಸಬಲೀಕರಣ ಮತ್ತು ಹಕ್ಕುಗಳ ಒಳಗೊಳ್ಳುವಿಕೆ ಇಂದಿಗೂ ಸವಾಲಾಗಿದೆ. ಈ ಹಿನ್ನಲೆಯಲ್ಲಿ ಮಹಿಳೆಯರು ತಮಗೆ ಎದುರಾಗುವ ಪ್ರತಿಯೊಂದು ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸುವುದನ್ನು ಕಲಿಯುವುದು ಮುಖ್ಯ. ಎಲ್ಲಾ ವಿಷಯಗಳಲ್ಲೂ ಆಯ್ಕೆಯ ಸ್ವಾತಂತ್ರ್ಯವನ್ನು ಬಳಸಿಕೊಳ್ಳುವುದರ ಮೂಲಕ ನಿಮ್ಮ ಜೀವನದಲ್ಲಿ ಅಪೇಕ್ಷಿತ ಬದಲಾವಣೆಯನ್ನು ಕಂಡುಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ವಿಭಾಗದ ಡೀನರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪ್ರಾರ್ಥಿಸಿದರು. ಮಹಿಳಾ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಶಿಲ್ಪ ಅವರು ನಿರೂಪಿಸಿದರು. ಮಹಿಳಾ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ತಾಯಿಶ್ರೀ ವಂದಿಸಿದರು.