ತಿಂಗಳು: ಜನವರಿ 2017

ಮಾಧ್ಯಮಗಳ ಸಾಮಾಜಿಕ ಹೊಣೆಗಾರಿಕೆ- ವಿಶೇಷ ಉಪನ್ಯಾಸ

ವಿಶೇಷ ಉಪನ್ಯಾಸ- ಅಧ್ಯಯನಾಂಗ
ಪತ್ರಿಕಾ ವರದಿ- ೨೭.೦೧.೨೦೧೭

ಆಂತರಿಕ ತುಡಿತ ಇಲ್ಲದಿದ್ದರೆ ದಯವಿಟ್ಟು ಯಾರೂ ಪತ್ರಿಕೋದ್ಯಮಕ್ಕೆ ಬರಬೇಡಿ. ನಿಮ್ಮ ನಿರಂತರ ಓದು ನಿಮ್ಮನ್ನು ಕೈ ಹಿಡಿಯುತ್ತದೆ ಎಮದು ಸಂಶೋಧನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಂಟಪ ಸಭಾಂಗಣದಲ್ಲಿ ಚಿಂತಕರು ಮತ್ತು ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕರಾದ ಶ್ರೀ ರವಿ ಬೆಳೆಗೆರೆ ಅವರು ಮಾತನಾಡಿದರು.
ಕನ್ನಡ ವಿಶ್ವವಿದ್ಯಾಲಯ ಅಧ್ಯಯನಾಂಗವು ೨೭ನೇ ಜನವರಿ ೨೦೧೭ರಂದು ಏರ್ಪಡಿಸಿದ್ದ ಮಾಧ್ಯಮಗಳ ಸಾಮಾಜಿಕ ಹೊಣೆಗಾರಿಕೆ ಕುರಿತ ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಜನರಿಗೆ ಬೇಕಾಗಿರುವುದನ್ನು ಒದಗಿಸುವ ಹೊಣೆಗಾರಿಕೆ ಪತ್ರಿಕೋದ್ಯಮಕ್ಕೆ ಇರಬೇಕು. ಯಾವ ವಿಷಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಕೊಡಬಾರದು ಎಂದು ಎಚ್ಚರಿಕೆಯಿಂದ ಹೊಣೆಗಾರಿಕೆ ಅರಿತಿರಬೇಕು. ಸಾಮಾಜಿಕ ಹೊಣೆಗಾರಿಕೆ ಯಾಕೆ ಇಲ್ಲ ಎಂದರೆ ಚಳುವಳಿಗಳಿಂದ ಬಂದಿಲ್ಲ. ಚಳುವಳಿಗಳಿಂದ ಬಂದವರಿಗೆ ಏನನ್ನು ಬರೆಯಬೇಕು ಎಂಬ ಪ್ರಜ್ಞೆ ಇರುತ್ತದೆ. ಪತ್ರಿಕೋದ್ಯಮಿ ಆಗಬೇಕೆಂದರೆ ಮೊದಲು ಚೆನ್ನಾಗಿ ಓದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಲು ಮೊದಲು ಜಾತಿ ಬಿಡಬೇಕು. ಆಗ ಹೊಸ ಜ್ಞಾನೋದಯ, ಹೊಸ ಬದುಕು ಸಿಗುತ್ತದೆ. ಆಗ ಸಾಮಾಜಿಕ ಹೊಣೆಗಾರಿಕೆ ಅರ್ಥವಾಗುತ್ತದೆ. ಯಾವ ಚಳುವಳಿ ಪತ್ರಿಕೋದ್ಯಮದೊಳಗಿನಿಂದ ಆರಂಭವಾಗುತ್ತದೆಯೋ ಅದಕ್ಕೆ ದೊಡ್ಡ ಬೆಂಬಲ ಸಿಗುತ್ತದೆ. ನನ್ನ ಹೆಸರು ಬೈ ಲೈನ್‌ಗೆ ಬರಬೇಕು. ಟಿ.ವಿ.ಯಲ್ಲಿ ನಾನು ಕಾಣಿಸಬೇಕು ಎಂಬ ಮನಸ್ಥಿತಿಯಿಂದ ಹೊರಬರಬೇಕು. ಪತ್ರಕರ್ತರಿಗೆ ಅನಿಸಿದ್ದನ್ನು ಬರೆದರೆ ಅದು ಪತ್ರಿಕೋದ್ಯಮ ಅಲ್ಲ, ಸಾಮಾಜಿಕ ಹೊಣೆಗಾರಿಕೆ ಅನುಭವಿಸಿ ಆಹ್ವಾನಿಸಿ ಬರೆಯಬೇಕು. ಭಾಷೆ ಕಲಿಯಬೇಕು. ಚಳುವಳಿಗಳನ್ನು ನೋಡಬೇಕು. ಸುತ್ತಮುತ್ತ ಗಮನಿಸಬೇಕು. ಪತ್ರಿಕೋದ್ಯಮದಲ್ಲಿ ಓದುವುದು, ಜವಾಬ್ದಾರಿ ಹಾಗೂ ಶ್ರದ್ಧೆ ಬದ್ಧತೆ ಪರಿಶ್ರಮ ಬಹಳ ಮುಖ್ಯ. ಮಹಿಳೆಯರು ಪತ್ರಿಕೋದ್ಯಮದಲ್ಲಿ ಮಹಿಳೆಯರು ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಯಾರೇ ಆದರೂ ಸುಮ್ಮನೆ ದೊಡ್ಡವರಾಗುವುದಿಲ್ಲ. ಪ್ರಯತ್ನ ಬಹಳ ಮುಖ್ಯ ಎಂದರು.
ಸಾಮಾಜಿಕ ಜಾಲತಾಣಗಳನ್ನು ಕುರಿತು ಮಾತನಾಡುತ್ತ, ಟ್ವಿಟರ್, ಫೇಸ್‌ಬುಕ್(ನನಗೆ ಅವುಗಳ ಮೇಲೆ ಗೌರವ ಇಲ್ಲ ಎನ್ನುತ್ತ) ಜಾಲತಾಣಗಳಿವೆ. ಯಾಕಿವೆ ಎಂದರೆ ಜನರಿಗೆ ಪತ್ರಕರ್ತರ ಮೇಲೆ ವಿಶ್ವಾಸ ಇಲ್ಲ ಅದಕ್ಕೆ. ಜಾಲತಾಣಗಳಿಂದ ಹೊಸ ವಿಷಯಗಳು ಬರುತ್ತವೆ ಹಾಗೂ ತಮ್ಮ ವ್ಯಕ್ತಿತ್ವ ಅದರಲ್ಲಿ ವಿಜೃಂಭಿಸಬಹುದು ಎಂದು. ಮೊದಲು ಮೊಬೈಲ್‌ಗಳಲ್ಲಿ ಎಸ್.ಎಂ.ಎಸ್.ಗಳು ಈಗ ವಾಟ್ಸ್‌ಪ್ ಇದು ಜನರನ್ನು ಬೌದ್ಧಿಕ ಆಯಾಮದತ್ತ ಕರೆದೊಯ್ಯುತ್ತಿದ್ದರೆ ಒಪ್ಪಬಹುದು. ಆದರೆ ಮೊಬೈಲ್‌ಗಳು ಹಾಗೆ ಮಾಡುತ್ತಿಲ್ಲ ಎಂದು ತಿಳಿಸುತ್ತ ರವಿ ಬೆಳಗೆರೆ ಅವರು ಸ್ವತಃ ಕಾರ್ಗಿಲ್‌ಗೆ ಹೋಗಿ ಯುದ್ಧ ಭೂಮಿಯಲ್ಲಿ ನಿಂತು ಕೆಲಸ ಮಾಡಿದ ಏಕೈಕ ಪತ್ರಕರ್ತ ತಾನು. ತಾಲಿಬಾನ್-ಅಫಘಾನಿಸ್ತಾನ ಯುದ್ಧ ವರದಿ ಮಾಡಲು ಹೋಗಿದ್ದೆ. ೩೯ ದೇಶಗಳನ್ನು ಅನೇಕ ಸಲ ಸುತ್ತಿದ್ದೇನೆ. ದೇಶ ಸುತ್ತಬೇಕು ಅನುಭವ ಗಳಿಸಬೇಕು. ಸಾಧನೆಗಳನ್ನು ಮಾಡಬೇಕು ಎಂದು ಸಂಶೋಧಕರಿಗೆ ಹೇಳಿದರು.
ಹೋರಾಟಗಾರರಾದ ದೇವಯ್ಯ ಹರವೆ, ರಾಜಕಾರಣಿಗಳಾದ ದೇವೇಗೌಡರು, ಜೆ.ಎಚ್.ಪಟೇಲರು, ಯಡಿಯೂರಪ್ಪ, ಈಶ್ವರಪ್ಪ, ಜೀವರಾಜ ಆಳ್ವ, ಲಾಲಪ್ರಸಾದ್ ಯಾದವ್, ಗುಂಡುರಾಯರು, ಪ್ರೊ.ನಂಜುಂಡಸ್ವಾಮಿ, ನಾಗೇಗೌಡರು ಮೊದಲಾದವರು ಅಲ್ಲದೆ ಬೀಚಿ, ತರಾಸು, ಅನಾಕೃ ರಿಂದ ಸಿದ್ಧಲಿಂಗಯ್ಯ ಅವರ ವರೆಗೆ ಬಹಳ ಹತ್ತಿರದಿಂದ ನೋಡಿದ್ದೇನೆ ಒಡನಾಡಿದ್ದೇನೆ. ಇಲ್ಲವಾದರೆ ವ್ಯಕ್ತಿತ್ವ ತಿಳಿಯಲು ಆಗಲ್ಲ. ಈ ರೀತಿಯ ಒಡನಾಟ, ಸಾಮಿಪ್ಯದ ಸೂಕ್ಷ್ಮ ಗಮನಿಸುವಿಕೆಯಿಂದ ಬಹಳ ಭಿನ್ನ ವ್ಯಕ್ತಿತ್ವಗಳು ಸಿಗುತ್ತವೆ. ಹತ್ತಿರದಿಂದ ನೋಡಬೇಕು ಅವರ ಹ್ಯಾಬಿಟ್ಸ್, ಮೂವ್‌ಮೆಂಟ್ಸ್, ಅವರ ಭಾಷೆ ಗಮನಿಸಬೇಕು. ಅಬ್ಸರವೇಷನ್ ಪತ್ರಕರ್ತನಿಗೆ ಬಹಳ ಮುಖ್ಯದ ವಿದ್ಯೆ. ಹೊರ ಜಗತ್ತಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳುತ್ತ ತಮ್ಮ ಕಚೇರಿಯಲ್ಲಿ ೪೦,೦೦೦ ಪುಸ್ತಕಗಳ ಸಂಗ್ರಹವಿದೆ. ನೀವು ಓದುವ ಚಟ ಬೆಳೆಸಿಕೊಳ್ಳಿ. ಪುಸ್ತಕಗಳನ್ನು ಪ್ರೀತಿಸಿ ಸಂಗೀತ ಕೇಳಿ ಎನ್ನುತ್ತ ನನಗೆ ೭೦,೦೦೦ ಹಾಡುಗಳು ಬಾಯಲ್ಲಿ ಬರುತ್ತವೆ. ನೀವು ಯಾವುದೇ ಹಾಡನ್ನು ಅರ್ಧಕ್ಕೆ ನಿಲ್ಲಿಸಿದರೆ ನಾನು ಪೂರ್ಣಗೊಳಿಸುತ್ತೇನೆ ಎಂದು ರವಿ ಅವರು ಸವಾಲು ಹಾಕಿದರು. ಬಳ್ಳಾರಿಯ ಬೇರುಗಳನ್ನು ತಾನಿನ್ನು ಕಳಿಸಿಕೊಂಡಿಲ್ಲ. ಮಿರ್ಚಿ ಮೆಣಸಿನಕಾಯಿ ಮಂಡಾಳು ಮರೆತಿಲ್ಲ ಎಂದು ಮೆಲುಕು ಹಾಕಿದರು. ಕನ್ನಡವನ್ನು ಅತ್ಯಂತ ಪ್ರೀತಿಸುವ ಮನುಷ್ಯ ನಾನು. ಕನ್ನಡಕ್ಕೆ ಬಹಳ ಸೊಗಸಾದ ಸೊಗಡಿದೆ. ಪ್ರಾಥಮಿಕ ಶಾಲೆಯವರೆಗೆ ತೆಲುಗಿನಲ್ಲಿ ಓದಿದೆ. ಪೋಸ್ಟರ್‌ಗಳನ್ನು ನೋಡಿ ಕನ್ನಡವನ್ನು ಕಲಿತೆ ಎಂದು ಹೇಳಿಕೊಂಡರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಶ್ರದ್ಧೆ ಮತ್ತು ಪರಿಶ್ರಮದಿಂದ ಏನೆಲ್ಲ ಆಗಬಹುದು ಎಂಬುದಕ್ಕೆ ರವಿ ಬೆಳೆಗೆರೆ ಅವರು ಸಾಕ್ಷಿಯಾಗಿದ್ದಾರೆ. ನಮಗೆ ಬರುವ ತಿರುವುಗಳನ್ನು ನಿಭಾಯಿಸಬೇಕು. ಪತ್ರಿಕೋದ್ಯಮ ಓದುವುದರಿಂದ ಮಾತ್ರ ಬರುವುದಿಲ್ಲ. ನೋಡುತ್ತ ಜಗತ್ತಿನ ಅನುಭವದಿಂದಲೂ ಸೂಕ್ಷ್ಮಗ್ರಹಿಕೆಯಿಂದಲೂ ಕಲಿಯಬೇಕು ಎಂದು ಹೇಳುತ್ತ, ಜ್ಞಾನದ ಹಂಬಲಕ್ಕೆ ಮುಪ್ಪಿನ ಮಿತಿ ಇಲ್ಲ. ಹಾಗೆ ರವಿ ಬೆಳಗೆರೆ ಅವರು ಇಂದು ಕನ್ನಡ ವಿಶ್ವವಿದ್ಯಾಲಯದಲ್ಲಿ ತಮ್ಮ ಪಿಎಚ್.ಡಿ. ಅಧ್ಯಯನಕ್ಕೆ ನೊಂದಾಯಿಸಲಿದ್ದಾರೆ ಎಂದು ಸಂತೋಷಪಟ್ಟರು.
ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಸ್ವಾಗತಿಸಿದರು. ವಿದ್ಯಾರ್ಥಿ ಸಂತೋಷ ನಿರೂಪಿಸಿದರು. ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅಧ್ಯಯನಾಂಗದ ನಿರ್ದೇಶಕರಾದ ಡಾ. ಕೆ. ರವೀಂದ್ರನಾಥ ವಂದಿಸಿದರು. ಮಂಟಪ ಸಭಾಂಗಣವು ಬೋಧಕರು, ಆಡಳಿತವರ್ಗ, ವಿದ್ಯಾರ್ಥಿಗಳು ಹಾಗೂ ರವಿ ಬೆಳಗೆರೆ ಅಭಿಮಾನಿಗಳಿಂದ ತುಂಬಿತ್ತು.

ಪೊಲಿಟಿಕಲ್ ಎಕಾನಮಿ ಆಫ್ ತ್ರಿಪುರ : ತ್ರಿಪುರ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಅವರಾದ ಶ್ರೀ ಮಾಣಿಕ್ ಸರ್ಕಾರ್ ಅವರಿಂದ ವಿಶೇಷ ಉಪನ್ಯಾಸ

01-3ವೇದಿಕೆಯಲ್ಲಿ ವಿಭಾಗದ ಮುಖ್ಯಸ್ಥರಾದ ಡಾ. ಸಿದ್ದಗಂಗಮ್ಮ, ಪ್ರಾಧ್ಯಾಪಕರಾದ  ಡಾ. ಚಂದ್ರಪೂಜಾರಿ, ತ್ರಿಪುರ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಅವರಾದ ಶ್ರೀ ಮಾಣಿಕ್ ಸರ್ಕಾರ್ ಅವರು, ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು, ಶ್ರೀ ಜಿ.ವಿ.ಸಿದ್ಧರಾಮರೆಡ್ಡಿ ಅವರು, ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಅವರು

02-3ತ್ರಿಪುರ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಅವರಾದ ಶ್ರೀ ಮಾಣಿಕ್ ಸರ್ಕಾರ್ ಅವರಿಂದ ವಿಶೇಷ ಉಪನ್ಯಾಸ

04-4ಮಾನ್ಯ ಕುಲಪತಿಯವರಿಂದ ಅಧ್ಯಕ್ಷೀಯ ನುಡಿ 05-2 ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ಮಾನ್ಯ ಕುಲಪತಿಯವರಿಂದ ಗೌರವ

ರಾಜ್ಯಮಟ್ಟದ ಜನಪರ ಶಿಲಾ ಶಿಲ್ಪಕಲಾ ಶಿಬಿರ (ಗಿರಿಜನ ಉಪಯೋಜನೆಯಡಿ)

05ವೇದಿಕೆಯಲ್ಲಿ ಉಪಸ್ಥಿತರಿರುವ ಡಾ. ಅಶೋಕಕುಮಾರ ರಂಜೇರೆ, ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು, ಶ್ರೀ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಅವರು ಹಾಗೂ ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಅವರು01ಶಿಲೆಯನ್ನು ಕೆತ್ತುವ ಮೂಲಕ ಶಿಬಿರವನ್ನು ಉದ್ಘಾಟಿಸುತ್ತಿರುವ ಶ್ರೀ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಅವರು02ಉದ್ಘಾಟನಾ ಭಾಷಣ ಮಾಡುತ್ತಿರುವ ಶ್ರೀ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಅವರು03ಅಧ್ಯಕ್ಷತೆ ನುಡಿಯುತ್ತಿರುವ ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಅವರು

ಉದ್ಘಾಟನೆಯ ಪತ್ರಿಕಾ ವರದಿ

ಪ್ರಶಸ್ತಿ ಪುರಸ್ಕಾರಗಳು ಕಲಾವಿದರನ್ನು ಹುಡುಕಿಕೊಂಡು ಬರಬೇಕೆ ವಿನಹ ಕಲಾವಿದರೇ ದೇಹಿ ಎಂದು ಬೇಡಬಾರದು. ಇದು ಅಕ್ಷಮ್ಯ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ ೧೭.೧.೨೦೧೭ರಿಂದ ೨೮.೧.೨೦೧೭ರ ವರೆಗೆ ಗಿರಿಜನ ಉಪಯೋಜನೆಯಡಿಯಲ್ಲಿ ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಜನಪರ ಶಿಲಾ ಶಿಲ್ಪಕಲಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವವ್ಯಾಪಕವಾದ ವಿದ್ಯೆ ಎಂದರೆ ಕಲೆ. ಕಲಾಕಾರನಿಗೆ ದೇವಿ ಸರಸ್ವತಿಯ ಒಂದು ಮತ(ಗಿoಣe) ಸಾಕು. ಇಡೀ ಭಾರತದಲ್ಲಿ ಧ್ವಜ ಹಾರಿಸಬಲ್ಲ. ಪ್ರಾಚೀನ ಕಲಾವಿದರು ಸರಳವಾಗಿ ಬದುಕಿದ್ದರು. ಅವರಿಗೆ ಉನ್ನತವಾದ ಗೌರವಾದರಗಳು ಇದ್ದವು. ಕಾರಣ ಮಾನವೀಯ ಮೌಲ್ಯಗಳನ್ನು ಹೊಂದಿದ್ದರು ಎಂದು ತಿಳಿಸಿದರು. ವಿದ್ಯೆಯ ಕುರಿತು ಸರ್ವಜ್ಞನ ಪದ್ಯವೊಂದನ್ನು ಉಲ್ಲೇಖಿಸುತ್ತ ಕಲೆಗೆ ಯುಗಾಂತರದ ಇತಿಹಾಸವುಂಟು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಲಲಿತಕಲಾ ನಿಕಾಯದ ಡೀನರಾದ ಡಾ. ಅಶೋಕಕುಮಾರ ರಂಜೇರೆ ಅವರು ಮಾತನಾಡುತ್ತಾ ನಮ್ಮ ಶಿಕ್ಷಣದ ಪರಿಧಿಯೊಳಗೆ ಕನ್ನಡ ವಿಶ್ವವಿದ್ಯಾಲಯ ಪರಿಭಾವಿಸುವ ಈ ನೆಲದ ಜ್ಞಾನ, ಅರಿವು, ತಿಳಿವನ್ನು ಹೊರಗಿಡಲಾಗಿದೆ. ಪಾಶ್ಚಾತ್ಯ ಮಾದರಿಯ ಶಿಕ್ಷಣದ ಚೌಕಟ್ಟಿನೊಳಗೆ ಈ ನೆಲದ ತಿಳಿವು ಇಲ್ಲ. ಶಿಲ್ಪ ಮತ್ತು ಪ್ರತಿಮಾಶಾಸ್ತ್ರವನ್ನು ಕನ್ನಡ ವಿಶ್ವವಿದ್ಯಾಲಯ ಶೈಕ್ಷಣಿಕ ಪರಿಧಿಯೊಳಗೆ ಭಾವಿಸಿದೆ. ಶಿಕ್ಷಣದ ಹೊರಗಿಡುವ ಅನೇಕ ಜ್ಞಾನಗಳನ್ನು ಪುನರ್‌ಸ್ಥಾಪಿಸುವ ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಕೆಲಸ ಮಾಡಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಕಲೆ ಶಿಲ್ಪಕಲೆಗೆ ಒಂದು ಪರಂಪರೆ ಇದೆ. ಆ ಪರಂಪರೆಯ ಜೊತೆಯಲ್ಲಿ ನಿರ್ಬಂಧಗಳು, ಮಡಿ ಮತ್ತು ತಡೆಗಳಿವೆ. ಕನ್ನಡ ವಿಶ್ವವಿದ್ಯಾಲಯ ಇಂತಹ ಪಾರಂಪರಿಕವಾದ ತಡೆಗಳನ್ನು ಮೀರುವಂತಹ ಶಿಕ್ಷಣ ನೀಡುವ ಪ್ರಯತ್ನದಲ್ಲಿದೆ. ಇದರ ಫಲವಾಗಿ ಗಿರಿಜನ ಉಪಯೋಜನೆಯಡಿಯಲ್ಲಿ ಮುಕ್ತವಾಗಿ ಕಲೆಯನ್ನು ಸಾಮಾಜೀಕರಣಗೊಳಿಸುವ ಪ್ರಯತ್ನದಲ್ಲಿ ತೊಡಗಿದೆ. ಪರಂಪರೆಯಲ್ಲಿ ದಾಖಲಾಗಿಲ್ಲದ ಅನೇಕ ಸಂಗತಿಗಳನ್ನು ದಾಖಲಿಸಲು ವಿಶ್ವವಿದ್ಯಾಲಯವು ಸಜ್ಜುಗೊಳ್ಳುತ್ತಿದೆ ಎಂದು ನುಡಿದರು. ವೇದಿಕೆಯಲ್ಲಿ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಉಪಸ್ಥಿತರಿದ್ದರು.
ಶಿಬಿರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಸುರೇಶ, ಶ್ರೀ ಕೇಶವ, ಬಾಗಲಕೊಟ ಜಿಲ್ಲೆಯ ಶ್ರೀ ಮೌನೇಶ ಹೆಚ್. ಬದನೂರು, ಶ್ರೀ ರವಿ ದೇಸಾಯಿ, ಶ್ರೀ ವಸಂತ ಎಲ್. ತಳವಾರ, ಶ್ರೀ ವೆಂಕಪ್ಪ ಕೋಳಿ, ಶ್ರೀ ಹಣಮಂತ ಎಲ್. ತಳವಾರ, ಗದಗ ಜಿಲ್ಲೆಯ ಶ್ರೀ ಬಸಪ್ಪ ಓಲೆಕಾರ ಸೋಮನಕಟ್ಟಿ ಹಾಗೂ ಮೇಘಾಲಯದ ಶ್ರೀ ದೀಸ್ಥಾನ್ ಇವರೊಂದಿಗೆ ಬಾದಾಮಿಯ ವಿಸ್ತರಣಾ ಕೇಂದ್ರದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಮೈಸೂರು ಜಿಲ್ಲೆಯ ಶಿಬಿರದ ನಿರ್ದೇಶಕರಾದ ಶ್ರೀ ಮಹದೇವ ಆರ್. ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯ ಸಂಚಾಲಕರಾದ ಮಂಜುನಾಥ ಅ. ಕಂಚಗಾರ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿತ್ರಕಲಾ ವಿದ್ಯಾಲಯಗಳ ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಡಾ. ಸಿದ್ದಗಂಗಮ್ಮ ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು. ಶ್ರೀಮತಿ ಎಂ.ಬಿ.ಆಶಾ ನಿರೂಪಿಸಿದರು. ದೃಶ್ಯಕಲಾ ವಿಭಾಗದ ಅಧ್ಯಾಪಕರಾದ ಡಾ. ಶಿವಾನಂದ ಬಂಟನೂರ ವಂದಿಸಿದರು. ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

 

ಯು.ಜಿ.ಸಿ ಕೋರ್ಸ್ ವರ್ಕ್ ಹಾಗೂ ಶಂಬಾ ಜೋಶಿ ಜನ್ಮದಿನದ ಅಂಗವಾಗಿ- ಸಂಶೋಧನಾ ಸಮಾವೇಶ

05-01-2017

dsc08148ಯು.ಜಿ.ಸಿ ಕೋರ್ಸ್ ವರ್ಕ್ ಹಾಗೂ ಶಂಬಾ ಜೋಶಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಸಂಶೋಧನಾ ಸಮಾವೇಶದಲ್ಲಿ ಮಾತನಾಡುತ್ತಿರುವ ಮಾನ್ಯ ಕುಲಪತಿಗಳಾದ ಡಾ.ಎಸ್.ಮಲ್ಲಿಕಾಘಂಟಿ ಅವರು.

dsc08099-1ಉಪನ್ಯಾಸ ನೀಡುತ್ತಿರುವ  ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ರಹಮತ್ ತರೀಕೆರೆ  ಅವರು.dsc08117-2ಉಪನ್ಯಾಸ ನೀಡುತ್ತಿರುವ  ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಚಂದ್ರಪೂಜಾರಿ ಅವರುdsc08126ವೇದಿಕೆಯಲ್ಲಿ  ಮಾನ್ಯ ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು, ಶಂಬಾ ಜೋಶಿ ಅಧ್ಯಯನ ಪೀಠದ ಸಂಚಾಲಕರಾದ ಡಾ.ಶೈಲಜಾ ಹಿರೇಮಠ, ಡಾ.ಚಂದ್ರಪೂಜಾರಿ , ಮಾನ್ಯ ಕುಲಪತಿಗಳಾದ ಡಾ.ಎಸ್.ಮಲ್ಲಿಕಾಘಂಟಿ, ಡಾ.ರಹಮತ್ ತರೀಕೆರೆ ಹಾಗೂ ಅಧ್ಯಯನಾಂಗದ ನಿರ್ದೇಶಕರಾದ ಡಾ. ರವೀಂದ್ರನಾಥ ಅವರು.

ಬೆಳ್ಳಿಹಬ್ಬ : ಮಾಧ್ಯಮದವರೊಂದಿಗೆ ಚಿಂತನ ಮಂಥನ – ೩

೨ ಮತ್ತು ೩ನೇ ಜನವರಿ ೨೦೧೭

03-13ವೇದಿಕೆಯಲ್ಲಿ ಶ್ರೀ ದಿನೇಶ್ ಅಮೀನ್ ಮಟ್ಟು, ಶ್ರೀ.ಟಿ.ಎಸ್.ನಾಗಾಭರಣ, ಶ್ರೀಮತಿ ಗೌರಿ ಲಂಕೇಶ್, ಡಾ.ಬಿ.ಕೆ. ರವಿ, ಶ್ರೀ ಎಸ್. ನಾಗಣ್ಣ, ಶ್ರೀ ಸಂಗಮದೇವ ಐ.ಎಚ್., ಶ್ರೀ ರವೀಂದ್ರ ರೇಷ್ಮೆ, ಕುಲಸಚಿವರಾದ ಡಾ. ಪಾಂಡುರಂಗಬಾಬು ಮೊದಲಾದವರು.

02-13ಅಧ್ಯಕ್ಷತೆ ವಹಿಸಿ ಮಾತನಾಡುತ್ತಿರುವ ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು

01-17 ಪ್ರಸ್ತಾವ ಮಂಡಿಸುತ್ತಿರುವ ವಿಶ್ಪ್ರಾವವಿದ್ಧ್ಯಾಯಾಲಯದ  ಪ್ಡಾರಾಧ್ಯಾಪಕರಾದ ಡಾ. ಎಂ. ಚಂದ್ರಪೂಜಾರಿ ಅವರು03-15
೨ನೇ ದಿನದ ಚಿಂತನ ಮಂಥನದ ವೇದಿಕೆಯಲ್ಲಿ ಶ್ರೀ ವಿಠ್ಠಪ್ಪ ಗೋರಂಟ್ಲಿ, ಶ್ರೀ ಮಂಜುನಾಥ ಅದ್ದೆ, ಶ್ರೀ ಪ್ರಕಾಶ ದೇಶಪಾಂಡೆ, ಶ್ರೀ ಮಲ್ಲಿಕಾರ್ಜುನ ಸಿದ್ದಣ್ಣವರ, ಶ್ರೀ ಉದಯಶಂಕರ ಪುರಾಣಿಕ, ಪ್ರೊ. ರವೀಂದ್ರ ರೇಷ್ಮೆ, ಮಾನ್ಯಕುಲಪತಿಯವರು, ಶ್ರೀ ಟಿ.ಎಸ್. ನಾಗಾಭರಣ, ಡಾ. ವಸಂತಕುಮಾರ ಪೆರ್ಲ, ಶ್ರೀ ಕಾರ್ದಿ ಎಸ್. ಅಚ್ಚುತನ್, ಶ್ರೀ ಗೌರೀಶ್ ಅಕ್ಕಿ, ಶ್ರೀ ಸಿದ್ದಪ್ಪ ಕಾಳೂಜಿ, ಶ್ರೀ ಎಂ.ಟಿ. ಶಿವುಕುಮಾರ, ಡಾ.ಗಣೇಶ ಅಮೀನಗಡ, ಡಾ.ಎಚ್.ಜಿ. ಶೋಭಾ ಅವರು.

ಪತ್ರಿಕಾ ವರದಿ- 02.01.2017

ಮುಂದಿನ ಜನಾಂಗಕ್ಕೆ ದುಡಿದು ಗಳಿಸುವ ಪರಿಣತಿಯನ್ನು ದಾಟಿಸುವುದು ಹಾಗೂ ಒಟ್ಟಾಗಿ ಬದುಕಲು ಪೂರಕವಾಗುವ ಸಮಾನತೆಯ ಮೌಲ್ಯವನ್ನು ಕಟ್ಟಿಕೊಡುವುದು ಉನ್ನತ ಶಿಕ್ಷಣದ ಬಹುಮುಖ್ಯ ಉದ್ದೇಶಗಳಾಗಿವೆ ಎಂದು ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎಂ. ಚಂದ್ರಪೂಜಾರಿ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ಮಂಟಪ ಸಭಾಂಗಣದಲ್ಲಿ ೨ ಮತ್ತು ೩ನೇ ಜನವರಿ ೨೦೧೭ರಂದು ಏರ್ಪಡಿಸಿದ್ದ ಬೆಳ್ಳಿಹಬ್ಬ ಮಾಧ್ಯಮದವರೊಂದಿಗೆ ಚಿಂತನ ಮಂಥನ ೩ರ ಚಾಲನಾ ಕಾರ್ಯಕ್ರಮದಲ್ಲಿ ಮಂಡಿಸಿದ ಪ್ರಸ್ತಾವದಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಂಕ್ಷಿಪ್ತ ಚಿತ್ರಣ ಮತ್ತು ಕಾರ್ಯಕ್ರಮದ ಉದ್ದೇಶವನ್ನು ತಿಳಿಸುತ್ತ ಮಾತನಾಡಿದರು.
ಕನ್ನಡ ವಿಶ್ವವಿದ್ಯಾಲಯ ಆರಂಭವಾಗಿ ೨೫ ವರ್ಷಗಳು ತುಂಬುತ್ತಿವೆ. ಈ ಅವಧಿಯಲ್ಲಿ ೧೫೦೦ ಸಂಶೋಧನೆ ಕಾರ್ಯಯೋಜನೆಗಳನ್ನು ಸಂಪೂರ್ಣಗೊಳಿಸಿ ಪುಸ್ತಕ ರೂಪದಲ್ಲಿ ಪ್ರಸಾರಾಂಗದಿಂದ ಪ್ರಕಟಿಸಿ ಜನತೆಗೆ ತಲುಪಿಸಲಾಗಿದೆ ಎಂದರು.
ನಂತರ ಸಂಸ್ಥೆಯ ಲಕ್ಷಣವನ್ನು ವಿವರಿಸುತ್ತ ಸಮಾಜದಲ್ಲಿ ಸಮಾನತೆ ಇಲ್ಲ. ಅರ್ಥವ್ಯವಸ್ಥೆಯಲ್ಲಿ ರಾಜಕೀಯದಲ್ಲಿ ಸಮಾನತೆಯಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯನ್ನು ತರಲು ಸಾಧ್ಯತೆಗಳಿವೆ. ಬೌದ್ಧಿಕ, ಸಾಂಸ್ಥಿಕ ಸ್ವರೂಪದಲ್ಲಿ, ಪಠ್ಯಗಳಲ್ಲಿ ಸಮಾನತೆ ಬೇಕು. ಈ ಸಾಧ್ಯತೆ ಕನ್ನಡ ವಿಶ್ವವಿದ್ಯಾಲಯಕ್ಕೆ ಮಾತ್ರ ಇದೆ. ಇಲ್ಲಿ ಸಂಶೋಧನೆಗೆ ಅತ್ಯಂತ ಮುಕ್ತ ವಾತಾವರಣವಿದೆ ಎಂದು ವಿಶ್ವವಿದ್ಯಾಲಯದ ಸಂಕ್ಷಿಪ್ತ ಚಿತ್ರಣ ನೀಡಿದರು.
ನಂತರ ಮಾಧ್ಯದವರೊಂದಿಗೆ ಚಿಂತನ ಮಂಥನದ ಉದ್ದೇಶ ತಿಳಿಸುತ್ತ ಒಂದು ಸಂಸ್ಥೆಯ ಏಳು ಬೀಳುಗಳನ್ನು ಗುರುತಿಸಲು ಆ ಸಂಸ್ಥೆಯ ಉದ್ದೇಶಗಳೇ ಮಾನದಂಡಗಳು. ಮೇಲ್ಪದರದ ಭಿನ್ನತೆಗಳ ನೆಲೆಯಲ್ಲಿ ಮೌಲ್ಯಮಾಪನ ಮಾಡಿದರೆ ಕನ್ನಡ ವಿಶ್ವವಿದ್ಯಾಲಯದ ಸಾಧನೆಗಳು ಭಿನ್ನವಾಗಿ ಕಾಣುವುದಿಲ್ಲ. ಜ್ಞಾನಕ್ಕೆ ಸಂಬಂಧಪಟ್ಟ ಮೂಲಭೂತ ವಿಷಯದಲ್ಲಿ ಇತರೆ ವಿಶ್ವವಿದ್ಯಾಲಯಗಳಿಗೂ ಕನ್ನಡ ವಿಶ್ವವಿದ್ಯಾಲಯಕ್ಕೂ ಭಿನ್ನತೆ ಇದೆ. ಜ್ಞಾನದ ವ್ಯಾಖ್ಯಾನದಲ್ಲಿ ಇತರೆ ವಿಶ್ವವಿದ್ಯಾಲಯಗಳಿಗೂ ಕನ್ನಡ ವಿಶ್ವವಿದ್ಯಾಲಯಕ್ಕೂ ಭಾರಿ ದೊಡ್ಡ ವ್ಯತ್ಯಾಸವಿದೆ. ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ವಿಜ್ಞಾನದ ಜ್ಞಾನದ ವ್ಯಾಖ್ಯಾನವನ್ನು, ವಿಜ್ಞಾನದ ದೃಷ್ಟಿಕೋನವನ್ನು ಯಥಾರೂಪದಲ್ಲಿ ಅನುಸರಿಸುತ್ತಿವೆ. ಆದರೆ ವಿಜ್ಞಾನ ಪ್ರತಿಪಾದಿಸುವ ವಿಜ್ಞಾನದ ಏಕಸತ್ಯ ದೃಷ್ಟಿಕೋನವನ್ನು ಅದರ ಹಾದಿಯನ್ನು ಕುರಿತು ಕನ್ನಡ ವಿಶ್ವವಿದ್ಯಾಲಯದ ತಕರಾರಿದೆ. ಆದರೆ ಸತ್ಯದ ವಿರುದ್ಧ ಅಲ್ಲ. ಪ್ರತಿ ಸಂಸ್ಕೃತಿಗಳು ತನ್ನ ಸತ್ಯವನ್ನು ಕಟ್ಟಿಕೊಳ್ಳುತ್ತಿವೆ ಎಂದು ನುಡಿದರು.
ಏಕಸತ್ಯದ ಕಲ್ಪನೆ ಮಾಡುವ ಹಾನಿ(ಡ್ಯಾಮೇಜ್) ನಮಗೆ ಅರ್ಥವಾಗಬೇಕು. ಪಶ್ಚಿಮದಲ್ಲಿ ವಿಜ್ಞಾನ ತಂತ್ರಜ್ಞಾನದ ಅಳವಡಿಕೆಯಿಂದ ಸಮಾಜ ಆಧುನೀಕರಣಗೊಂಡಿತು ಎಂದು ವಿಜ್ಞಾನ ಹೇಳಿದ್ದರಿಂದ ನಾವೆಲ್ಲ ಆಧುನೀಕರಣದ ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕಾಯಿತು. ಅದೇ ರೀತಿ ಕೆಲವು ದೇಶಗಳಲ್ಲಿ ಜಾಗತೀಕರಣ ಉದಾರೀಕರಣ, ಖಾಸಗೀಕರಣ ಯಶಸ್ಸಾಯಿತು ಎಂದು, ಪ್ರಪಂಚ ವ್ಯಾಪ್ತಿ ಕೂಡ ಏಕಸತ್ಯದ ಹೆಸರಿನಲ್ಲಿ ಆ ಪ್ರಯೋಗಕ್ಕೆ ಬಲಿಯಾಗಬೇಕಾಯಿತು. ಪ್ರತಿ ಸಂಸ್ಕೃತಿಗೂ ತನ್ನದೇ ಆದ ಕೃಷಿ ಪದ್ಧತಿ, ವ್ಯಾಪಾರ, ಉದ್ದಿಮೆ, ಆರೋಗ್ಯ, ವಾಸ್ತುಶಿಲ್ಪಗಳಿವೆ. ಅದನ್ನು ಉಳಿಸಿ ಒಂದು ಬಹುತ್ವವನ್ನು ಸ್ಥಾಪಿಸುವ ಉದ್ದೇಶ ಕನ್ನಡ ವಿಶ್ವವಿದ್ಯಾಲಯಕ್ಕೆ ಇದೆ. ಇದೇ ಕನ್ನಡ ವಿಶ್ವವಿದ್ಯಾಲಯಕ್ಕೂ ಇತರೆ ವಿಶ್ವವಿದ್ಯಾಲಯಕ್ಕೂ ಇರುವ ಬಹು ದೊಡ್ಡ ಅಂತರ. ದುರದೃಷ್ಟ ಎಂದರೆ ಇಂದು ಬಹುತೇಕ ವಿಶ್ವವಿದ್ಯಾಲಯಗಳು ಆಧುನಿಕ ಕೌಶಲ್ಯ(sಞiಟಟ)ಗಳಿಗೆ ಪ್ರಾಮುಖ್ಯತೆ ಕೊಡುತ್ತಿರುವುದರಿಂದ ಪರಂಪರೆಯಿಂದ ಬಂದ ಕೌಶಲ್ಯಗಳು ಸಂಪೂರ್ಣವಾಗಿ ಮೂಲೆಗುಂಪಾಗುತ್ತಿವೆ. ಆದ್ದರಿಂದ ನಮ್ಮ ಪಠ್ಯಗಳಲ್ಲಿ ಬೌತಿಕ ಸ್ವರೂಪದಲ್ಲಿ ಸಾಂಸ್ಥಿಕ ಸ್ವರೂಪದಲ್ಲಿ ಪ್ರಜಾಪ್ರಭುತ್ವದ ಅಂಶಗಳು ಬೇಕು. ಪಠ್ಯದಲ್ಲಿ ಶೇ.೭೦%ರಷ್ಟು ಜನರ ಬದುಕು ಬೇಕು. ಅವರ ಸಂಸ್ಕೃತಿ ನಮ್ಮ ಪಠ್ಯದಲ್ಲಿ ಬೇಕು. ಆದರೆ ಇದಾಗುತ್ತಿಲ್ಲ. ಆದ್ದರಿಂದ ಸಮಾನತೆ ಇಲ್ಲ. ಈ ಹಿನ್ನೆಲೆಯಲ್ಲಿ ಸಮಾಜದ ಬಹುತೇಕರು ಮಾನ ಸಮ್ಮಾನದಿಂದ ಬದುಕಲು ಕನ್ನಡ ವಿಶ್ವವಿದ್ಯಾಲಯ ಬಯಸುತ್ತದೆ ಎಂದು ತಿಳಿಸುತ್ತ, ಸಮಾಜದ ಕೆಳಸ್ಥರಕ್ಕೆ ಸೇರಿದ ದಲಿತರು, ಬುಡಕಟ್ಟು ಜನರು ಅಲ್ಪಸಂಖ್ಯಾತರು, ಮಹಿಳೆಯರು ಈ ಸಮುದಾಯಗಳ ಮೇಲೆ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನ ಸಂಶೋಧನೆ ಕೇಂದ್ರೀಕೃತವಾಗಿದೆ. ಇದಕ್ಕಾಗಿ ಬಹಳ ದೊಡ್ಡ ಮಾನವ ಸಂಪನ್ಮೂಲ ಬೇಕು ಮತ್ತು ಹಣಕಾಸು ಬೇಕು. ಇದನ್ನು ಕೊಡಬೇಕಾದವರಿಗೆ ನಮ್ಮ ದೃಷ್ಟಿಕೋನದ ಸ್ಪಷ್ಟತೆ ಇಲ್ಲ ಎಂದು ಪ್ರೊ. ಚಂದ್ರಪೂಜಾರಿ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯ ಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ವಿಶ್ವವಿದ್ಯಾಲಯದ ಪರಿನಿಯಮದಂತೆ ಕನ್ನಡ ವಿಶ್ವವಿದ್ಯಾಲಯವು ವಿದ್ಯೆಯನ್ನು ಸೃಷ್ಟಿಸುವ ವಿಶ್ವವಿದ್ಯಾಲಯವಾಗಿದೆ. ಆದರೆ ಪದವಿ ನೀಡುವ ವಿಶ್ವವಿದ್ಯಾಲಯ ಅಲ್ಲ. ಇದೇರೀತಿ ಕಾರ್ಯನಿರ್ವಹಿಸುತ್ತ ಬರುತ್ತಿದೆ. ಪದವಿಗಳಿಗೆ ಬೇಕಾದಂತಹ ವಿದ್ಯೆಯನ್ನು ಸಂಶೋಧಿಸುವ, ಸಂಗ್ರಹಿಸುವ ಪರಿಷ್ಕರಿಸುವ, ದಾಖಲಿಸುವ ಕೆಲಸವನ್ನು ಪ್ರಮುಖವಾಗಿರಿಸಿಕೊಂಡು ಹುಟ್ಟಿದ ಕನ್ನಡ ವಿಶ್ವವಿದ್ಯಲಯಕ್ಕೆ ಕಾಲಕ್ಕೆ ಅನುಗುಣವಾಗಿ ಕೆಲವು ತಾಂತ್ರಿಕವಾದ ಬದಲಾವಣೆಗಳು ಅನಿವಾರ್ಯವಾಗಿ ಯುಜಿಸಿ ನಿಯಮಗಳಿಗೆ ಒಳಪಡಬೇಕಾಯಿತು. ಅವತ್ತಿನ ಕಾಲಕ್ಕೆ ಅನುಗುಣವಾಗಿ ಮಾನವ ಸಂಪನ್ಮೂಲ ಮತ್ತು ಕರ್ನಾಟಕದಲ್ಲಿ ಇರುವಂತಹ ವಿದ್ವತ್ ಪ್ರಪಂಚ ಕನ್ನಡ ವಿಶ್ವವಿದ್ಯಾಲಯವನ್ನು ಅಪ್ಪಿಕೊಂಡಿದ್ದರಿಂದ ಪ್ರಾರಂಭದಲ್ಲಿ ಸಂಶೋಧನೆ ಮತ್ತು ಸಾಹಿತ್ಯಕವಾದಂತಹ ಕೆಲಸಗಳನ್ನು ಬಹಳ ಗಂಭೀರವಾಗಿ ಅರ್ಥಪೂರ್ಣವಾಗಿ ಮಾಡಿದೆ. ನಂತರ ಕನ್ನಡ ವಿಶ್ವವಿದ್ಯಾಲಯದ ನಡಿಗೆಯ ಓಘ ಕಡಿಮೆಯಾಗಲು ಹಲವು ಕಾರಣಗಳಿವೆ. ೭೨ ಅಧ್ಯಾಪಕರ ಸಂಖ್ಯೆ(ನಿವೃತ್ತಿಗಳಿಂದ) ಕಡಿಮೆಯಾಗಿದೆ. ಕನ್ನಡ ನಾಡು ಮತ್ತು ಮಾಧ್ಯಮ ಬಯಸಿದಂತೆ ಕಾರ್ಯನಿರ್ವಹಿಸಲು ಒಳಸಂಕಟಗಳಿವೆ. ಈ ಒಳಸಂಕಟಗಳನ್ನು ಜಗತ್ತಿಗೆ ಬಿಂಬಿಸುವಂತಹ ಬಹಳ ದೊಡ್ಡ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ತಿಳಿಸಿದರು.
ಸರ್ಕಾರ ಕೊಡಮಾಡಿರುವ ಅನೇಕ ವಿದ್ವಾಂಸರ ಹೆಸರಿನ ಪೀಠಗಳು ಆರ್ಥಿಕವಾಗಿ ಸೊರಗುತ್ತಾ ಹೆಸರಿಗೆ ಮಾತ್ರ ಅಸ್ತಿತ್ವ ಉಳಿಸಿಕೊಂಡಿವೆ. ವಿಸ್ತರಣ ಕೇಂದ್ರಗಳು ಆರ್ಥಿಕ ಮುಗ್ಗಟ್ಟಿನಿಂದ ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ದೇವದುರ್ಗದಲ್ಲಿರುವ ಬುದ್ಧ ಅಧ್ಯಯನ ಕೇಂದ್ರಕ್ಕೆ ಜಿಲ್ಲಾಡಳಿತ ೫೦ ಎಕರೆ ಜಮೀನು ನೀಡಿದೆ. ಕುರುಬನಕಟ್ಟೆಯಲ್ಲಿ ಒಂದು ಮಠದಲ್ಲಿ ನಮ್ಮ ವಿಸ್ತರಣಾ ಕೇಂದ್ರ ಕಾರ್ಯನಿರ್ವಹಿಸುತ್ತಿರುವುದು ನಾಡು ತಲೆತಗ್ಗಿಸುವ ಕೆಲಸವಾದರೂ ಅನಿವಾರ್ಯವಾಗಿದೆ. ಡಾ. ರಾಜಕುಮಾರ ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರ ಮತ್ತು ವಿಸ್ತರಣಾ ಕೇಂದ್ರವನ್ನು ಪ್ರಾರಂಭಿಸಲು ಸರ್ಕಾರ ಬೆಂಗಳೂರಿನಲ್ಲಿ ೨ ಎಕರೆ ಜಮೀನನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಮಂಜೂರು ಮಾಡಿದೆ. ತಳಸಮುದಾಯಗಳ ಸಾಂಸ್ಕೃತಿಕ ಅಧ್ಯಯನಕ್ಕಾಗಿ ಮತ್ತು ತಳಸಮುದಾಯದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲು ಯೋಜನೆಗಳನ್ನು ರೂಪಿಸಿಕೊಳ್ಳಲು ಸರ್ಕಾರ ಮತ್ತಷ್ಟು ಜಾಗವನ್ನು ನೀಡಿದೆ. ಈ ಎಲ್ಲ ಭೌತಿಕವಾದ ಹಿನ್ನೆಲೆಯಲ್ಲಿ ಭೌದ್ಧಿಕ ಕಾರ್ಯ ನಿರ್ವಹಿಸಲು ಹಣಕಾಸಿನ ಮುಗ್ಗಟ್ಟಿದೆ. ಈ ಕುರಿತು ಮಾಧ್ಯಮಗಳು ನಾಡಿಗೆ ಜಗತ್ತಿಗೆ ತಿಳಿಸಬೇಕೆಂದು ಈ ಚಿಂತನ ಮಂಥನ ಏರ್ಪಡಿಸಲಾಗಿದೆ ಎಂದು ನುಡಿದರು.
ಕಳೆದ ೨೫ ವರ್ಷಗಳಲ್ಲಿ ವಿವಿಧ ಸರ್ಕಾರಗಳು ಸೇರಿದಂತೆ ಕನ್ನಡ ವಿಶ್ವವಿದ್ಯಾಲಯಕ್ಕೆ ಒಟ್ಟು ೫೮ ಕೋಟಿ ಅನುದಾನವನ್ನು ಅಭಿವೃದ್ಧಿಗಾಗಿ ನೀಡಿವೆ ಎಂದು ವಿಷಾದಿಸಿದರು. ಈ ಸಣ್ಣ ಅನುದಾನದಲ್ಲಿ ಜಗತ್ತೇ ನೋಡಬಹುದಾದ ಭೌತಿಕ ಮತ್ತು ಬೌದ್ಧಿಕ ಕೆಲಸಗಳನ್ನು ಮಾಡಲಾಗಿದೆ. ಸಾಂಸ್ಕೃತಿಕ ಕುರುಹುಗಳನ್ನು ಮುಂದಿನ ಜನಾಂಗಕ್ಕೆ ಉಳಿಸುವ ರವಾನಿಸುವ, ದಾಖಲಿಸುವ ಕೆಲಸವನ್ನೂ ಮಾಡಲಾಗಿದೆ. ಈಗ ನಮಗೆ ಕೇವಲ ೨ ಕೋಟಿ ಮಾತ್ರ ಅಭಿವೃದ್ಧಿ ಅನುದಾನ ಮಂಜೂರು ಆಗಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಿಂದ ತಳಸ್ಥರದಿಂದ ಬರುವ ವಿದ್ಯಾರ್ಥಿಗಳಿಗೆ ಕನ್ನಡ ವಿಶ್ವವಿದ್ಯಾಲಯವೇ ಪ್ರತಿ ತಿಂಗಳು ೧೦ ಸಾವಿರ ರೂಪಾಯಿಗಳಂತೆ ಅಧ್ಯಯನಕ್ಕೆ ನೆರವು ನೀಡಿ ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಜಗತ್ತೇ ಗಮನಿಸುವಂತೆ ಬುಡಕಟ್ಟುಗಳಿಗೆ ಸಂಬಂಧಿಸಿದಂತೆ ಕನ್ನಡ ವಿಶ್ವವಿದ್ಯಾಲಯ ಕೆಲಸ ಮಾಡಿದೆ. ನಮ್ಮ ಸಂಶೋಧನೆಯ ಫಲಿತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದರೂ ಅಧಿಕಾರಿಗಳು ಪರಿಗಣಿಸುವುದಿಲ್ಲ. ಇಲ್ಲಿ ಕನ್ನಡ ಭಾಷೆಯನ್ನು ಕಲಿಸುತ್ತಿಲ್ಲ. ಭಾಷೆಯ ಮೂಲಕ ಕರ್ನಾಟಕವನ್ನು ಜಗತ್ತನ್ನು ಪರಿಚಯಿಸುವ ಕೆಲಸ ಮಾಡಲಗುತ್ತಿದೆ. ಇದು ಅಧಿಕಾರಶಾಹಿಗೆ ತಿಳಿಯುತ್ತಿಲ್ಲ ಎಂದರು.
ಸಾಂಸ್ಕೃತಿಕ ರಾಜಕಾರಣಕ್ಕೆ ಸಂಬಂಧಪಟ್ಟ ಹಾಗೆ ವಿಶ್ವವಿದ್ಯಾಲಯ ಇಟ್ಟುಕೊಂಡಿರುವ ನಂಬಿಕೆ, ಭರವಸೆಗಳನ್ನು ಇಂದಿನ ರಾಜಕಾರಣಿಗಳಿಗೆ ಮುಟ್ಟಿಸುವ ಜವಾಬ್ದಾರಿಯ ಹಿನ್ನೆಲೆಯಲ್ಲಿ ಜನವರಿ ೬, ೭ರಂದು ರಾಜಕಾರಣಿಗಳೊಂದಿಗೆ ೪ನೇ ಚಿಂತನ ಮಂಥನ ಏರ್ಪಡಿಸಿದೆ ಎಂದು ತಿಳಿಸಿದರು. ಇವರೆಲ್ಲರೂ ಮತ್ತು ಮಾಧ್ಯಮದವರನ್ನು ಒಳಗೊಂಡಂತೆ ಒಂದು ನಿಯೋಗ ಕರೆದುಕೊಂಡು ಸರ್ಕಾರಕ್ಕೆ ಹೋಗಲಾಗುವುದು. ಈ ನಿಯೋಗದ ಮೂಲಕ ಕನ್ನಡ ವಿಶ್ವವಿದ್ಯಾಲಯ ಪಾರಂಪರಿಕ ವಿಶ್ವವಿದ್ಯಾಲಯ ಅಲ್ಲ ಎಂದು ಮನವರಿಕೆ ಮಾಡಿಕೊಡುವ ಉದ್ದೇಶವಿದೆ ಎಂದು ಸ್ಪಷ್ಟಪಡಿಸಿದರು.
ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ. ವೀರೇಶ ಬಡಿಗೇರ ನಿರೂಪಿಸಿ, ವಂದಿಸಿದರು. ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವೇದಿಕೆಯಲ್ಲಿ ಶ್ರೀ ದಿನೇಶ್ ಅಮೀನ್ ಮಟ್ಟು, ಶ್ರೀ.ಟಿ.ಎಸ್.ನಾಗಾಭರಣ, ಶ್ರೀಮತಿ ಗೌರಿ ಲಂಕೇಶ್, ಡಾ.ಬಿ.ಕೆ. ರವಿ, ಶ್ರೀ ಎಸ್. ನಾಗಣ್ಣ, ಶ್ರೀ ಸಂಗಮದೇವ ಐ.ಎಚ್. ಮೊದಲಾದವರು ಉಪಸ್ಥಿತರಿದ್ದರು. ನಂತರ ೨ ಸಭಾಂಗಣದಲ್ಲಿ ಕನ್ನಡ ವಿಶ್ವವಿದ್ಯಾಲಯದ ಇದುವರೆಗಿನ ನಡೆ ಮತ್ತು ಮುಂದಿನ ನಡೆ ಕುರಿತು ಪರಾಮರ್ಶೆ, ಚರ್ಚೆಗಳು ನಡೆದವು. ಸಂಜೆ ಶ್ರೀ ಬಸವಲಿಂಗಯ್ಯ ಹಿರೇಮಠ ಮತ್ತು ವಿಶ್ವೇಶ್ವರಿ ಹಿರೇಮಠ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

 

 

ಪ್ರೊ. ಹನುಮಣ್ಣನಾಯಕ ದೊರೆ ಅವರ ನಿವೃತ್ತಿ – ಬೀಳ್ಕೊಡುಗೆ ಸಮಾರಂಭ

ಪ್ರೊ. ಹನುಮಣ್ಣನಾಯಕ ದೊರೆ
ಅವರ ನಿವೃತ್ತಿ – ಬೀಳ್ಕೊಡುಗೆ ಸಮಾರಂಭ03-1201-14

ವಿಶ್ವವಿದ್ಯಾಲಯದ ಆಸ್ತಿ ಎಂದರೆ ಪ್ರಾಧ್ಯಾಪಕರು. ಪ್ರಾಧ್ಯಾಪಕರು ನಿವೃತ್ತಿಯಾದರೆ ವಿಶ್ವವಿದ್ಯಾಲಯ ಬಡತನ ಅನುಭವಿಸಬೇಕಾಗುತ್ತದೆ. ಅಂದರೆ ಅವರ ವಿದ್ವತ್ತಿನಿಂದಾಗಿ ಸದಾ ವಿಶ್ವವಿದ್ಯಾಯದಲ್ಲಿರುತ್ತಾರೆ. ಮಾಸ್ತರಿಕೆ ಮಾಡುವುದು ಸುಲಭ. ತಾಯ್ತನ(ಭಾವನೆಯಿಂದ)ದಿಂದ ವಿದ್ಯಾರ್ಥಿ ಸಮುದಾಯವನ್ನು ಗೆಲ್ಲುವುದು ಬಹಳ ಪ್ರಯಾಸದ ಕೆಲಸ. ಕನ್ನಡ ವಿಶ್ವವಿದ್ಯಾಲಯ ಬೋಧಕರಿಗೆ ಮುಕ್ತ ವಾತಾವರಣ ಕಲ್ಪಿಸಿದೆ. ಕೆಲಸವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಶಿಕ್ಷಣ ದೊಡ್ಡ ಸಂಪತ್ತು, ವಿದ್ಯಾರ್ಥಿಗಳಿಗೆ ಶ್ರದ್ಧೆ ಮತ್ತು ಪರಿಶ್ರಮ ದೊಡ್ಡ ಆಸ್ತಿ ಎಂದು ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ನೆರೆದಿದ್ದ ಬೋಧಕರು, ಅಪಾರ ವಿದ್ಯಾರ್ಥಿವೃಂದ ಮತ್ತು ಬೋಧಕೇತರರನ್ನು ಉದ್ದೇಶಿಸಿ ನುಡಿದರು.
ದಿನಾಂಕ ೩೧.೧೨.೨೦೧೬ರಂದು ಸೇವೆಯಿಂದ ನಿವೃತ್ತರಾದ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಹನುಮಣ್ಣನಾಯಕ ದೊರೆ ಅವರಿಗೆ ಪಂಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಲಿತಕಲಾ ನಿಕಾಯದ ಡೀನರಾದ ಡಾ. ಅಶೋಕಕುಮಾರ ರಂಜೇರೆ ಅವರು ಸಂಗೀತದ ಗಾರುಡಿಗರಾದ ದೊರೆ ಅವರು ೨ ದಶಕ ಸೇವೆ ಸಲ್ಲಿಸಿದ್ದಾರೆ. ವಿಶ್ವವಿದ್ಯಾಲಯದ ಬೆಳವಣಿಗೆಯಲ್ಲಿ ಸರ್ವತೋಮುಖವಾಗಿ ಶ್ರಮಿಸಿದ್ದಾರೆ. ಅನೇಕ ವಚನಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕದ ಆಚೆಗೂ ತಮ್ಮನ್ನು ವಿಸ್ತರಿಸಿಕೊಂಡಿದ್ದಾರೆ ಎಂದು ಹೆಮ್ಮೆಯಿಂದ ತಿಳಿಸಿದರು.
ನಂತರ ಸಂಗೀತ ವಿಭಾಗದ ಅಧ್ಯಾಪಕ ಶ್ರೀ ತೇಜಸ್ವಿ ಹೆಗಡೆ, ಸಂಶೋಧನ ವಿದ್ಯಾರ್ಥಿನಿ ಶ್ರೀಮತಿ ಮಮತ, ಪದ್ಮವತಿ, ದುಷ್ಯಂತ, ವೀರೇಶಿ ಮೊದಲಾದವರು ಅನಿಸಿಕೆ ಹಂಚಿಕೊಂಡರು.
ಗೌರವ ಸನ್ಮಾನಗಳನ್ನು ಸ್ವೀಕರಿಸಿದ ದೊರೆ ಅವರು ವಿಶ್ವವಿದ್ಯಾಲಯದಲ್ಲಿ ತಮ್ಮ ಶೈಕ್ಷಣಿಕ ಪಯಣದ ಕುರಿತು ಮಾತನಾಡುತ್ತ, ಗುರುಗಳಾದ ಪಂಡಿತ ಬಸವರಾಜ ರಾಜಗುರುಗಳನ್ನು ನೆನೆಯುತ್ತ, ವಿಶ್ವವಿದ್ಯಾಯದಿಂದ ನಾನು ಬಹಳಷ್ಟು ಪಡೆದಿದ್ದೇನೆ. ಇದು ನನ್ನ ವಿದ್ವತ್ತಿನ ವಿಸ್ತಾರಕ್ಕೆ ಕಾರಣವಾಗಿದೆ. ಸಂತೋಷದಿಂದ ನಿರ್ಗಮಿಸುತ್ತಿದ್ದೇನೆ ಎನ್ನುತ್ತ ಪತ್ನಿ ಡಾ. ಕಲಾವತಿಯೊಂದಿಗೆ ಆದದ್ದೆಲ್ಲ ಒಳಿತೇ ಆಯಿತು ಎಂದು ಹಾಡಿದರು.
ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಕನ್ನಡ ವಿಶ್ವವಿದ್ಯಾಲಯದ ಹಾಡಿನ ಮೋಡಿಗಾರನಾದ ಡಾ. ಹನುಮಣ್ಣನಾಯಕ ದೊರೆ ಅವರು ಸಂಗೀತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಡೀನರಾಗಿ, ಸಂಗೀತ ವಿಭಾಗ ಕಟ್ಟಲು ಶ್ರಮಿಸಿದ್ದಾರೆ ಎಂದು ಸ್ವಾಗತಿಸಿದರು. ಉಪಕುಲಸಚಿವರಾದ ಡಾ.ಎ. ವೆಂಕಟೇಶ ಅವರು ನಿರೂಪಿಸಿದರು. ಸಹಾಯಕ ಕುಲಸಚಿವ ಶ್ರೀ ಗುರುಬಸಪ್ಪ ವಂದಿಸಿದರು. ಶೃತಿ ಪ್ರಾರ್ಥಿಸಿದರು.