ವಿಶೇಷ ಉಪನ್ಯಾಸ- ಅಧ್ಯಯನಾಂಗ
ಪತ್ರಿಕಾ ವರದಿ- ೨೭.೦೧.೨೦೧೭
ಆಂತರಿಕ ತುಡಿತ ಇಲ್ಲದಿದ್ದರೆ ದಯವಿಟ್ಟು ಯಾರೂ ಪತ್ರಿಕೋದ್ಯಮಕ್ಕೆ ಬರಬೇಡಿ. ನಿಮ್ಮ ನಿರಂತರ ಓದು ನಿಮ್ಮನ್ನು ಕೈ ಹಿಡಿಯುತ್ತದೆ ಎಮದು ಸಂಶೋಧನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಂಟಪ ಸಭಾಂಗಣದಲ್ಲಿ ಚಿಂತಕರು ಮತ್ತು ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕರಾದ ಶ್ರೀ ರವಿ ಬೆಳೆಗೆರೆ ಅವರು ಮಾತನಾಡಿದರು.
ಕನ್ನಡ ವಿಶ್ವವಿದ್ಯಾಲಯ ಅಧ್ಯಯನಾಂಗವು ೨೭ನೇ ಜನವರಿ ೨೦೧೭ರಂದು ಏರ್ಪಡಿಸಿದ್ದ ಮಾಧ್ಯಮಗಳ ಸಾಮಾಜಿಕ ಹೊಣೆಗಾರಿಕೆ ಕುರಿತ ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಜನರಿಗೆ ಬೇಕಾಗಿರುವುದನ್ನು ಒದಗಿಸುವ ಹೊಣೆಗಾರಿಕೆ ಪತ್ರಿಕೋದ್ಯಮಕ್ಕೆ ಇರಬೇಕು. ಯಾವ ವಿಷಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಕೊಡಬಾರದು ಎಂದು ಎಚ್ಚರಿಕೆಯಿಂದ ಹೊಣೆಗಾರಿಕೆ ಅರಿತಿರಬೇಕು. ಸಾಮಾಜಿಕ ಹೊಣೆಗಾರಿಕೆ ಯಾಕೆ ಇಲ್ಲ ಎಂದರೆ ಚಳುವಳಿಗಳಿಂದ ಬಂದಿಲ್ಲ. ಚಳುವಳಿಗಳಿಂದ ಬಂದವರಿಗೆ ಏನನ್ನು ಬರೆಯಬೇಕು ಎಂಬ ಪ್ರಜ್ಞೆ ಇರುತ್ತದೆ. ಪತ್ರಿಕೋದ್ಯಮಿ ಆಗಬೇಕೆಂದರೆ ಮೊದಲು ಚೆನ್ನಾಗಿ ಓದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಲು ಮೊದಲು ಜಾತಿ ಬಿಡಬೇಕು. ಆಗ ಹೊಸ ಜ್ಞಾನೋದಯ, ಹೊಸ ಬದುಕು ಸಿಗುತ್ತದೆ. ಆಗ ಸಾಮಾಜಿಕ ಹೊಣೆಗಾರಿಕೆ ಅರ್ಥವಾಗುತ್ತದೆ. ಯಾವ ಚಳುವಳಿ ಪತ್ರಿಕೋದ್ಯಮದೊಳಗಿನಿಂದ ಆರಂಭವಾಗುತ್ತದೆಯೋ ಅದಕ್ಕೆ ದೊಡ್ಡ ಬೆಂಬಲ ಸಿಗುತ್ತದೆ. ನನ್ನ ಹೆಸರು ಬೈ ಲೈನ್ಗೆ ಬರಬೇಕು. ಟಿ.ವಿ.ಯಲ್ಲಿ ನಾನು ಕಾಣಿಸಬೇಕು ಎಂಬ ಮನಸ್ಥಿತಿಯಿಂದ ಹೊರಬರಬೇಕು. ಪತ್ರಕರ್ತರಿಗೆ ಅನಿಸಿದ್ದನ್ನು ಬರೆದರೆ ಅದು ಪತ್ರಿಕೋದ್ಯಮ ಅಲ್ಲ, ಸಾಮಾಜಿಕ ಹೊಣೆಗಾರಿಕೆ ಅನುಭವಿಸಿ ಆಹ್ವಾನಿಸಿ ಬರೆಯಬೇಕು. ಭಾಷೆ ಕಲಿಯಬೇಕು. ಚಳುವಳಿಗಳನ್ನು ನೋಡಬೇಕು. ಸುತ್ತಮುತ್ತ ಗಮನಿಸಬೇಕು. ಪತ್ರಿಕೋದ್ಯಮದಲ್ಲಿ ಓದುವುದು, ಜವಾಬ್ದಾರಿ ಹಾಗೂ ಶ್ರದ್ಧೆ ಬದ್ಧತೆ ಪರಿಶ್ರಮ ಬಹಳ ಮುಖ್ಯ. ಮಹಿಳೆಯರು ಪತ್ರಿಕೋದ್ಯಮದಲ್ಲಿ ಮಹಿಳೆಯರು ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಯಾರೇ ಆದರೂ ಸುಮ್ಮನೆ ದೊಡ್ಡವರಾಗುವುದಿಲ್ಲ. ಪ್ರಯತ್ನ ಬಹಳ ಮುಖ್ಯ ಎಂದರು.
ಸಾಮಾಜಿಕ ಜಾಲತಾಣಗಳನ್ನು ಕುರಿತು ಮಾತನಾಡುತ್ತ, ಟ್ವಿಟರ್, ಫೇಸ್ಬುಕ್(ನನಗೆ ಅವುಗಳ ಮೇಲೆ ಗೌರವ ಇಲ್ಲ ಎನ್ನುತ್ತ) ಜಾಲತಾಣಗಳಿವೆ. ಯಾಕಿವೆ ಎಂದರೆ ಜನರಿಗೆ ಪತ್ರಕರ್ತರ ಮೇಲೆ ವಿಶ್ವಾಸ ಇಲ್ಲ ಅದಕ್ಕೆ. ಜಾಲತಾಣಗಳಿಂದ ಹೊಸ ವಿಷಯಗಳು ಬರುತ್ತವೆ ಹಾಗೂ ತಮ್ಮ ವ್ಯಕ್ತಿತ್ವ ಅದರಲ್ಲಿ ವಿಜೃಂಭಿಸಬಹುದು ಎಂದು. ಮೊದಲು ಮೊಬೈಲ್ಗಳಲ್ಲಿ ಎಸ್.ಎಂ.ಎಸ್.ಗಳು ಈಗ ವಾಟ್ಸ್ಪ್ ಇದು ಜನರನ್ನು ಬೌದ್ಧಿಕ ಆಯಾಮದತ್ತ ಕರೆದೊಯ್ಯುತ್ತಿದ್ದರೆ ಒಪ್ಪಬಹುದು. ಆದರೆ ಮೊಬೈಲ್ಗಳು ಹಾಗೆ ಮಾಡುತ್ತಿಲ್ಲ ಎಂದು ತಿಳಿಸುತ್ತ ರವಿ ಬೆಳಗೆರೆ ಅವರು ಸ್ವತಃ ಕಾರ್ಗಿಲ್ಗೆ ಹೋಗಿ ಯುದ್ಧ ಭೂಮಿಯಲ್ಲಿ ನಿಂತು ಕೆಲಸ ಮಾಡಿದ ಏಕೈಕ ಪತ್ರಕರ್ತ ತಾನು. ತಾಲಿಬಾನ್-ಅಫಘಾನಿಸ್ತಾನ ಯುದ್ಧ ವರದಿ ಮಾಡಲು ಹೋಗಿದ್ದೆ. ೩೯ ದೇಶಗಳನ್ನು ಅನೇಕ ಸಲ ಸುತ್ತಿದ್ದೇನೆ. ದೇಶ ಸುತ್ತಬೇಕು ಅನುಭವ ಗಳಿಸಬೇಕು. ಸಾಧನೆಗಳನ್ನು ಮಾಡಬೇಕು ಎಂದು ಸಂಶೋಧಕರಿಗೆ ಹೇಳಿದರು.
ಹೋರಾಟಗಾರರಾದ ದೇವಯ್ಯ ಹರವೆ, ರಾಜಕಾರಣಿಗಳಾದ ದೇವೇಗೌಡರು, ಜೆ.ಎಚ್.ಪಟೇಲರು, ಯಡಿಯೂರಪ್ಪ, ಈಶ್ವರಪ್ಪ, ಜೀವರಾಜ ಆಳ್ವ, ಲಾಲಪ್ರಸಾದ್ ಯಾದವ್, ಗುಂಡುರಾಯರು, ಪ್ರೊ.ನಂಜುಂಡಸ್ವಾಮಿ, ನಾಗೇಗೌಡರು ಮೊದಲಾದವರು ಅಲ್ಲದೆ ಬೀಚಿ, ತರಾಸು, ಅನಾಕೃ ರಿಂದ ಸಿದ್ಧಲಿಂಗಯ್ಯ ಅವರ ವರೆಗೆ ಬಹಳ ಹತ್ತಿರದಿಂದ ನೋಡಿದ್ದೇನೆ ಒಡನಾಡಿದ್ದೇನೆ. ಇಲ್ಲವಾದರೆ ವ್ಯಕ್ತಿತ್ವ ತಿಳಿಯಲು ಆಗಲ್ಲ. ಈ ರೀತಿಯ ಒಡನಾಟ, ಸಾಮಿಪ್ಯದ ಸೂಕ್ಷ್ಮ ಗಮನಿಸುವಿಕೆಯಿಂದ ಬಹಳ ಭಿನ್ನ ವ್ಯಕ್ತಿತ್ವಗಳು ಸಿಗುತ್ತವೆ. ಹತ್ತಿರದಿಂದ ನೋಡಬೇಕು ಅವರ ಹ್ಯಾಬಿಟ್ಸ್, ಮೂವ್ಮೆಂಟ್ಸ್, ಅವರ ಭಾಷೆ ಗಮನಿಸಬೇಕು. ಅಬ್ಸರವೇಷನ್ ಪತ್ರಕರ್ತನಿಗೆ ಬಹಳ ಮುಖ್ಯದ ವಿದ್ಯೆ. ಹೊರ ಜಗತ್ತಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳುತ್ತ ತಮ್ಮ ಕಚೇರಿಯಲ್ಲಿ ೪೦,೦೦೦ ಪುಸ್ತಕಗಳ ಸಂಗ್ರಹವಿದೆ. ನೀವು ಓದುವ ಚಟ ಬೆಳೆಸಿಕೊಳ್ಳಿ. ಪುಸ್ತಕಗಳನ್ನು ಪ್ರೀತಿಸಿ ಸಂಗೀತ ಕೇಳಿ ಎನ್ನುತ್ತ ನನಗೆ ೭೦,೦೦೦ ಹಾಡುಗಳು ಬಾಯಲ್ಲಿ ಬರುತ್ತವೆ. ನೀವು ಯಾವುದೇ ಹಾಡನ್ನು ಅರ್ಧಕ್ಕೆ ನಿಲ್ಲಿಸಿದರೆ ನಾನು ಪೂರ್ಣಗೊಳಿಸುತ್ತೇನೆ ಎಂದು ರವಿ ಅವರು ಸವಾಲು ಹಾಕಿದರು. ಬಳ್ಳಾರಿಯ ಬೇರುಗಳನ್ನು ತಾನಿನ್ನು ಕಳಿಸಿಕೊಂಡಿಲ್ಲ. ಮಿರ್ಚಿ ಮೆಣಸಿನಕಾಯಿ ಮಂಡಾಳು ಮರೆತಿಲ್ಲ ಎಂದು ಮೆಲುಕು ಹಾಕಿದರು. ಕನ್ನಡವನ್ನು ಅತ್ಯಂತ ಪ್ರೀತಿಸುವ ಮನುಷ್ಯ ನಾನು. ಕನ್ನಡಕ್ಕೆ ಬಹಳ ಸೊಗಸಾದ ಸೊಗಡಿದೆ. ಪ್ರಾಥಮಿಕ ಶಾಲೆಯವರೆಗೆ ತೆಲುಗಿನಲ್ಲಿ ಓದಿದೆ. ಪೋಸ್ಟರ್ಗಳನ್ನು ನೋಡಿ ಕನ್ನಡವನ್ನು ಕಲಿತೆ ಎಂದು ಹೇಳಿಕೊಂಡರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಶ್ರದ್ಧೆ ಮತ್ತು ಪರಿಶ್ರಮದಿಂದ ಏನೆಲ್ಲ ಆಗಬಹುದು ಎಂಬುದಕ್ಕೆ ರವಿ ಬೆಳೆಗೆರೆ ಅವರು ಸಾಕ್ಷಿಯಾಗಿದ್ದಾರೆ. ನಮಗೆ ಬರುವ ತಿರುವುಗಳನ್ನು ನಿಭಾಯಿಸಬೇಕು. ಪತ್ರಿಕೋದ್ಯಮ ಓದುವುದರಿಂದ ಮಾತ್ರ ಬರುವುದಿಲ್ಲ. ನೋಡುತ್ತ ಜಗತ್ತಿನ ಅನುಭವದಿಂದಲೂ ಸೂಕ್ಷ್ಮಗ್ರಹಿಕೆಯಿಂದಲೂ ಕಲಿಯಬೇಕು ಎಂದು ಹೇಳುತ್ತ, ಜ್ಞಾನದ ಹಂಬಲಕ್ಕೆ ಮುಪ್ಪಿನ ಮಿತಿ ಇಲ್ಲ. ಹಾಗೆ ರವಿ ಬೆಳಗೆರೆ ಅವರು ಇಂದು ಕನ್ನಡ ವಿಶ್ವವಿದ್ಯಾಲಯದಲ್ಲಿ ತಮ್ಮ ಪಿಎಚ್.ಡಿ. ಅಧ್ಯಯನಕ್ಕೆ ನೊಂದಾಯಿಸಲಿದ್ದಾರೆ ಎಂದು ಸಂತೋಷಪಟ್ಟರು.
ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಸ್ವಾಗತಿಸಿದರು. ವಿದ್ಯಾರ್ಥಿ ಸಂತೋಷ ನಿರೂಪಿಸಿದರು. ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅಧ್ಯಯನಾಂಗದ ನಿರ್ದೇಶಕರಾದ ಡಾ. ಕೆ. ರವೀಂದ್ರನಾಥ ವಂದಿಸಿದರು. ಮಂಟಪ ಸಭಾಂಗಣವು ಬೋಧಕರು, ಆಡಳಿತವರ್ಗ, ವಿದ್ಯಾರ್ಥಿಗಳು ಹಾಗೂ ರವಿ ಬೆಳಗೆರೆ ಅಭಿಮಾನಿಗಳಿಂದ ತುಂಬಿತ್ತು.