ಸಮುದಾಯಗಳನ್ನು ಉದಾತ್ತೀಕರಿಸಲು ಸಕಾರಾತ್ಮಕವಾಗಿ ಚಿಂತಿಸಬೇಕು ಎಂದು ಬೀಳಗಿಯ ಹಿರಿಯ ಜಾನಪದ ವಿದ್ವಾಂಸರಾದ ಡಾ. ಶ್ರೀರಾಮ ಇಟ್ಟಣ್ಣವರ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯ ಹಾಲುಮತ ಅಧ್ಯಯನ ಪೀಠವು ಮಂಟಪ ಸಭಾಂಗಣದಲ್ಲಿ ೩೧ನೇ ಜನವರಿ ೨೦೧೮ರಂದು ಏರ್ಪಡಿಸಿದ್ದ ದಶಮಾನೋತ್ಸವ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡುತ್ತಿದ್ದರು.
ಎಲ್ಲ ಸಮುದಾಯಗಳ ಬಗ್ಗೆ ಎಲ್ಲರೂ ಯೋಚಿಸದಿದ್ದರೆ ಸಂಕುಚಿತರಾಗುತ್ತೇವೆ. ಹಲವು ಧರ್ಮ, ಜಾತಿಗಳಿದ್ದರೂ ಬಹುತ್ವದ ಬಗ್ಗೆ ಯೋಚಿಸುತ್ತ ಏಕರಸವಾಗಿ ಒಗ್ಗೂಡಬೇಕು. ರಾಜಕೀಯ ಸಂಕಲ್ಪವಿಲ್ಲದೆ ಏನನ್ನೂ ಸಾಧಿಸಲು ಆಗುವುದಿಲ್ಲ. ರಾಜಕೀಯ ಶಕ್ತಿಯು ತಳಸಮುದಾಯಗಳ ಕುರಿತು ಯೋಚಿಸಬೇಕು ಎಂದು ಹೇಳಿದರು.
ದಶಮಾನೋತ್ಸವ ಸಮಾರಂಭದಲ್ಲಿ ಹಾಲುಮತ ಕುಲವೃತ್ತಿಗಳ ಕುರಿತು ಪುಸ್ತಕಗಳು ಬಿಡುಗಡೆಯಾದಷ್ಟು ಬೇರೆ ಕಡೆ ಪ್ರಕಟವಾಗಿಲ್ಲ. ಸಂಸ್ಕೃತಿಗಳ ಬಗ್ಗೆ ತೌಲನಿಕವಾಗಿ ಅಧ್ಯಯನ ನಡೆಸಬೇಕು. ಕುರಿಗಾರರ ಅನುಭವಗಳು ಬಹಳ ಮುಖ್ಯವಾಗುತ್ತದೆ. ಕುಲವೃತ್ತಿಯೊಂದಿಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕುರಿಗಾರರಿಗೆ ಪರಂಪರಾಗತವಾಗಿ ಬಂದ ಕುರಿಗಾರಿಕೆಯ ವೈದ್ಯಜ್ಞಾನ ದಾಖಲಾಗಬೇಕು. ಇಂದು ಆಧುನಿಕ ಮನಸ್ಸುಗಳು ಕುರಿ ಉದ್ಯಮದ ಕುರಿತು ಆಸಕ್ತವಾಗಿಲ್ಲ. ಸ್ವಾವಲಂಬನೆ ಮತ್ತು ಗಳಿಕೆಗೆ ಅವಕಾಶಗಳಿರುವ ಕುರಿ ಉದ್ಯಮದಲ್ಲಿ ಪಾಲ್ಗೊಳ್ಳುವಂತೆ ಯುವಕರ ಮನಸ್ಸನ್ನು ಸೆಳೆಯಲು ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದು ಇಟ್ಟಣ್ಣವರ ತಿಳಿಸಿದರು.
ಲಲಿತಕಲೆಗಳ ನಿಕಾಯದ ಡೀನರಾದ ಡಾ. ಅಶೋಕಕುಮಾರ ರಂಜೇರೆ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಇಂದು ಕುಲವೃತ್ತಿಗಳು ಅಪಮಾನದ ಕೀಳರಿಮೆಯ ಸಂಕೇತಗಳಾಗಿವೆ. ಆದ್ದರಿಂದ ಕುಲವೃತ್ತಿಗಳು ಹಿಂದಕ್ಕೆ ಸರಿದಿವೆ. ವೃತ್ತಿಗಳಲ್ಲಿ ಪರಂಪರೆಯಿಂದ ಬಂದ ಜ್ಞಾನ ಇದೆ. ದೇಸಿ ಜ್ಞಾನವನ್ನು ಶಿಕ್ಷಣದ ಒಂದು ಭಾಗವಾಗಿ ನಾವು ಪರಿಗಣಿಸಿಲ್ಲ. ಬಹುಶಃ ಈ ಕಾರಣದಿಂದ ಕುಲವೃತ್ತಿಗಳಿಂದ ಆಧುನಿಕರು ವಿಮುಖರಾಗಿದ್ದಾರೆ. ಜಾಗತೀಕರಣ ಸಂದರ್ಭದಲ್ಲಿ ತಮ್ಮದೇ ಆದ ಮಾನದಂಡಗಳನ್ನಿಟ್ಟು ಕುಲವೃತ್ತಿಗಳನ್ನು ಹಿಂದಕ್ಕೆ ತಳ್ಳಲಾಗುತ್ತದೆ. ಕುಲವೃತ್ತಿಗಳಿಗೆ ಅಕಾಡೆಮಿಕ್ ಮತ್ತು ಪ್ರಾಯೋಗಿಕ ಹಂತಗಳಲ್ಲಿ ಸ್ಥಾನ ಮಾನ ದೊರೆಯಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಭಾರತದಲ್ಲಿ ಬಹಳಷ್ಟು ಜನರಿಗೆ ಉದ್ಯೋಗಗಳಿಲ್ಲ. ಹಾಗೆಯೇ ಕೆಲವು ವೃತ್ತಿಗಳಿಗೆ ಅವಕಾಶಗಳಿಲ್ಲ. ವಿಜ್ಞಾನ ವೇಗದಲ್ಲಿದೆ. ನಮ್ಮನ್ನು ತಂತ್ರಜ್ಞಾನಕ್ಕೆ ತೊಡಗಿಸಿಕೊಳ್ಳಬೇಕಾಗಿದೆ. ದುಡಿಮೆ ಶ್ರಮ ಉತ್ಪಾದನೆ ಹಂಚಿಕೆಗಳಿಗೆ ಬದಲಾಗಿ ಹೂಡಿಕೆ ಬಂಡವಾಳ ವಾಣಿಜ್ಯ ವ್ಯವಹಾರಗಳ ಕುರಿತು ಮಾತುಗಳು ಕೇಳಿಬರುತ್ತಿವೆ. ಇದು ಅತ್ಯಂತ ಸಂಕ್ರಮಣದ ಸ್ಥಿತಿಯಾಗಿದೆ ಎಂದು ಹೇಳಿದರು.
ಪೀಠದ ಸಂಚಾಲಕರಾದ ಡಾ.ಎಫ್.ಟಿ.ಹಳ್ಳಿಕೇರಿ ಅವರು ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ.ಎಸ್.ಎಸ್.ಅಂಗಡಿ ವಂದಿಸಿದರು. ವಿದ್ಯಾರ್ಥಿ ಬಾಣದ ಮಂಜುನಾಥ ನಿರೂಪಿಸಿದರು. ಹಾಲುಮತ ಪೀಠದ ಆರಂಭದ ದಿನಗಳಲ್ಲಿ ೫ ಲಕ್ಷ ರೂಪಾಯಿಗಳು ದೇಣಿಗೆ ನೀಡಿ ಪೀಠದ ಪೋಷಣೆಗೆ ಕಾರಣರಾದ ಹೊಸಪೇಟೆ ಉದ್ಯಮಿಗಳಾದ ಶ್ರೀ ದೀಪಕ್ಕುಮಾರ ಸಿಂಗ್ ಅವರನ್ನು ಮತ್ತು ಹಾಲುಮತ ಹಾಡುಗಾರ ಚಿಕ್ಕಣ್ಣ ಎಣ್ಣೆಕಟ್ಟಿ ಅವರನ್ನು ಕುಲಪತಿಯವರು ವೇದಿಕೆಯಲ್ಲಿ ಗೌರವಿಸಿದರು.