ಶಿಲ್ಪಕಲೆಗೆ ಬೌದ್ಧಿಕ ಕೌಶಲ್ಯದೊಂದಿಗೆ ದೈಹಿಕ ಕೌಶಲ್ಯವೂಬೇಕು ಎಂದು ನಾಡೋಜ ವಿ.ಟಿ. ಕಾಳೆ ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯ ಚಿತ್ರಕಲಾ ವಿದ್ಯಾಲಯಗಳ ನಿರ್ವಹಣಾ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ ದಿನಾಂಕ ೨೮.೧.೨೦೧೭ರಂದು ಏರ್ಪಡಿಸಿದ್ದ ರಾಜ್ಯಮಟ್ಟದ ಜನಪರ ಶಿಲಾ ಶಿಲ್ಪಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಭಿರಾರ್ಥಿಗಳು ರಚಿಸಿದ ಶಿಲ್ಪಕೃತಿಗಳನ್ನು ಲೋಕಾರ್ಪಣೆ ಮಾಡಿ ಮಂಟಪ ಸಭಾಂಗಣದಲ್ಲಿ ಅವರು ಮಾತನಾಡಿದರು.
ಶಿಲ್ಪಕಲೆಯು ಸಾವಿರಾರು ವರ್ಷಗಳ ಚರಿತ್ರೆ ಹೊಂದಿದೆ. ನಾಗರಶೈಲಿ, ವೇಸರ ಶೈಲಿ, ದ್ರಾವಿಡ ಶೈಲಿಗಳ ವಾಸ್ತುಶಿಲ್ಪಕಲೆಯನ್ನು ಐಹೊಳೆ ಪಟ್ಟದಕಲ್ಲಿನಲ್ಲಿ ನೋಡಬಹುದು. ಆಗಿನ ಕಾಲದಲ್ಲಿ ಐಹೊಳೆಯು ಸಾಂಸ್ಕೃತಿಕ ವಿಶ್ವವಿದ್ಯಾಲಯವಾಗಿತ್ತು. ಶಿಲ್ಪಕಲೆಗೆ ಸಂಬಂಧಿಸಿದಂತೆ ಅನೇಕ ಪ್ರಯೋಗಗಳು ಅಲ್ಲಿ ನಡೆದಿರುವುದಕ್ಕೆ ಇಂದಿಗು ಸಾಕ್ಷಿಯಿದೆ. ಇದೆಲ್ಲ ರೋಮಾಂಚಕ ಕಲೆಯಾಗಿದೆ ಎಂದು ಚಾಲುಕ್ಯ ಶಿಲ್ಪ, ಹೊಯ್ಸಳ ಶಿಲ್ಪಗಳನ್ನು ಉದಾಹರಿಸಿದರು. ಶ್ರಮ, ಪ್ರಯತ್ನ ಮತ್ತು ದೈವಕೃಪೆಯಿಂದ ಉತ್ತಮ ಶಿಲ್ಪಕಲಾವಿದರಾಗಿ ಎಂದು ಹಾರೈಸಿದರು.
ಉಪಸ್ಥಿತರಿದ್ದ ಕನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಅವರು ಕಲಾವಿದರ ಬದುಕು ಉಂಡದ್ದು ಹೊಟ್ಯಾಗ ಉಳಿದದ್ದು ಬುಟ್ಯಾಗ ಎಂಬಂತೆ ಇತ್ತು. ಕಲಾವಿದರು ನಿರಹಂಕಾರಿಗಳಾಗಿರಬೇಕು ಎಂದರು.
ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಗಿರಿಜನ ಉಪಯೋಜನೆಯಡಿಯಲ್ಲಿ ನಡೆದ ಶಿಬಿರದಲ್ಲಿ ಕಲೆಯಿಂದ ವಂಚಿತರಾದ ವಿದ್ಯಾರ್ಥಿಗಳು ಇದರ ಉಪಯೋಗ ಪಡೆದಿದ್ದಾರೆ ಎಂದು ಸಂತಸಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿ ಅವರು ಶಿಬಿರಾರ್ಥಿ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡುತ್ತ, ಶಿಲ್ಪಕಲೆಯನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಆಕರ ಸಾಮಗ್ರಿ ಒದಗಿಸಬೇಕೆನ್ನುವ ಉದ್ದೇಶದಿಂದ ಶಿಬಿರ ನಡೆಸಲಾಗಿದೆ. ಲಲಿತಕಲೆಗಳಲ್ಲಿ ಶಿಲ್ಪಕಲೆಯೂ ಒಂದು. ಬೌದ್ಧಿಕ ಸಾಮರ್ಥ್ಯ ಬೇಕೆಂದರೆ ಶಿಲ್ಪ ಕಲಾವಿದರು ಓದಬೇಕು. ಯಾರಿಗೆ ಸಾಮರ್ಥ್ಯ ಇದೆಯೋ ಅವರೆಲ್ಲ ಕೌಶಲ್ಯ ಪಡೆಯಬಹುದು. ಆಧುನಿಕ ಕಾಲಕ್ಕೆ ಅನುಗುಣವಾಗಿ ನಮ್ಮ ಯೋಚನೆಯನ್ನು ಬದಲಾಯಿಸಿಕೊಳ್ಳಬೇಕು. ಶಿಲ್ಪಕಲೆ ಕಲೆಯೂ ಹೌದು, ಶಾಸ್ತ್ರವೂ ಹೌದು. ಧಾರ್ಮಿಕತೆಯ ಪ್ರವೇಶದಿಂದ ಅದು ದೈವಿಕ ಸ್ವರೂಪ ಪಡೆಯುತ್ತದೆ. ಶಾಸ್ತ್ರದ ಹಿಂದೆ ಹೊರಟಾಗ ಗಣೇಶನ ವಿಗ್ರಹ ಒಂದೇ ಭಂಗಿಯ ವಿಗ್ರಹವಾಗುತ್ತದೆ. ವೈಚಾರಿಕವಾಗಿ ನೋಡಿದಾಗ ಒಂದೇ ಗಣೇಶನ ಅನೇಕ ಭಂಗಿಗಳನ್ನು ರಚಿಸಬಹುದು ಎಂದು ಶಿಬಿರಾರ್ಥಿಗಳನ್ನು ಕುರಿತು ಹೇಳಿದರು.
ಶಿಲ್ಪಕಲಾ ಅಕಾಡೆಮಿಯ ಕುಲಸಚಿವರಾದ ಇಂದ್ರಮ್ಮ ಹೆಚ್.ವಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಿತ್ರಕಲಾ ವಿದ್ಯಾಲಯಗಳ ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಡಾ. ಸಿದ್ದಗಂಗಮ್ಮ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ಸಹಾಯಕ ಕುಲಸಚಿವರಾದ ಶ್ರೀ ಹೆಚ್. ಶ್ರೀನಿವಾಸ ವಂದಿಸಿದರು. ಶ್ರೀಮತಿ ಆಶಾ ನಿರೂಪಿಸಿದರು. ಸಂಗೀತ ವಿದ್ಯಾರ್ಥಿನಿ ಶ್ರೀಮತಿ ಮಮತ ಮನ್ವಾಚಾರ್ ಪ್ರಾರ್ಥಿಸಿದರು. ದಿನಾಂಕ ೧೭ ರಿಂದ ೨೮ ಜನವರಿ ೨೦೧೭ರ ವರೆಗೆ ನಡೆದ ೧೨ ದಿನಗಳ ಶಿಲಾ ಶಿಲ್ಪಕಲಾ ಶಿಬಿರದಲ್ಲಿ ಸುರೇಶ -ಅರ್ಧನಾರೀಶ್ವರ, ವಸಂತ ಎಲ್. ತಳವಾರ-ಉಗ್ರ ನರಸಿಂಹ, ಕೇಶವ್-ಗರುಡ, ಮನುಚಕ್ರವರ್ತಿ-ಆಧುನಿಕ ಶಿಲ್ಪ, ಮೌನೇಶ ಎಚ್.ಬದನೂರು-ಆಂಜನೇಯ, ಉಮೇಶ ದಂಡಿನ-ಆನೇಸಾಲು, ರವಿದೇಸಾಯಿ-ಸಾಸಿವೆ ಗಣೇಶ, ಹನುಮಂತ ಎಲ್. ತಳವಾರ-ದ್ವಾರಪಾಲಕ, ಅನಿಲನಾಯಕ-ಹರಿಹರ, ಲೀಲಾವತಿ ಎಂ.ಎಸ್.-ಸರಸ್ವತಿ, ತೋಟಯ್ಯ-ಮರದಲ್ಲಿ ಹಕ್ಕಿಗೂಡು ಹಾಗೂ ಅಕಾಡೆಮಿಗಾಗಿ ಕವಡೆಕಲ್ಲು ಶಿಲ್ಪಕೃತಿಗಳನ್ನು ರಚಿಸಿದ್ದಾರೆ. ಶ್ರೀ ಮಹದೇವ ಆರ್. ಶಿಬಿರದ ನಿರ್ದೇಶಕರಾಗಿದ್ದರು. ಮಂಜುನಾಥ ಕಂಚುಗಾರ ಶಿಬಿರದ ಸಂಚಾಲಕರಾಗಿದ್ದರು
.