ತಿಂಗಳು: ಡಿಸೆಂಬರ್ 2015

ಕನ್ನಡ ವಿಶ್ವವಿದ್ಯಾಲಯದಿಂದ ಚೆನ್ನೈ ಸಂತ್ರಸ್ತರಿಗೆ ನಿಧಿ ಸಂಗ್ರಹ

0709

ಅನೇಕ ವರ್ಷಗಳ ಹಿಂದೆ ಕನ್ನಡ ವಿಶ್ವವಿದ್ಯಾಲಯವು ಹಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ತುಂಗಾಭದ್ರಾ ನೆರೆಹಾವಳಿಯಿಂದಾಗಿ ಮುಳುಗಿ ಹೋಗಿತ್ತು. ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಉತ್ತರಕರ್ನಾಟಕದಲ್ಲಿ ಪ್ರವಾಹದಿಂದ ಉಂಟಾದ ಕಷ್ಟನಷ್ಟಗಳ ಅಧ್ಯಯನ ಮಾಡಿ ಕನ್ನಡ ವಿಶ್ವವಿದ್ಯಾಲಯ ವರದಿ ಮಾಡಿತ್ತು. ಕನ್ನಡ ವಿಶ್ವವಿದ್ಯಾಲಯವು ಪ್ರವಾಹದ, ನೆರೆಹಾವಳಿಯ ಸಂಕಟವನ್ನು ಸ್ವತಃ ಅನುಭವಿಸಿದೆ. ಅರ್ಥ ಮಾಡಿಕೊಂಡಿದೆ ಇದನ್ನೆಲ್ಲ ನೆನಪಿಸಿಕೊಂಡ ವಿಶ್ವವಿದ್ಯಾಲಯ ಚೆನ್ನೈನಲ್ಲಿ ಅನ್ನ, ಬಟ್ಟೆ, ಸೂರು ಇಲ್ಲದೆ ಕಂಗಾಲಾಗಿರುವ ಸಂತ್ರಸ್ತರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕೆಂಬ ಆಶಯದಿಂದ ಈ ಕೆಲಸಕ್ಕೆ ಮುಂದಾಗಿದೆ ಎಂದು ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿಯವರು ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯವು ಜಲಪ್ರಳಯದಿಂದ ಚೆನ್ನೈನಲ್ಲಿ ಕಷ್ಟ-ನಷ್ಟ ಅನುಭವಿಸುತ್ತಿರುವ ಸಂತ್ರಸ್ತರಿಗಾಗಿ ಸಹಾಯ ಮಾಡುವ ಸದುದ್ದೇಶದಿಂದ ಸಂಗೀತ ಯಾತ್ರೆ ಮತ್ತು ಚಿತ್ರಸಂತೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಮೂಲಕ ಚೆನ್ನೈ ಸಂತ್ರಸ್ತರಿಗೆ ಪರಿಹಾರಾರ್ಥವಾಗಿ ನಿಧಿ ಸಂಗ್ರಹಿಸಿ ಸಹಾಯ ಮಾಡುವುದು ಉದ್ದೇಶವಾಗಿದೆ.
೧೬.೧೨.೨೦೧೫ರ ಮುಂಜಾನೆ ೯ಗಂಟೆಯಿಂದ ಹೊಸಪೇಟೆಯ ಬಸ್ ನಿಲ್ದಾಣದಲ್ಲಿ ಕನ್ನಡ ವಿಶ್ವವಿದ್ಯಾಲಯದ ಬೋಧಕರು, ಆಡಳಿತ ವರ್ಗ, ವಿದ್ಯಾರ್ಥಿಗಳು ಅಧಿಕಾರಿಗಳು ಸೇರಿದ್ದರು. ಅಲ್ಲಿ ವಿದ್ಯಾರ್ಥಿಗಳು ರಚಿಸಿರುವ ವರ್ಣಚಿತ್ರಗಳನ್ನು ಚಿತ್ರಸಂತೆಯಲ್ಲಿ ಮಾರಾಟ ಮಾಡುವ ಮೂಲಕ ನಿಧಿಗಾಗಿ ಹಣ ಸಂಗ್ರಹಿಸಲು ಪ್ರದರ್ಶನ ಮಾಡಲಾಗಿತ್ತು.

ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿಯವರು ಚಿತ್ರಸಂತೆ ಹಾಗೂ ಸಂಗೀತ ಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು, ಶ್ರೀ ಸಿದ್ಧನಗೌಡ ಅವರು, ಶ್ರೀ ದೀಪಕ್‌ಸಿಂಗ್, ಶ್ರೀ ಸಾಲಿ ಸಿದ್ಧಯ್ಯಸ್ವಾಮಿ, ಶ್ರೀ ಗುಜ್ಜಲ ರಘು, ಗುಜ್ಜಲ ಶಿವರಾಮ, ಶ್ರೀ ಗುಜ್ಜಲ ಚಂದ್ರಶೇಖರ ಮೊದಲಾದವರು ಉಪಸ್ಥಿತರಿದ್ದು, ದೇಣಿಗೆ ನೀಡಿದರು.
ಮಾನ್ಯಕುಲಪತಿಯವರ ನೇತೃತ್ವದಲ್ಲಿ ಮೊದಲು ಬಸ್ ನಿಲ್ದಾಣದ ಒಳಗೆ ನಿಧಿ ಸಂಗ್ರಹಿಸಲಾಯಿತು. ನಂತರ ಸಂಗೀತಯಾತ್ರೆ ಮೂಲಕ ಶಾನುಭಾಗ ವೃತ್ತ, ವಿಜಯನಗರ ಕಾಲೇಜು ರಸ್ತೆ, ೧೦೦ ಹಾಸಿಗೆ ಆಸ್ಪತ್ರೆ ಮಾರ್ಕಂಡೇಶ್ವರ ದೇವಸ್ಥಾನ, ವಾಲ್ಮೀಕಿ ವೃತ್ತ, ರಾಮಾ ಟಾಕೀಸ್, ಮೇನ್ ಬಜಾರ್, ಬಳ್ಳಾರಿ ರಸ್ತೆ, ಮೂರಂಗಡಿ ವೃತ್ತನ್ನು ಹಾದು ಪುನಃ ಬಸ್ ನಿಲ್ದಾಣದ ಮೂಲಕ ತಹಸೀಲ್ದಾರರ ಕಚೇರಿಗೆ ಬರಲಾಯಿತು. ಈ ಮಾರ್ಗ ಮಧ್ಯದಲ್ಲಿ ಇರುವ, ಸಿಗುವ, ನಾಗರೀಕರು ಅಂಗಡಿಗಳು ದ್ವಿಚಕ್ರ, ನಾಲ್ಕು ಚಕ್ರ ವಾಹನಗಳಲ್ಲಿರುವವರು, ಬಸ್‌ಗಳನ್ನು ತಡೆದು ಪ್ರಯಾಣೀಕರಿಂದ ಹಣ ಸಂಗ್ರಹಿಸಲಾಯಿತು. ಯಾತ್ರೆಯು ಮುಗಿಯುವತನಕ ಮಾನ್ಯಕುಲಪತಿಯವರು ನಡೆಯುತ್ತ ಜೊತೆಯಲ್ಲಿದ್ದು ದೇಣಿಗೆ ಸಂಗ್ರಹಿಸಿದರು.

ಚಿತ್ರಸಂತೆ ಮತ್ತು ಸಂಗೀತ ಯಾತ್ರೆಯ ಸಂಚಾಲಕರಾದ ಸಂಗೀತ ವಿಭಾಗದ ಮುಖ್ಯಸ್ಥರೂ ಡೀನರೂ ಆದ ಡಾ.ಹನುಮಣ್ಣನಾಯಕ ದೊರೆ ಅವರ ಸಂಗೀತದೊಂದಿಗೆ ನಿಧಿ ಸಂಗ್ರಹಿಸುವ ಹೊಸ ಪರಿಕಲ್ಪನೆಯು ನಾಡಿನಲ್ಲೇ ಪ್ರಥಮವಾಗಿತ್ತು. ಸಂಗೀತ ವಿದ್ಯಾರ್ಥಿಗಳು ವಾದ್ಯ ಪರಿಕರಗಳ ನೆರವಿನಿಂದ ದಣಿವಿಲ್ಲದೆ ಸತತ ಆರು ತಾಸು ನಡೆಯುತ್ತಲೇ ಹಾಡಿದರು. ನಿಧಿ ಸಂಗ್ರಹಿಸಲು ಉತ್ಸಾಹ ತುಂಬಿದರು. ಹಚ್ಚೇವು ಕನ್ನಡದ ದೀಪ, ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು, ಕರುಣಾಳು ಬಾ ಬೆಳಕೆ, ಆಡಿಸಿ ನೋಡು ಬೀಳಿಸಿ ನೋಡು, ಏನಾಗಲಿ ಮುಂದೆ ಸಾಗು ನೀ ಮೊದಲಾದ ಹಾಡುಗಳನ್ನು ಹಾಡಿದರು. ಪ್ರಾಧ್ಯಾಪಕರಾದ ಡಾ.ಬಿ.ಎಂ.ಪುಟ್ಟಯ್ಯ ಅವರು ಕ್ರಾಂತಿಗೀತೆಗಳನ್ನು ಹಾಡಿದರು.

ಸಂಗೀತ ಯಾತ್ರೆಯಲ್ಲಿ ಒಂದು ಸಣ್ಣ ಸಹಾಯ ಒಂದು ಜೀವ ಉಳಿಸಬಲ್ಲದು, ಚೆನ್ನೈ ಸಂತ್ರಸ್ತರಿಗೆ ನೆರವು ನೀಡಿರಿ-ಮಾನವೀಯತೆ ಮೆರೆಯಿರಿ, ದಾನ ಮಾಡಿ ಜೀವ ಉಳಿಸಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡೋಣ, ಚೆನ್ನೈ ಸಂತ್ರಸ್ತರೊಂದಿಗೆ ನಾವು ನೀವು, ಚೆನ್ನೈ ಸಂತ್ರಸ್ತರ ಕಣ್ಣೀರ ಒರೆಸಿ ಎಂಬ ಫಲಕಗಳನ್ನು ಪ್ರದರ್ಶಿಸಲಾಯಿತು.
ಕನ್ನಡ ವಿಶ್ವವಿದ್ಯಾಲಯದ ಸಿಬ್ಬಂದಿಯು ವೈಯಕ್ತಿಕವಾಗಿ ಮಾನವೀಯ ನೆಲೆಯಲ್ಲಿ ನಿಧಿ ಸಂಗ್ರಹಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು. ಹೊಸಪೇಟೆಯ ಬಸ್ ಕಂಡಕ್ಟರ್ ನಳಿನ ಚಿತ್ರಸಂತೆಯಲ್ಲಿ ಚಿತ್ರವನ್ನು ಖರೀದಿಸಿ ದೇಣಿಗೆ ನೀಡಿದರು.